ಡಿಸಿಎಂ ಅಶ್ವತ್ಥನಾರಾಯಣ ಪತ್ರಕ್ಕೆ ಕೇಂದ್ರ ಸ್ಪಂದನೆ: ಯುಎಇ ಕನ್ನಡಿಗರ ಏರ್‌ಲಿಫ್ಟ್‌ಗೆ ವ್ಯವಸ್ಥೆ

ಸದ್ಯ ಕರ್ನಾಟಕದ ಮೂಲದ 1904 ಮಂದಿ ಯುಎಇಯಲ್ಲಿದ್ದು, ಈ ಪೈಕಿ 121 ಗರ್ಭಿಣಿಯರಿದ್ದಾರೆ. ವೀಸಾ ಅವಧಿ ಮುಗಿದ 522 ನಿರೋದ್ಯೋಗಿಗಳು, 157 ರೋಗಿಗಳು ಇತರ 95 ಮಂದಿ ಇತರೆ ಕಾರಣಗಳಿಂದ ವಾಪಸ್‌ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ವಾಪಸಾಗಲು ಸರ್ಕಾರದ ನೆರವನ್ನು ಕೋರಿರುತ್ತಾರೆ.  

Last Updated : May 7, 2020, 08:31 AM IST
ಡಿಸಿಎಂ ಅಶ್ವತ್ಥನಾರಾಯಣ ಪತ್ರಕ್ಕೆ ಕೇಂದ್ರ ಸ್ಪಂದನೆ: ಯುಎಇ ಕನ್ನಡಿಗರ  ಏರ್‌ಲಿಫ್ಟ್‌ಗೆ  ವ್ಯವಸ್ಥೆ title=

ಬೆಂಗಳೂರು: ಕೋವಿಡ್‌ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿ ದೇಶಕ್ಕೆ ವಾಪಸಾಗಲು ಬಯಸಿರುವ ದುಬೈ ಕನ್ನಡಿಗರಿಗೆ ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಮೇ 10 ಅಥವಾ 11ಕ್ಕೆ ಏರ್‌ಲಿಫ್ಟ್ ಮಾಡಲು ವ್ಯವಸ್ಥೆ ಕಲ್ಪಿಸಲಿದೆ. 

ಭಾನುವಾರವಷ್ಟೇ ದುಬೈ ಕನ್ನಡಿಗರ ಜತೆ ವೀಡಿಯೋ ಸಂವಾದ ನಡೆಸಿದ್ದ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) , ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಕಡೆಯಿಂದ ಆಗುವ ಎಲ್ಲ ಸಹಾಯ ಮಾಡುವುದಾಗಿ ಭರವಸೆ  ನೀಡಿದ್ದರು. ಅದರಂತೆ ಕೇಂದ್ರ ಸರ್ಕಾರಕ್ಕೆ  ಅವರು ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ವಿಮಾನದ ವ್ಯವಸ್ಥೆ ಮಾಡಿದೆ. ಜತೆಗೆ ನಗ್ಮಾ ಮಲಿಕ್‌ ಅವರನ್ನು ರಾಜ್ಯದ ಸಮನ್ವಯಕಾರರನ್ನಾಗಿ ನೇಮಿಸಿದೆ.  ಇತರೆ ರಾಷ್ಟ್ರಗಳಲ್ಲಿ ಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ವಾಪಸ್‌ ಕರೆತರಲು ಅವರು ಸಹಕರಿಸಲಿದ್ದಾರೆ. 

ಮಧುಮೇಹದಂಥ ಕಾಯಿಲೆಗೆ ಕ್ರೀಡೆಯೇ ಮದ್ದು: ಡಾ. ಅಶ್ವತ್ಥನಾರಾಯಣ

ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೈಶಂಕರ್‌ ಅವರಿಗೆ ಪತ್ರ ಬರೆದಿದ್ದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ "ವಿಶ್ವದ ನಾನಾ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್‌ ಕರೆತರಲು ವಿದೇಶ ವ್ಯವಹಾರಗಳ ಸಚಿವಾಲಯ ವಿಮಾನದ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ವಿಷಯ. ಇದೇ ರೀತಿ ಅರಬ್‌ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡಿಗರನ್ನು ವಾಪಸ್‌ ಕರೆತರಲು ಈವರೆಗೆ ಯಾವುದೇ ವಿಮಾನದ  ವ್ಯವಸ್ಥೆ ಆಗಿಲ್ಲ.  ಈ ಸಂಬಂಧ ಅಗತ್ಯ ನೆರವು ನೀಡಿ ಸಹಕರಿಸಿ,"ಎಂದು ಮನವಿ ಮಾಡಿದ್ದರು.

ಅಲ್ಲದೆ ಸದ್ಯ ಕರ್ನಾಟಕದ ಮೂಲದ 1904 ಮಂದಿ ಯುಎಇಯಲ್ಲಿದ್ದು, ಈ ಪೈಕಿ 121 ಗರ್ಭಿಣಿಯರಿದ್ದಾರೆ. ವೀಸಾ ಅವಧಿ ಮುಗಿದ 522 ನಿರೋದ್ಯೋಗಿಗಳು, 157 ರೋಗಿಗಳು ಇತರ 95 ಮಂದಿ ಇತರೆ ಕಾರಣಗಳಿಂದ ವಾಪಸ್‌ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ವಾಪಸಾಗಲು ಸರ್ಕಾರದ ನೆರವನ್ನು ಕೋರಿರುತ್ತಾರೆ. ಅವರನ್ನು ಕರ್ನಾಟಕಕ್ಕೆ ವಾಪಸ್‌ ಕರೆತರಲು ವಿದೇಶ ವ್ಯವಹಾರಗಳ ಸಚಿವಾಲಯ ಸೂಕ್ತ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದರು.

ಡಾ. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ (DV Sadanandagowda) ಅವರು, ಅರಬ್ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೆ ಭಾರತಕ್ಕೆ ಮರಳಲು ವಿಮಾನ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಾವು ಕೂಡ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಿಗೆ ಪತ್ರ ಬರೆದಿರುವುದಲ್ಲದೆ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಯುಎಇ- ಮಂಗಳೂರು ವಿಮಾನದ ವ್ಯವಸ್ಥೆಗೆ ಆದ್ಯತೆ ನೀಡಲು ಕೋರಿರುವುದಾಗಿ ತಿಳಿಸಿದ್ದಾರೆ.

ದುಬೈನಲ್ಲಿ ಕನ್ನಡಿಗರಿಗೆ ಹೆಲ್ಪ್‌ಲೈನ್‌
ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ನೆರವಿಗೆ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡ 20 ಜನರ ಸಮಾನ ಮನಸ್ಕರ ತಂಡ 'ಕನ್ನಡಿಗ ಹೆಲ್ಪ್‌ ಲೈನ್‌- ವೆಬ್‌ಸೈಟ್‌' ಆರಂಭಿಸಿದೆ.  ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಸಹಾಯ ಕೋರಿದವರಿಗೆ ಆಹಾರ ಕಿಟ್‌ಗಳನ್ನು ಒದಗಿಸಲಾಗುತ್ತಿದೆ.  ಆರೋಗ್ಯ ಸಮಸ್ಯೆ ಇರುವವರಿಗೆ ಔಷಧ ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಕಾನೂನಿನ ಸಮಸ್ಯೆ ಇದ್ದವರ ಪರವಾಗಿಯೂ ಈ ಹೆಲ್ಪ್‌ ಲೈನ್‌ ನೆರವಾಗುತ್ತಿದೆ.

Trending News