ಸುಮಲತಾ ವಿರುದ್ಧ ರೇವಣ್ಣ ಹೇಳಿಕೆ ಖಂಡಿಸಿದ ಜಗ್ಗೇಶ್; ತೀವ್ರ ತರಾಟೆ

ರೇವಣ್ಣರವರೇ ನೀವು ಸಾಮಾನ್ಯ ಜನರಲ್ಲ! ಈ ದೇಶದ ಮಾಜಿ ಪ್ರಧಾನಿಯ ಮಗ. ಸಂವಿಧಾನ ಭಾರತದ ಎಲ್ಲ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ಹಾಗಂತ ಇನೊಬ್ಬರಿಗೆ ಮನಸಿಗೆ ಘಾಸಿ ಮಾಡಬಾರದು ಎಂದು ಜಗ್ಗೇಶ್ ಹೇಳಿದ್ದಾರೆ.

Last Updated : Mar 9, 2019, 01:58 PM IST
ಸುಮಲತಾ ವಿರುದ್ಧ ರೇವಣ್ಣ ಹೇಳಿಕೆ ಖಂಡಿಸಿದ ಜಗ್ಗೇಶ್; ತೀವ್ರ ತರಾಟೆ title=

ಬೆಂಗಳೂರು: ದಿವಂಗತ ನಟ ಅಂಬರೀಶ್ ಪತ್ನಿ ಸುಮಲತಾ ವಿರುದ್ಧ ಸಚಿವ ಹೆಚ್.ಡಿ.ರೇವಣ್ಣ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿರುವ ನವರಸನಾಯಕ ಜಗ್ಗೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ಸುಮಲತಾ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ "ಗಂಡ ಸತ್ತು ಒಂದೆರದು ತಿಂಗಳೂ ಆಗಿಲ್ಲ. ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು" ಎಂದು ಸುಅಮಲತಾ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಶುಕ್ರವಾರ ಅವಮಾನ ಮಾಡಿದ್ದರು. 

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಟ ಜಗ್ಗೇಶ್, ರೇವಣ್ಣರವರೇ ನೀವು ಸಾಮಾನ್ಯ ಜನರಲ್ಲ! ಈ ದೇಶದ ಮಾಜಿ ಪ್ರಧಾನಿಯ ಮಗ. ಸಂವಿಧಾನ ಭಾರತದ ಎಲ್ಲ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ಹಾಗಂತ ಇನೊಬ್ಬರಿಗೆ ಮನಸಿಗೆ ಘಾಸಿ ಮಾಡಬಾರದು. ನಿಮ್ಮ ಮನೆಯ ಸದಸ್ಯರಾಗಿದ್ದರೆ ಹೀಗೆ ಮಾತಾಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂಬಿ ಮೌನದಿಂದ ಜೆಡಿಎಸ್​​ನ ಪುಟ್ಟರಾಜ ಗೆದ್ದದ್ದು ಅಂತಾ ದೊಡ್ಡಗೌಡರೆ ಹೇಳಿದ್ದರು. ಇದನ್ನು ನೆನಪಿಡಿ!  ನನ್ನ ಪಕ್ಷ ಬೇರೆ! ಆದರೆ, ಸುಮಲತಾ ನನ್ನ ಉದ್ಯಮದ ಹೆಣ್ಣು..ಅವರನ್ನು ಗೌರವಿಸಿ ಎಂದು ಟ್ವೀಟ್ ಮಾಡಿದ್ದಾರೆ. 

ಮುಂದುವರೆದು, ಅಂಬಿ ಸತ್ತಾಗ ಸುತ್ತಲು ಇದ್ದ ಉದ್ಯಮದ ಸನ್ಮಿತ್ರರೇ ಈಗಲಾದರು ಬಾಯಿತೆಗೆದು ಇಂಥ ಮಾತುಗಳನ್ನು ಖಂಡಿಸಬೇಕು! ಆಗಲೆ ಕನ್ನಡ ಚಿತ್ರರಂಗಕ್ಕೆ 40ವರ್ಷ ದುಡಿದ ಹಿರಿಯಣ್ಣ ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ರಾಜಕೀಯ ಪಕ್ಷಗಳು ನೂರಿರಲಿ. ನಾವು ಶಾರದೆಯ ಮಕ್ಕಳು, ಚಿತ್ರರಂಗ ಇದನ್ನು ನೆನಪಿಡಬೇಕು ಎಂದು ಸುಮಲತಾ ಪರವಾಗಿ ಚಿತ್ರರಂಗ ನಿಲ್ಲುವಂತೆ ಜಗ್ಗೇಶ್ ಮನವಿ ಮಾಡಿದ್ದಾರೆ.

Trending News