‘ಅಗ್ನಿಪಥ್’ ವಿರುದ್ಧ ಹಿಂಸಾತ್ಮಕ ಹೋರಾಟ: ಇಂದು ಕಾಂಗ್ರೆಸ್ ಹೆಣೆದ ಟೂಲ್ ಕಿಟ್ ಎಂದ ಬಿಜೆಪಿ

ತೆಲಂಗಾಣ, ಸಿಕಂದರಾಬಾದ್, ಬಿಹಾರದಲ್ಲಿ ತನಿಖೆ ಸಂದರ್ಭದಲ್ಲಿ ಲಭಿಸಿದ ಮಾಹಿತಿಗಳಿಂದ ಇದು #CongressToolKit ಎಂಬುದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Jun 20, 2022, 01:48 PM IST
  • ದೇಶದ ಅಖಂಡತೆಗೆ ಭಂಗ ತರುವುದು ಹಾಗೂ ಆಂತರಿಕ ಶಾಂತಿ ಕದಡುವುದು ಮಾತ್ರ ಕಾಂಗ್ರೆಸ್ ಉದ್ದೇಶ
  • ಶಾಂತಿಯುತ ಪ್ರತಿಭಟನೆ ಮೂಲಕ ಬಿಜೆಪಿ ಸರ್ಕಾರ ಉರುಳಿಸಿ ಎಂಬ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು
  • ಸೇನೆ ಸೇರುವವರು ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿರಲಿಲ್ಲ, ಇವರು ಯೋಧರಾಗುವವರಲ್ಲ ಕಾಂಗ್ರೆಸ್ ಚೇಲಾಗಳು
‘ಅಗ್ನಿಪಥ್’ ವಿರುದ್ಧ ಹಿಂಸಾತ್ಮಕ ಹೋರಾಟ: ಇಂದು ಕಾಂಗ್ರೆಸ್ ಹೆಣೆದ ಟೂಲ್ ಕಿಟ್ ಎಂದ ಬಿಜೆಪಿ   title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಹೋರಾಟ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಹೆಣೆದ ಟೂಲ್ ಕಿಟ್ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದ ಅಖಂಡತೆಗೆ ಭಂಗ ತರುವುದು ಹಾಗೂ ಆಂತರಿಕ ಶಾಂತಿ ಕದಡುವುದು ಮಾತ್ರ ಕಾಂಗ್ರೆಸ್ ಉದ್ದೇಶ.  #AgnipathScheme ಮೂಲಕ ದೇಶದ ಯುವಜನತೆ ರಾಷ್ಟ್ರವಾದಿಗಳಾಗುತ್ತಾರೆ ಎಂಭ ಭಯವೇ?’ ಎಂದು ಪ್ರಶ್ನಿಸಿದೆ.

ಶಾಂತಿಯುತ ಪ್ರತಿಭಟನೆ ಮೂಲಕ ಸರ್ಕಾರ ಉರುಳಿಸಿ ಎಂದು ಸೇನಾ ಆಕಾಂಕ್ಷಿಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ‘ದೇಶವೇ ಹೊತ್ತಿ ಉರಿಯುವಂತ ಪರಿಸ್ಥಿತಿ‌ ನಿರ್ಮಾಣ ಮಾಡಿದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನೀಡಿರುವ ಹೇಳಿಕೆ ಏನನ್ನು ಸೂಚಿಸುತ್ತದೆ? ಶಾಂತಿಯುತ ಪ್ರತಿಭಟನೆ ಮಾಡಿ, ಆದರೆ ಹೋರಾಟ ನಿಲ್ಲಿಸಬೇಡಿ ಎಂದು ಹೇಳುವುದು ಉದ್ರಿಕ್ತರನ್ನು ಇನ್ನಷ್ಟು ಪ್ರಚೋದಿಸಿದಂತಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: PHOTOS: ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

‘ತೆಲಂಗಾಣ, ಸಿಕಂದರಾಬಾದ್, ಬಿಹಾರದಲ್ಲಿ ತನಿಖೆ ಸಂದರ್ಭದಲ್ಲಿ ಲಭಿಸಿದ ಮಾಹಿತಿಗಳಿಂದ ಇದು #CongressToolKit ಎಂಬುದು ಸ್ಪಷ್ಟವಾಗುತ್ತಿದೆ. ಬಂಧಿತರಾದವರ ಮೊಬೈಲ್‌ಗೆ ಹಿಂಸಾಚಾರವನ್ನು ಎಲ್ಲಿ, ಹೇಗೆ ನಡೆಸಬೇಕೆಂಬ ಬಗ್ಗೆ‌ ಪೂರ್ವ ನಿರ್ದೇಶಿತ ಮಾಹಿತಿ ರವಾನೆಯಾಗಿದೆ.‌ ಇದು ಪ್ರತಿಪಕ್ಷಗಳ ಹೋರಾಟದ ನೀತಿಯೇ? "ಪ್ರತಿಭಟನೆಗೆ ಬರುವಾಗ ಪೆಟ್ರೋಲ್ ಬಾಂಬ್, ಸೀಮೆ ಎಣ್ಣೆ, ಹಳೆ ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ, ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚಲು ಅನುಕೂಲವಾಗುತ್ತದೆ" ಎಂಬ ಸಂದೇಶ ಪ್ರತಿಭಟನಾಕಾರರ ನಡುವೆ ವಿನಿಮಯವಾಗಿದೆ. ಸೇನೆ ಸೇರ ಬಯಸುವವರು ಹೀಗೆ ಯೋಚಿಸಲು ಹೇಗೆ ಸಾಧ್ಯ? ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು!’ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.

‘ವಿಶ್ವದ ಅಗ್ರಮಾನ್ಯ ಸೇನಾ ಯೋಧರು ಹಾಗೂ ಭಾರತೀಯ ಯೋಧರ ನಡುವೆ ಸರಾಸರಿ ವಯೋಮಾನದ ವಿಚಾರದಲ್ಲಿ ಏರುಪೇರು ಇದೆ. ಅಮೆರಿಕಾದ ಯೋಧರ ಸರಾಸರಿ ವಯಸ್ಸು 28, ಇಂಗ್ಲೆಂಡ್ 26, ಆದರೆ ಭಾರತದ ಯೋಧರ ಸರಾಸರಿ ವಯಸ್ಸು 32 ವರ್ಷ. ಆದರೆ, ಅಗ್ನಿಪಥ್ ಯೋಜನೆಯಿಂದ ಈ ಅಂತರ ಕಡಿಮೆಯಾಗಲಿದೆ. ವಿಶ್ವದ ಅತ್ಯಂತ ಯುವ ಸೇನೆ ಭಾರತದ್ದಾಗಲಿದೆ’ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರಿಗೆ ಮೋದಿ ಭೇಟಿ : ಬಿಬಿಎಂಪಿ ಚುನಾವಣೆಗೆ ಬಿಜೆಪಿ ಬ್ರಹ್ಮಾಸ್ತ್ರ!

‘ಖಾಸಗಿ ಸೇನಾ ತರಬೇತಿ ಕೇಂದ್ರಗಳು ಆರ್ಮಿ ಕೋಚಿಂಗ್ ಸೆಂಟರ್ ಹೆಸರಿನಲ್ಲಿ ದಂಧೆ ಮಾಡುತ್ತಿದ್ದವು. ಈ ಸಂಸ್ಥೆಗಳು ಅಗ್ನಿಪಥ್ ಯೋಜನೆಯಿಂದ ತಮ್ಮ ದಂಧೆಗೆ‌ ಪೆಟ್ಟು ಬೀಳುತ್ತದೆ ಎಂಬ ಭೀತಿಯಿಂದ #Agnipath ವಿರುದ್ಧ ಯುವಜನತೆಯನ್ನು ಎತ್ತಿಕಟ್ಟುತ್ತಿದ್ದಾರೆ. ಕಾಂಗ್ರೆಸ್‌ ಈ ದಂಧೆಕೋರರಿಗೆ ಬೆಂಗಾವಲಾಗಿ ನಿಲ್ಲುತ್ತಿದೆ’ ಎಂದು ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News