ಆಧುನಿಕತೆಯನ್ನು ವಿರೋಧಿಸುವುದರಿಂದ ಮಾತ್ರ ಪರಿಸರ ಸಂರಕ್ಷಣೆಯಾಗಲಾರದು: ಉಲ್ಲಾಸ ಕಾರಂತ

ಅಭಿವೃದ್ಧಿಯ ಜೊತೆಯಲ್ಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಗರೀಕರಣ, ಕೈಗಾರಿಕೀಕರಣ ಹಾಗೂ ಅಭಿವೃದ್ದಿಯಿಂದ ಹುಲಿಯ ಜನಸಂಖ್ಯೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.

Last Updated : Oct 11, 2020, 04:20 PM IST
  • ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಳನದಿಂದ ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯ- ಉಲ್ಲಾಸ್‌ ಕಾರಂತ್
  • ಅಭಿವೃದ್ಧಿಯ ಜೊತೆಯಲ್ಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ.
  • ಉದಾಹರಣೆಗೆ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಗರೀಕರಣ, ಕೈಗಾರಿಕೀಕರಣ ಹಾಗೂ ಅಭಿವೃದ್ದಿಯಿಂದ ಹುಲಿಯ ಜನಸಂಖ್ಯೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ
ಆಧುನಿಕತೆಯನ್ನು ವಿರೋಧಿಸುವುದರಿಂದ ಮಾತ್ರ ಪರಿಸರ ಸಂರಕ್ಷಣೆಯಾಗಲಾರದು: ಉಲ್ಲಾಸ ಕಾರಂತ title=

ಬೆಂಗಳೂರು: ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಳನದಿಂದ ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯವಿದ್ದು, ಕೇವಲ ಆಧುನಿಕತೆಯನ್ನು ವಿರೋಧಿಸುವುದರಿಂದಲೇ ಪರಿಸರ (Environment) ಸಂರಕ್ಷಣೆ ಆಗಲಾರದು ಎಂದು ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಜೀವಶಾಸ್ತ್ರಜ್ಞ ಉಲ್ಲಾಸ್‌ ಕಾರಂತ್ (Ullas Karanth) ಅಭಿಪ್ರಾಯಪಟ್ಟರು. 

ಅಭಿವೃದ್ದಿ ಹಾಗೂ ಸಂರಕ್ಷಣೆಯಲ್ಲಿ ಸಮತೋಲನ – ನೀತಿ ನಿರೂಪಣೆಯಲ್ಲಿ ವೈಜ್ಞಾನಿಕ ವಿಧಾನದ ಬಳಕೆ ಎಂಬ ವಿಚಾರದ ಕುರಿತು 'ಅನಂತಕುಮಾರ್ ಪ್ರತಿಷ್ಠಾನ' (Ananthakumar Foundation) ಬೆಂಗಳೂರಿನಲ್ಲಿ ಆಯೋಜಿಸಿದ್ದ "ದೇಶ ಮೊದಲು" ವೆಬಿನಾರ್ ಸಂವಾದದ ಎರಡನೇ ಸರಣಿಯನ್ನು ಉದ್ಘಾಟಿಸಿ  ಉಲ್ಲಾಸ್‌ ಕಾರಂತ್ ಅವರು ಮಾತನಾಡಿದರು. 

ಅಭಿವೃದ್ಧಿಯ ಜೊತೆಯಲ್ಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಗರೀಕರಣ, ಕೈಗಾರಿಕೀಕರಣ ಹಾಗೂ ಅಭಿವೃದ್ದಿಯಿಂದ ಹುಲಿಯ ಜನಸಂಖ್ಯೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. 1950ರ ದಶಕದಲ್ಲಿ ಬೇಟೆ, ಮರಹನನ ವ್ಯಾಪಕವಾಗಿದ್ದ ಕಾಲದಲ್ಲಿ ದಕ್ಷಿಣ ಕನ್ನಡದ (Dakshina Kannada) ಕಾಡುಗಳಲ್ಲಿ ಕೆಲವೇ ಹುಲಿಗಳಿದ್ದವು. ಮುಂದಿನ ವರ್ಷಗಳಲ್ಲಿ ಹುಲಿಯನ್ನು ಕಾಡಿನಲ್ಲಿ ಕಾಣಲು ಸಾಧ್ಯವೇ ಇಲ್ಲ ಎಂದು ಯಾರಾದರೂ ಹೇಳಬಹುದಾದ ಸ್ಥಿತಿಯಿತ್ತು. ಆದರೆ ಜನಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಿ, ಕಾಡಿನ ವಿಸ್ತಾರ ಕಡಿಮೆಯಾಗಿರುವ ವರ್ತಮಾನದ ಸಂದರ್ಭದಲ್ಲೂ ನೀವು ಅಳಿದುಳಿದಿರುವ ಕಾಡುಗಳಲ್ಲಿ  ಹುಲಿಗಳನ್ನು ನೋಡಬಹುದಾಗಿದೆ. ಇದರ ಅರ್ಥ ಅಭಿವೃದ್ಧಿ ಮತ್ತು ಸಂರಕ್ಷಣೆ ಜೊತೆಗೂಡಿ ಸಾಗಬಹುದಾಗಿದೆ ಎಂದು ಹೇಳಿದರು.  

ಸಮುದ್ರ ಮಾತ್ರವಲ್ಲ ಪರಿಸರವನ್ನೂ ರಕ್ಷಿಸಲಿದೆ ಭಾರತೀಯ ನೌಕಾಪಡೆ!

ಕೇವಲ ಅಭಿವೃದ್ದಿ ಹಾಗೂ ಕೈಗಾರಿಕರಣವನ್ನು ಕಡಿಮೆ ಮಾಡುವುದರಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎನ್ನುವ ವಾದ ಸರಿಯಲ್ಲ. ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಳನದಿಂದ ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಇವುಗಳ ಸಮರ್ಥವಾದ ಬಳಕೆಯನ್ನು ನಾವು ಉತ್ತೇಜಿಸಬೇಕಾಗಿದೆ. ಅರಣ್ಯ ಪರಿಸರಸಂರಕ್ಷಣೆಯೆನ್ನುವುದು ಅಭಿವೃದ್ಧಿಗೆ ವಿರೋಧಿಯಲ್ಲ. ಸರಿಯಾದ ತರ್ಕ, ವಿಜ್ಞಾನಗಳನ್ನು ಬಳಸಿ ಸಕಾರಣವಾಗಿ ಯೋಜನೆಗಳನ್ನು ರೂಪಿಸಿದಾಗ, ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆ. ಅರಣ್ಯ , ಪರಿಸರಗಳ ಸಂರಕ್ಷಣೆಯೆನ್ನುವುದು  ಅಭಿವೃದ್ಧಿಯ ಚಾಲನೆಗೆ ಪೂರಕವಾದ ಅಂಶ. ಈಗ ಕೇವಲ ಶೇಕಡಾ ಎರಡೂವರೆಯಷ್ಟು ಭೂಪ್ರದೇಶದಲ್ಲಿ ಉಳಿದುಕೊಂಡಿರುವ ಜೀವವೈವಿಧ್ಯ ಪ್ರದೇಶಗಳನ್ನೂ ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸುವ ಹುನ್ನಾರವನ್ನು ಮಾತ್ರವೇ ಆಕ್ಷೇಪಿಸಬೇಕಾಗಿದೆ ಎಂದರು.

ಸೂಕ್ತವಾದ ತರ್ಕ, ತಂತ್ರಜ್ಞಾನ (Technology), ವಿಜ್ಞಾನಗಳ ಅನ್ವಯದಿಂದ ರೂಪಿಸುವ ಯೋಜನೆಗಳಿಂದ ನಮ್ಮ ಜೀವವೈವಿಧ್ಯವನ್ನು ಈಗಲೂ ತಕ್ಕಮಟ್ಟಿಗೆ ಕಾಪಾಡಿಕೊಳ್ಳಬಹುದಾಗಿದೆ. ಅರಣ್ಯದ ಬುಡಕಟ್ಟು ತರುಣನೊಬ್ಬನನ್ನು ಇಂಜಿನಿಯರಿಂಗ್ ಪದವೀಧರನನ್ನಾಗಿ ನೋಡುವುದೂ ಸಂರಕ್ಷಣೆಯ ಒಂದು ಆದರ್ಶಸ್ಥಿತಿಯಾಗಿದೆ ಎಂದು ಉಲ್ಲಾಸ ಕಾರಂತರು ವಿವರಿಸಿದರು. ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆಯನ್ನು ಪ್ರೋತ್ಸಾಹಿಸದೆ, ಹೆಚ್ಚಿನ ನೈಸರ್ಗಿಕ ಸಂಪತ್ತು ಇಲ್ಲದಿರುವ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಿದರೆ, ನಿಸರ್ಗ ಪರಿಸರದ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ,   ಅತಿಯಾದ ಹಾನಿಯೂ  ಒದಗುವುದಿಲ್ಲ. ಆಧುನಿಕ ಆರ್ಥಿಕತೆಗೆ ಬಲ ನೀಡುವ ಅಭಿವೃದ್ದಿಯ ಜೊತೆಗೆ ಸಂರಕ್ಷಣೆಗೂ ಆದ್ಯತೆ ನೀಡುವಂತಹ ಅಭಿವೃದ್ದಿ ಕೆಲಸಗಳನ್ನು ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಪಶ್ಚಿಮ ಘಟ್ಟಗಳಿಗೆ ಯುನೆಸ್ಕೋ ವಿಶ್ವಪರಂಪರೆಯ ಸ್ಥಾನಮಾನಗಳನ್ನು ಕಲ್ಪಿಸುವುದಕ್ಕೆ  ಇತರ ಎಲ್ಲ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾಗ ಅನಂತಕುಮಾರ್ (Ananthkumar) ಒಬ್ಬರೇ ಅದರ  ಪರವಾಗಿ ಮಾತನಾಡಿದವರು. ವಿಶ್ವಪರಂಪರೆಯ ತಾಣಗಳಲ್ಲಿ ಪಶ್ಚಿಮಘಟ್ಟಗಳ ಸೇರ್ಪಡೆ ನೋಬೆಲ್ ಪುರಸ್ಕಾರಕ್ಕೆ ಸಮಾನವೆಂದು ಅವರು ಪ್ರತಿಪಾದಿಸಿದ್ದರೆಂದು ಉಲ್ಲಾಸ ಕಾರಂತ ಸ್ಮರಿಸಿಕೊಂಡರು.

ವಿಶ್ವಸಂಸ್ಥೆಯ 'ಚಾಂಪಿಯನ್ ಆಫ್ ದಿ ಅರ್ಥ್' ಪ್ರಶಸ್ತಿಗೆ ಭಾಜನರಾದ ಪ್ರಧಾನಿ ಮೋದಿ

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ (Tejaswini Ananthkumar) ಮಾತನಾಡಿ, ಅಭಿವೃದ್ದಿ ಮತ್ತು ಪರಿಸರ ಎರಡು ಪರಸ್ಪರ ಪೂರಕವಾಗಿರಬೇಕೇ ಹೊರತು ವಿರೋಧವಾಗಲ್ಲ. ಇವೆರಡರ ಸಮ್ಮಿಳನದಿಂದ ಮಾತ್ರ ನಾವು ಆರ್ಥಿಕವಾಗಿ ಅಭಿವೃದ್ದಿ ಹಾಗೂ ನೈಸರ್ಗಿಕ ಸಂಫತ್ತನ್ನು ರಕ್ಷಿಸುವ ಕೆಲಸವನ್ನು ಮಾಡಬಹುದಾಗಿದೆ. ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಯೋಜನೆ ತಯಾರಿಸಿಕೊಳ್ಳುವುದು ಹಾಗೂ ಅದನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 

ವೈಲ್ಡ್ ಲೈಫ್ ಫಸ್ಟ್ ಸಹ ಸಂಸ್ಥಾಪಕರಾದ ಪ್ರವೀಣ್ ಭಾರ್ಗವ್‌ ಮಾತನಾಡಿ, ನಮ್ಮ ದೇಶದಲ್ಲಿ ನೈಸರ್ಗಿಕ ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡಂತೆ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ. ಸರಿಯಾದ ಯೋಜನೆ ಮಾಡುವ ಅವಶ್ಯಕತೆ ಇದೆ. ಕೆಲವು ಯೋಜನೆಗಳನ್ನು ಹಿಂದಿನ ಯೋಜನೆಗಳ ಬಳಿಯಲ್ಲಿಯೇ ನಿರ್ಮಿಸಲಾಗುತ್ತಿವೆ. ಇದು ನೈಸರ್ಗಿಕ ಸಂಪತ್ತಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತವೆ. ಇಂತಹ ಯೋಜನೆಗಳನ್ನು ವಿರೋಧಿಸುವುದು ಅಭಿವೃದ್ದಿಯ ವಿರೋಧವಲ್ಲ, ಕೇವಲ ನೈಸರ್ಗಿಕ ಸಂಪತ್ತನ್ನು ಹಾಳುಮಾಡುವುದರ ವಿರುದ್ಧವಾಗಿದೆ. 

ಸರ್ಕಾರಿ ಕಚೇರಿಗಳಲ್ಲಿ ಇದನ್ನು ಬಳಸುವಂತಿಲ್ಲ!

ಅರಣ್ಯೀಕರಣದ ಕಾರ್ಯಕ್ರಮಕ್ಕೆ ಸಿಗುತ್ತಿರುವ ಹೆಚ್ಚಿನ ಅನುದಾನದಿಂದ ದೇಶದಲ್ಲಿ ನೈಸರ್ಗಿಕ ಅರಣ್ಯ ಸಂಪತ್ತು ಹಾಳಾಗುತ್ತಿದೆ. ನೈಸರ್ಗಿಕ ಅರಣ್ಯಸಂಪತ್ತು ಇರುವ ಅರಣ್ಯ ಪ್ರದೇಶಗಳಲ್ಲೂ ಮಣ್ಣೆತ್ತುವ ಭಾರೀ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಕುದುರೆಮುಖದ ದಟ್ಟ ಶೋಲಾ ಅರಣ್ಯಗಳನ್ನು ಕಡಿಮೆಗುಣಮಟ್ಟದ ಕಬ್ಬಿಣದ ಅದಿರಿಗಾಗಿ ಕಡಿದುದು ಒಂದು ಪ್ರಮಾದ.  ಅಕೇಶಿಯಾ ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡಿರುವುದಾಗಿ ತೋರ್ಪಡಿಸಿಕೊಳ್ಳುವುದು ಹಾಸ್ಯಾಸ್ಪದ. 

ದಟ್ಟಮಳೆಗಾಡುಗಳನ್ನು ನಾಶಪಡಿಸಿ ನೆಡುತೋಪುಗಳನ್ನು ಬೆಳೆಸುವುದರಿಂದ ಜೀವವೈವಿಧ್ಯವನ್ನು ಸೃಷ್ಟಿಸಲಾಗದು. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯಗಳ ಛಿದ್ರೀಕರಣ ಮಾಡುವುದರಿಂದ ಅನೇಕ ಜೀವಿಗಳು ನೆಲೆ ಕಳೆದುಕೊಳ್ಳುವಂತಾಗಿದೆ ಎಂದು ಪ್ರವೀಣ್ ಭಾರ್ಗವ ಪ್ರತಿಪಾದಿಸಿದರು. ಇಂತಹ ಪ್ರದೇಶಗಳಲ್ಲಿ ಅರಣ್ಯಗಳನ್ನು ನೈಸರ್ಗಿಕವಾಗಿಯೇ ಉಳಿಸುವುದರತ್ತ ಹೆಚ್ಚಿನ ಗಮನ ನೀಡಬೇಕಾಗಿದೆ. ಒಟ್ಟಾರೆಯಾಗಿ ಅಭಿವೃದ್ದಿಯ ಜೊತೆಯಲ್ಲಿಯೇ ಸಂರಕ್ಷಣೆಯ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂವಾದದಲ್ಲಿ ಅನಂತಕುಮಾರ್‌ ಪ್ರತಿಷ್ಠಾನದ ಟ್ರಸ್ಟಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Trending News