"ಜನರ ಅನುಕೂಲಕ್ಕೆ ಆಸ್ಪತ್ರೆ ಕಟ್ಟಿಸಿರುವ ಲೀಲಾವತಿ ಅವರ ಮನಸ್ಸು ದೊಡ್ಡದು"

'ನಿಮ್ಮ ಮುಖದಲ್ಲಿನ ಕಳೆ ಅತ್ಯಂತ  ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು ಎಂದು  ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಎಂ.ಲೀಲಾವತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಿದ ಮಾತುಗಳಿವು.

Written by - Prashobh Devanahalli | Edited by - Manjunath N | Last Updated : Sep 28, 2022, 09:19 PM IST
  • ಲೀಲಾವತಿ ಅವರ ಅಭಿನಯದ ಸಿನಿಮಾಗಳನ್ನು ನೋಡಿದರೆ, ಅವರಿಗೆ ಸರಿಸಾಟಿ ಯಾರೂ ಇಲ್ಲ.
  • ಅವರ ನಟನೆ ಮನೋಜ್ಞವಾದುದು.
"ಜನರ ಅನುಕೂಲಕ್ಕೆ ಆಸ್ಪತ್ರೆ ಕಟ್ಟಿಸಿರುವ ಲೀಲಾವತಿ ಅವರ ಮನಸ್ಸು ದೊಡ್ಡದು" title=

ಬೆಂಗಳೂರು: 'ನಿಮ್ಮ ಮುಖದಲ್ಲಿನ ಕಳೆ ಅತ್ಯಂತ  ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು ಎಂದು  ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಎಂ.ಲೀಲಾವತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಿದ ಮಾತುಗಳಿವು.

ಅವರು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಇಂದು ಡಾ:ಎಂ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ: IOCL ನಲ್ಲಿ 1500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

ಚಿತ್ರಜಗತ್ತಿನ ಚಿರಸ್ಥಾಯಿ ತಾರೆ. ಎವರ್ ಗ್ರೀನ್ ಸ್ಟಾರ್ ಲೀಲಾವತಿ ಅವರು ಎಲ್ಲರಿಗೂ ಅಕ್ಕ. ಲೀಲಾವತಿ ಅವರು ಅಭಿನಯಿಸಿರುವ ಚಿತ್ರಗಳನ್ನೂ ನೋಡದೇ ಇರುವವರು ಕರ್ನಾಟಕದಲ್ಲಿ ಬಹಳ ಕಡಿಮೆ. ಅವರದ್ದು ಅದ್ಭುತವಾದ ಅಭಿನಯ. ಚಲನಚಿತ್ರದಲ್ಲಿ ಬಹಳ ದಿನ ತಾರೆಯಾಗಿ ಉಳಿಯುವುದು ಕಷ್ಟ. ಆದರೆ ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸಿ, ಅಷ್ಟೇ ಸಮಾಧಾನದಿಂದ ಸಕಲರ ಲೇಸು ಬಯಸುವ ದೊಡ್ಡ ಗುಣ ಹೊಂದಿರುವ ಲೀಲಾವತಿಯವರು ಸೋಲದೇವನಹಳ್ಳಿಯಲ್ಲಿ ನೆಲೆಸಿರುವುದು ದೇವರೇ ಅವನ ಪರವಾಗಿ ಕಳುಹಿಸಿಕೊಟ್ಟಂತಿದೆ ಎಂದರು.

ದೂರದ ಶಾಂತ ಪ್ರದೇಶವಾದ, ನಿಸರ್ಗ ಸಂಪತ್ತಿರುವ ಈ ಸ್ಥಳದಲ್ಲಿ ತಮ್ಮ ತೋಟವನ್ನು ಲೀಲಾವತಿಯವರು ಮಾಡಿಕೊಂಡಿದ್ದಾರೆ. ದೊಡ್ಡ  ಆತ್ಮಶಕ್ತಿ ಅವರಲ್ಲಿದೆ.ಅಸಾಧ್ಯವಾದುದನ್ನು ಮಾಡಿ ಸಾಧಿಸಿದ್ದಾರೆ. ಅಸಾಧ್ಯವಾದುದನ್ನು ಮಾಡಿದರೆ ಸಾಧನೆ ಆಗುವುದು ಎಂದರು.

ಮೇರು ಕಲಾವಿದೆ

ಲೀಲಾವತಿ ಅವರ ಅಭಿನಯದ  ಸಿನಿಮಾಗಳನ್ನು ನೋಡಿದರೆ, ಅವರಿಗೆ ಸರಿಸಾಟಿ ಯಾರೂ ಇಲ್ಲ. ಅವರ ನಟನೆ ಮನೋಜ್ಞವಾದುದು. ಯಾವ ಪಾತ್ರವಾದರೂ ಪರಕಾಯಪ್ರವೇಶ ಮಾಡಿ ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ನೀಡಿರುವ ಮೇರು ಕಲಾವಿದೆ ಎಂದರು.

ಹೃದಯ ಶ್ರೀಮಂತಿಕೆ

ನೆಲಮಂಗಲದಲ್ಲಿ ಎಷ್ಟು  ಜನ ಶ್ರೀಮಂತರಿರಬಹುದು, ಆದರೆ ಯಾರೂ ಆಸ್ಪತ್ರೆ, ಶಾಲೆ ಕಟ್ಟಿಸಬೇಕೆಂದು ವಿಚಾರ ಮಾಡಿರಲಿಲ್ಲ. ತಾಯಿ ಲೀಲಾವತಿಯವರು ಇದನ್ನು ಕಟ್ಟಿಸಿ ಅವರ ಹೃದಯ ಶ್ರೀಮಂತಿಕೆ ತೋರುವುದರ ಜೊತೆಗೆ ನಾವೆಲ್ಲಾ ಎಷ್ಟು ಸಣ್ಣವರೆಂದೂ ತೋರಿಸಿದ್ದಾರೆ.  ಆಸ್ಪತ್ರೆಯಲ್ಲಿ ಬಡವರಿಗೆ, ಬಡ ಮಕ್ಕಳಿಗೆ ಚಿಕಿತ್ಸೆ ಸಿಗಬೇಕು ಎಂದು  ಸರ್ಕಾರಗಳು ಮಾಡಬೇಕಿರುವ ಕೆಲಸ ಮಾಡಿದ್ದೀರಿ. ಇಂಥ ಕಾರ್ಯಕ್ರಮಕ್ಕೆ ನಾನು ಬರದೇ ಹೋದರೆ ನನ್ನ ಕರ್ತವ್ಯಕ್ಕೆ ಚ್ಯುತಿಯಾಗುತ್ತಿತ್ತು. ಈ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ  ಪರಿವರ್ತನೆಯಾಗಬೇಕು. ಅದನ್ನು ಖಂಡಿತವಾಗಿ ಮಾಡುವುದಲ್ಲದೆ, ವೈದ್ಯರ ನೇಮಕಾತಿ ಮುಂತಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದನ್ನೂ ಓದಿ: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?

ಪಶುಚಿಕಿತ್ಸಾಲಯ ಮಂಜೂರು ಮಾಡಲಾಗುವುದು.

ಸಮಾಜದಿಂದ ಪಡೆದಿದ್ದನ್ನು ಇಲ್ಲಿನ ಸಮಾಜಕ್ಕೆ ಬಿಟ್ಟು ಹೋದರೆ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಸರಿದೂಗುತ್ತದೆ. ಪಶು ಚಿಕಿತ್ಸಾ¯ಯವನ್ನೂ ಕಟ್ಟಿಸಿಕೊಡುವುದಾಗಿ ಹೇಳುವ ಲೀಲಾವತಿಯವರ ಕೊಡಬೇಕೆನ್ನುವ ಹಂಬಲ ಅಪರೂಪದ್ದು. ಬಹಳ ಜನ ಬೇಡುವವರಿದ್ದಾರೆ. ಕೊಡಬೇಕೆನ್ನುವವರು ವಿರಳ. ನೀಡುವವರು ಎಂದಿಗೂ ಶ್ರೀಮಂತರು. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಸರ್ವಜ್ಞ ಹೇಳಿದ್ದಾನೆ. ಅದನ್ನು ಲೀಲಾವತಿ ಅವರು ನಿಜ ಮಾಡಿ ತೋರಿಸಿದ್ದಾರೆ. ಲೀಲಾವತಿಯವರ ಬದುಕು ಅನುಕರಣೀಯ.ಲೀಲಾವತಿಯವರ ಬೇಡಿಕೆಯಂತೆ ಇಲ್ಲಿಗೆ ಖಂಡಿತವಾಗಿಯೂ ಪಶುಚಿಕಿತ್ಸಾಲಯವನ್ನೂ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಉಪಕ್ರಮಗಳು

ತಲಾ 7-8 ಕೋಟಿ ರೂ.ಗಳ ವೆಚ್ಚದಲ್ಲಿ ಸರ್ಕಾರ ಈ ವರ್ಷ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ. 71 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.  60 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ತೊಂದರೆಗಳಿಗೆ ಚಿಕಿತ್ಸೆ ನಿಡುವ ವಿನೂತನ  ಉಪಕ್ರಮ ಕೈಗೊಳ್ಲಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣು ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆಗೆ ಅವಕಾಶ, ಕಿವುಡರಿಗೆ ಕಾಕ್ಲಿಯರ್ ಇಂಪ್ಲಾಂಟ್ ವೆಚ್ಚವನ್ನು ಸರ್ಕರವೇ ಭರಿಸುವ ಹೊಸ ಯೋಜನೆಗಳನ್ನು  ಜಾರಿಗೆ ತರಲಾಗಿದೆ.ಕ್ಯಾನ್ಸರ್ ಹಾಗೂ ಕಿಡ್ನಿ ತೊಂದರೆ ಇರುವವರಿಗೆ ಕೀಮೋ ಹಾಗೂ ಡಯಾಲಿಸಿಸ್ ಸೈಕಲ್‍ಗಳನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ  ಬಹಳ ದೊಡ್ಡ ಕೆಲಸಗಳು ಸಚಿವ ಡಾ: ಸುಧಾಕರ್ ಅವರ ನೇತೃತ್ವದಲ್ಲಿ ಆಗುತ್ತಿದೆ ಎಂದರು.

ಈ ಕೇಂದ್ರದ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.ವಿನೋದ್ ರಾಜ್ ಅವರ ಬೆಂಬಲ ಇದರಲ್ಲಿ ದೊಡ್ಡ ಮಟ್ಟದಲ್ಲಿದೆ ಎಂದರು. ಸೋಲದೇವನಹಳ್ಳಿ ದೇವರೂ ಇಲ್ಲಿನ ನಿಸರ್ಗ ನೋಡಿ ಸೋತಿರುವ ಸ್ಥಳ ಇದು. ಭಗವಂತನೂ ಪುಣ್ಯಭೂಮಿಯಲ್ಲಿ, ಸಾತ್ವಿಕತೆ ಇರುವ ಮಣ್ಣಿನಲ್ಲಿ, ಒಳ್ಳೆಯತನವಿದ್ದಲ್ಲಿ ಆತನ ಪಾದಸ್ಪರ್ಶವಾಗುತ್ತದೆ. ದೇವರೂ ಸೋತಿರುವಹಳ್ಳಿ ಇದು ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.  

ಕಾರ್ಯಕ್ರಮದಲ್ಲಿ ಡಾ: ಎಂ. ಲೀಲಾವತಿ, ಶಾಸಕರಾದ ಶ್ರೀನಿವಾಸಮೂರ್ತಿ, ನಾಗರಾಜ್, ಗಡಿ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಡಾ: ಸಿ. ಸೋಮಶೇಖರ್ ಮತ್ತಿತರರು  ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News