ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟ ಹಂಚಿಕೆಯೂ ಆಗಬೇಕು: ಸಚಿವ ಎಂ ಬಿ ಪಾಟೀಲ

ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ಸರಕಾರ ತೀರ್ಮಾನಿಸಿದೆ. ಇಲ್ಲಿ ನಾವೆಲ್ಲ್ರರೂ ಒಂದು ಎಂದು ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದ್ದಾರೆ.

Written by - Yashaswini V | Last Updated : Aug 18, 2023, 01:14 PM IST
  • ಕಾವೇರಿ ನೀರಿನ ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನ್ಯಾಯವಾದಿ ಫಾಲಿ ನಾರಿಮನ್‌ ರಾಜ್ಯದ ಪರವಾಗಿ ವಾದಿಸಿದ್ದರು.
  • ಆಗ ನಾನೂ ಸೇರಿದಂತೆ ಅಧಿಕಾರಿಗಳು ಅವರಿಗೆ ರಾಜ್ಯದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟೆವು.
  • ಇದರಿಂದಾಗಿ ಬೆಂಗಳೂರಿಗೆ ಹೆಚ್ಚುವರಿಯಾಗಿ 17 ಟಿಎಂಸಿ ನೀರು ಸಿಕ್ಕಿತು.
ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟ ಹಂಚಿಕೆಯೂ ಆಗಬೇಕು: ಸಚಿವ ಎಂ ಬಿ ಪಾಟೀಲ title=

ಬೆಂಗಳೂರು: ಸಹಜವಾಗಿ ಮಳೆಯಾದ ವರ್ಷದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆ ಸರಾಗವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಮಳೆ ಕಡಿಮೆಯಾದ ವರ್ಷಗಳಲ್ಲಿ ಎರಡೂ ರಾಜ್ಯಗಳು ಸಂಕಷ್ಟವನ್ನು ಕೂಡ ಪರಸ್ಪರ ಹಂಚಿಕೊಳ್ಳಬೇಕು. ಆಗ ನೀರು ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ, ಈಗ ಎರಡೂ ರಾಜ್ಯಗಳ ನಡುವೆ ಮತ್ತೆ ವಿವಾದ ತಲೆದೋರಿರುವ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ವರ್ಷ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಈ ಸಂಬಂಧವಾಗಿ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ಸರಕಾರ ತೀರ್ಮಾನಿಸಿದೆ. ಇಲ್ಲಿ ನಾವೆಲ್ಲ್ರರೂ ಒಂದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ- ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಪ್ರಕರಣ ತನಿಖೆಗೆ ಸಮಿತಿ‌ ರಚನೆ 

ಹಿಂದೆ ನಾನೂ ಸಹ ಜಲಸಂಪನ್ಮೂಲ ಸಚಿವನಾಗಿದ್ದೆ. ಸಂಕಷ್ಟದ ವರ್ಷದಲ್ಲಿ ಆಗಿಂದಾಗ್ಗೆ ಸಮಸ್ಯೆ ಉದ್ಭವಿಸಿ, ನ್ಯಾಯಾಲಯದ ಮೆಟ್ಟಿಲಿನಲ್ಲಿ ನಿಲ್ಲಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ತಮಿಳುನಾಡಿನ ಅಣೆಕಟ್ಟುಗಳಲ್ಲಿರುವ ನೀರಿನ ಸಂಗ್ರಹ, ಅವರ ಅಚ್ಚುಕಟ್ಟು ಪ್ರದೇಶ, ಅವರಿಗೆ ಬೇಕಾದ ನೀರಿನ ಪ್ರಮಾಣ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕಾವೇರಿ ನೀರಿನ ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನ್ಯಾಯವಾದಿ ಫಾಲಿ ನಾರಿಮನ್‌ ರಾಜ್ಯದ ಪರವಾಗಿ ವಾದಿಸಿದ್ದರು. ಆಗ ನಾನೂ ಸೇರಿದಂತೆ ಅಧಿಕಾರಿಗಳು ಅವರಿಗೆ ರಾಜ್ಯದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟೆವು. ಇದರಿಂದಾಗಿ ಬೆಂಗಳೂರಿಗೆ ಹೆಚ್ಚುವರಿಯಾಗಿ 17 ಟಿಎಂಸಿ ನೀರು ಸಿಕ್ಕಿತು. ಈ ವಿಚಾರದಲ್ಲಿ ಬೆಂಗಳೂರಿನ ಉತ್ತರ ಭಾಗವು ಕಾವೇರಿ ಕೊಳ್ಳಕ್ಕೆ ಬರುವುದಿಲ್ಲ ಎನ್ನುವ ತಮಿಳುನಾಡಿನ ವಾದ ಬಿದ್ದು ಹೋಯಿತು. ಅಂತಿಮವಾಗಿ ಈ ತೀರ್ಪಿನಲ್ಲಿ ರಾಜ್ಯಕ್ಕೆ ಲಾಭವಾಗುವಂತೆ ನೋಡಿಕೊಂಡೆವು. ಇದರಲ್ಲಿ ಯಾರು ಏನೇ ಹೇಳಲಿ, ನಾರಿಮನ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅವರ ಶ್ರಮದಿಂದಾಗಿ ಇಂದು ಬೆಂಗಳೂರಿನ ಬಹುಭಾಗಕ್ಕೆ ಕಾವೇರಿ ನೀರು ಸಿಗುತ್ತಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ- ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ: ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ!

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೆಲವೊಮ್ಮೆ ರಾಜ್ಯದ ಹಿತಕ್ಕೆ ವ್ಯತಿರಿಕ್ತವಾಗಿ ಸೂಚನೆಗಳನ್ನು ನೀಡಿದೆ. ಮಳೆಯ ಕೊರತೆ ಇದ್ದಾಗ ವಸ್ತುಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನ್ಯಾಯವಾಗುತ್ತದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News