ಗೋವುಗಳ ಮೇಲೆ ಭಾರತದಲ್ಲಿದೆ ಆಪಾರ ಪ್ರೇಮ: ಆದರೆ ಬೀಡಾಡಿ ದನಗಳ ಸಂಖ್ಯೆ 5 ಮಿಲಿಯನ್ ದಾಟಿ ಸಮಸ್ಯೆ ತಂದೊಡ್ಡಿದೆ!

ಕಳೆದ ದಶಕದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಗೋಹತ್ಯೆಯನ್ನು ನಿಷೇಧಿಸಲು ಸೂಕ್ತ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇದರ ಪರಿಣಾಮವಾಗಿ ಬೀಡಾಡಿ ಹಸುಗಳ ಸಂಖ್ಯೆಯೂ ಭಾರತದಲ್ಲಿ ಹೆಚ್ಚಾಗಿದೆ. 

Written by - Girish Linganna | Last Updated : Apr 20, 2023, 04:22 PM IST
  • 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೋಹತ್ಯೆ ನಿಷೇಧ ಜಾರಿಗೆ
  • ಬೀಡಾಡಿ ಹಸುಗಳ ಸಂಖ್ಯೆಯಲ್ಲಿ ಹೆಚ್ಚಳ
  • ಹಲವು ಆಕಳುಗಳು ರೋಗಪೀಡಿತ
ಗೋವುಗಳ ಮೇಲೆ ಭಾರತದಲ್ಲಿದೆ ಆಪಾರ ಪ್ರೇಮ: ಆದರೆ ಬೀಡಾಡಿ ದನಗಳ ಸಂಖ್ಯೆ 5 ಮಿಲಿಯನ್ ದಾಟಿ ಸಮಸ್ಯೆ ತಂದೊಡ್ಡಿದೆ! title=

ಬೆಂಗಳೂರು : ಭಾರತದಲ್ಲಿ ಅಂದಾಜು 5 ಮಿಲಿಯನ್ ಬೀಡಾಡಿ ಹಸುಗಳು ಸುತ್ತಾಡುತ್ತಿವೆ. ಹಿಂದೂ ಸಂಸ್ಕೃತಿಯಲ್ಲಿ ಹಸು ಒಂದು ಪವಿತ್ರ ಸ್ಥಾನ ಹೊಂದಿದೆ. ಆದರೆ ಬೀಡಾಡಿ ಹಸುಗಳು, ಅದರಲ್ಲೂ ಮನೆಯಿಂದ ಹೊರಹಾಕಿರುವ ಎತ್ತುಗಳಿಂದಲೂ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಆಕಳುಗಳು ಜನರ ಮೇಲೆ ದಾಳಿ ನಡೆಸುವುದು, ವಾಹನ ಅಪಘಾತಗಳಿಗೆ ಕಾರಣವಾಗುವುದು ಹಾಗೂ ಕಾಯಿಲೆ ಹರಡುವುದು ನಡೆಯುತ್ತಿದೆ.

ಕಳೆದ ದಶಕದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಗೋಹತ್ಯೆಯನ್ನು ನಿಷೇಧಿಸಲು ಸೂಕ್ತ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇದರ ಪರಿಣಾಮವಾಗಿ ಬೀಡಾಡಿ ಹಸುಗಳ ಸಂಖ್ಯೆಯೂ ಭಾರತದಲ್ಲಿ ಹೆಚ್ಚಾಗಿದೆ. ಈಗ ಆಧುನಿಕ ತಂತ್ರಜ್ಞಾನದ ಕಾರಣದಿಂದ ಕೃಷಿಕರಿಗೂ ಕಡಿಮೆ ಆಕಳುಗಳ ಅವಶ್ಯಕತೆ ಇರುವುದರಿಂದ, ಹೆಚ್ಚಿನ ಆಕಳುಗಳನ್ನು ಸಾಕಲು ಯಾರೂ ಮುಂದೆ ಬರುತ್ತಿಲ್ಲ.

ಇದನ್ನೂ ಓದಿ : ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ!

ಭಾರತದಲ್ಲಿ 1.4 ಬಿಲಿಯನ್ ಜನಸಂಖ್ಯೆ ಇದ್ದು, ಅದರಲ್ಲಿ 1 ಬಿಲಿಯನ್ ಹಿಂದೂಗಳಾಗಿದ್ದಾರೆ. ಹಿಂದೂ ಧರ್ಮ ವಿಕೇಂದ್ರೀಕೃತವಾಗಿದ್ದು, ಇಲ್ಲಿನ ಹಲವು ನಂಬಿಕೆಗಳು ಗೋವುಗಳು ಮತ್ತು ಅವುಗಳು ಮಾನವರಿಗೆ ಹಾಲು ಮತ್ತು ಇತರ ಸೇವೆ ಒದಗಿಸುವ ಪವಿತ್ರ ಕಾರ್ಯದ ಕುರಿತು ಮಾತನಾಡುತ್ತವೆ.

ಹಾಗೆಂದು ಈ ಮೊದಲಿನಿಂದಲೂ ಭಾರತದ ರಸ್ತೆಗಳಲ್ಲಿ, ನಗರಗಳಲ್ಲಿ ಬೀಡಾಡಿ ಹಸುಗಳು ಸಾಮಾನ್ಯವೇ ಆಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ.

ಕಸದ ತೊಟ್ಟಿಗಳ ಬಳಿ ಹಸುಗಳು ಮುತ್ತುವರಿದಿರುವುದು ಕಂಡುಬರುತ್ತದೆ. ನೀರಿನ ಕೊಳಗಳಲ್ಲೂ ಹಸುಗಳು ಈಜಾಡುವುದು ಕಂಡುಬರುತ್ತದೆ.

ಕಳೆದ ಒಂದು ದಶಕದ ಅವಧಿಯಲ್ಲಿ, ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವಂತೆ ಕಂಡುಬರುತ್ತದೆ. ಭಾರತದಲ್ಲಿ ಅಂದಾಜು 5 ಮಿಲಿಯನ್ ಬೀಡಾಡಿ ಆಕಳುಗಳಿವೆ. ಅವುಗಳಲ್ಲಿ ಬಹುತೇಕ ಎತ್ತು - ಹೋರಿಗಳಾಗಿದ್ದು, ಅವುಗಳ ಆರೋಗ್ಯವೂ ಕೆಟ್ಟ ಸ್ಥಿತಿಯಲ್ಲಿರುತ್ತದೆ. ಅವುಗಳು ಹಲವು ದಿನಗಳಿಂದ ಉಪವಾಸವಿರುತ್ತವೆ, ವಾಹನಗಳಿಂದ ಗುದ್ದಲ್ಪಟ್ಟಿರುವ ಸಾಧ್ಯತೆಗಳೂ ಇವೆ.

ಇದನ್ನೂ ಓದಿ : 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್..! ಯಾರೆಲ್ಲಾ ಇದ್ದಾರೆ ಗೊತ್ತಾ?

ತೀರಾ ಇತ್ತೀಚಿನ ದಿನಗಳವರೆಗೂ ಭಾರತೀಯ ರೈತರು ಅವರಿಗೆ ಹೆಚ್ಚುವರಿಯಾಗಿದ್ದ, ವಯಸ್ಸಾದ ಆಕಳುಗಳನ್ನು ಕಸಾಯಿಖಾನೆಗೆ ಕೊಡುತ್ತಿದ್ದರು. ಆಕಳಿನ ಮಾಂಸ ಹೆಚ್ಚಿನ ಪ್ರೊಟೀನ್ ಅಂಶ ಹೊಂದಿದ್ದು, ಕಡಿಮೆ ಬೆಲೆಯದ್ದಾದ ಕಾರಣ ಭಾರತದ 200 ಮಿಲಿಯನ್ ಮುಸ್ಲಿಮರು ಅದನ್ನು ಆಹಾರವಾಗಿ ಸೇವಿಸುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಸರ್ಕಾರದ ಮೇಲೆ ಗೋ ಸಂರಕ್ಷಣೆಯ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿದ ಪರಿಣಾಮವಾಗಿ ಪರಿಸ್ಥಿತಿ ಬದಲಾಗತೊಡಗಿತು.

2014ರಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು. ಅವರ ಬಲಪಂಥೀಯ ಹಿಂದೂ ಪರ ಪಕ್ಷವೂ ಗೋವನ್ನು ಮುಸ್ಲಿಮರು ಹೆಚ್ಚಾಗಿ ಸೇವಿಸುತ್ತಿದ್ದ ಕಾರಣದಿಂದ ಗೋಹತ್ಯೆ ನಿಷೇಧಿಸಲು ಆಸಕ್ತವಾಗಿತ್ತು.

ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು 'ಪಿಂಕ್ ರೆವಲ್ಯೂಷನ್' ಎಂದು ಕರೆದಿದ್ದರು. ಅವರು ಎಲ್ಲ ಬಿಜೆಪಿ ಆಡಳಿತದ 18 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಕಾನೂನುಗಳನ್ನು ಬಿಗಿಗೊಳಿಸಿದರು.

ಇದನ್ನೂ ಓದಿ : ಪುಲಿಕೇಶಿನಗರದ ಕೊಳೆ ಪೊರಕೆಯಿಂದ ತೊಳೆಯಲಿದ್ದೇವೆ: ಅಭ್ಯರ್ಥಿ ಸುರೇಶ್ ರಾಥೋಡ್

ಮಾಧ್ಯಮ ವರದಿಗಳ ಪ್ರಕಾರ, ಮೋದಿಯವರ ರಾಜಕೀಯ ಪಕ್ಷ ಗೋವನ್ನು ಸಂಕೇತವಾಗಿಸಿಕೊಂಡು, ಹಿಂದೂ ರಾಷ್ಟ್ರ ನಿರ್ಮಾಣದ ಉದ್ದೇಶ ಹೊಂದಿತ್ತು.

ಭಾರತ ಜಗತ್ತಿನ ಎರಡನೇ ಅತಿದೊಡ್ಡ ಬೀಫ್ ಉತ್ಪಾದಕ ರಾಷ್ಟ್ರವಾಗಿದ್ದು, ಅತಿದೊಡ್ಡ ಹಾಲು ಉತ್ಪಾದಕವಾಗಿದೆ. ಆದ್ದರಿಂದ ಗೋಹತ್ಯೆ ನಿಷೇಧದಿಂದ ಭಾರತದ ಮೇಲೆ ಗಂಭೀರ ಪರಿಣಾಮಗಳೂ ಉಂಟಾಗುವ ಸಾಧ್ಯತೆಗಳಿವೆ.

ಹಾಲಿಗಾಗಿ ಬಳಸುವ ಬಹುತೇಕ ಹಸುಗಳು 15 ವರ್ಷಗಳ ಕಾಲ ಜೀವಿಸಬಹುದು. ಆದರೆ ಅವುಗಳು ಏಳು ವರ್ಷಗಳ ನಂತರ ಹಾಲು ಪೂರೈಸುವುದನ್ನು ನಿಲ್ಲಿಸಿರುತ್ತವೆ. ಪ್ರತಿವರ್ಷವೂ ಭಾರತದಲ್ಲಿ 3 ಮಿಲಿಯನ್ ಹಸುಗಳು ಹಾಲು ಪೂರೈಸುವುದನ್ನು ನಿಲ್ಲಿಸುತ್ತವೆ.

ರೈತರು ಹಾಲು ಒದಗಿಸದ ಹಸುಗಳನ್ನು ಹೊರೆ ಎಂಬಂತೆ ಭಾವಿಸುತ್ತಾರೆ. ಮೋದಿ ಸರ್ಕಾರದ ಕಾನೂನು ನಿಯಂತ್ರಣಗಳಿಗೆ ಮೊದಲು ಇಂತಹ ಹಸುಗಳನ್ನು ಮುಸ್ಲಿಂ ವ್ಯಾಪಾರಿಗಳಿಗೆ ಮಾರಾಟ ಮಾಡಿ, ಮಾಂಸ ಚರ್ಮಕ್ಕಾಗಿ ವಿದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡುವುದು ಸಾಮಾನ್ಯವಾಗಿತ್ತು.

ಆದರೆ ಈಗ ರೈತರು ಅವರಿಗೆ ಅನಗತ್ಯವಾದ ಆಕಳುಗಳನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹೋರಿಗಳನ್ನು ಮತ್ತು ವಯಸ್ಸಾದ ಹಸುಗಳನ್ನು ಹೊರಗಟ್ಟಿ ಬಿಡುತ್ತಾರೆ.

"ರಾತ್ರಿ ವೇಳೆಯಲ್ಲಿ ಹಾಲು ಕೊಡದ ಹಸುಗಳನ್ನು ರೈತರು ಮೆತ್ತಗೆ ಹೊರಗಟ್ಟುತ್ತಾರೆ" ಎನ್ನುತ್ತಾರೆ ಓರ್ವ ರೈತ.

ಇದನ್ನೂ ಓದಿ : ಅಭಿವೃದ್ಧಿ ಆಗಬೇಕೆಂದರೆ ಇನ್ನೊಂದು ಬಾರಿ ಬೊಮ್ಮಾಯಿ ಅವರಿಗೆ ಮತ ಕೊಡಿ: ನಟ ಸುದೀಪ್

ದೇಶದಲ್ಲಿ ಬೀಡಾಡಿ ಆಕಳುಗಳ ಹೆಚ್ಚಳಕ್ಕೆ ತಂತ್ರಜ್ಞಾನದ ಅಭಿವೃದ್ಧಿಯೂ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದೆ. ಕೆಲವು ದಶಕಗಳ ಹಿಂದೆ, ಎತ್ತುಗಳು, ಹೋರಿಗಳು ಹೊಲವನ್ನು ಉಳಲು, ಗೊಬ್ಬರ ಉತ್ಪಾದಿಸಲು ಅತ್ಯಂತ ಅವಶ್ಯಕವಾಗಿದ್ದವು.

ಆದರೆ ಈಗ ರೈತರ ಬಳಿ ಹೊಲ ಉಳಲು ಟ್ರ್ಯಾಕ್ಟರ್‌ಗಳಿವೆ, ರಾಸಾಯನಿಕ ಗೊಬ್ಬರಗಳಿವೆ. ಹಾಗಾಗಿ ಹೋರಿ, ಎತ್ತುಗಳ ಅವಶ್ಯಕತೆ ಕಡಿಮೆಯಾಗಿದೆ.

ಬೀಡಾಡಿ ಹಸುಗಳು ಎಂದಾಗ ಅದೇನು ದೊಡ್ಡ ತೊಂದರೆಯಲ್ಲ ಎನಿಸಬಹುದು. ಆದರೆ ಅವುಗಳು ಮಿಲಿಯನ್ ಗಟ್ಟಲೆ ಸಂಖ್ಯೆಯಲ್ಲಿ ಇರುವಾಗ ಅವುಗಳು ತೊಂದರೆ ಉಂಟುಮಾಡಬಲ್ಲವು.

ಅವುಗಳಿಗೆ ಸಾಮಾನ್ಯವಾಗಿ ಸಾಕಷ್ಟು ಆಹಾರ ಲಭಿಸುವುದಿಲ್ಲ. ಹಸಿವಿನಿಂದ ಅವುಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ರಸ್ತೆಗಳಲ್ಲಿ ಜನರ ಮೇಲೆ ಗೂಳಿಗಳು ಆಕ್ರಮಣ ಮಾಡಿರುವ ಸುದ್ದಿ ಸಾಮಾನ್ಯ ಎನಿಸಿವೆ. ಇವರಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದರೆ, ಒಂದಷ್ಟು ಜನರಿಗೆ ಗಂಭೀರ ಗಾಯಗಳಾಗಿವೆ.

ಬೀಡಾಡಿ ಹಸುಗಳ ಕಾರಣದಿಂದ ರಸ್ತೆ ಅಪಘಾತಗಳೂ ನಡೆಯುತ್ತವೆ. 2018 ಮತ್ತು 2022ರ ನಡುವೆ ರಸ್ತೆಯಲ್ಲಿ ಹಸು ಅಡ್ಡ ಬಂದ ಪರಿಣಾಮವಾಗಿ ಹರಿಯಾಣ ರಾಜ್ಯವೊಂದರಲ್ಲೇ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಖಾಯಿಲೆಯಾದ ಹಸುಗಳನ್ನು ಸಾಯಿಸಲು ಸಾಧ್ಯವಿಲ್ಲದೆ ಅವುಗಳನ್ನು ಹಾಗೇ ಹೊರದಬ್ಬುವ ಕಾರಣದಿಂದ ಬೀಡಾಡಿ ಹಸುಗಳು ರೋಗ ಹರಡುವ ಸಾಧ್ಯತೆಗಳಿವೆ. 2022ರಲ್ಲಿ 2 ಮಿಲಿಯನ್‌ಗೂ ಹೆಚ್ಚು ಹಸುಗಳಲ್ಲಿ ಚರ್ಮದಲ್ಲಿ ಗಂಟು ರೋಗ ಕಾಣಿಸಿಕೊಳ್ಳಲೂ ಇದೇ ಕಾರಣವಾಗಿರಬಹುದು.

ಬೀಡಾಡಿ ಹಸುಗಳು ಹೊಲಗಳಿಗೆ ನುಗ್ಗಿ, ಬೆಳೆಯನ್ನೂ ನಾಶ ಮಾಡುತ್ತವೆ. ಭಾರತದಲ್ಲಿ 85% ರೈತರ ಬಳಿ 5 ಎಕರೆಗಿಂತ ಹೆಚ್ಚಿನ ಭೂಮಿಯಿಲ್ಲ. ಆದ್ದರಿಂದ ಅವರ ಬೆಳೆಗೆ ಉಂಟಾಗುವ ಹಾನಿಯ ಪರಿಣಾಮ ದೀರ್ಘಕಾಲೀನವಾಗಿರುತ್ತದೆ. ಕೆಲವು ರೈತರು ಬೇಲಿ ಹಾಕುವ ಮೂಲಕ, ಕಾವಲುಗಾರರ ಮೂಲಕ ಅವರ ಬೆಳೆಯನ್ನು ರಕ್ಷಿಸುತ್ತಾರೆ. ಆದರೆ ಎಲ್ಲ ರೈತರಿಗೂ ಇಷ್ಟೊಂದು ಖರ್ಚು ಮಾಡಲು ಸಾಧ್ಯವಿಲ್ಲ.

ಉತ್ತರ ಪ್ರದೇಶದ ರೈತರೊಬ್ಬರು ಹಸುಗಳ ಒಂದು ಹಿಂಡು ಸಂಪೂರ್ಣ ಬೆಳೆಯನ್ನು ಒಂದು ಗಂಟೆಯಲ್ಲಿ ಖಾಲಿ ಮಾಡಿ ಬಿಡಬಲ್ಲವು. ಈ ರೀತಿ ಆಗಬಾರದೆಂದರೆ ರೈತರು ರಾತ್ರಿ ಪೂರ್ತಿ ಹೊಲ ಕಾದು, ಹಸುಗಳು ಬೆಳೆ ನಾಶ ಪಡಿಸದಂತೆ ನೋಡಿಕೊಳ್ಳಬೇಕಾಗುತ್ತದೆ.

ಅಶೋಕ್ ಕುಮಾರ್ ಎಂಬ ರೈತ, ತಾನು ಬಡವನಾಗಿದ್ದರೂ ನಿರುಪಯುಕ್ತ ಹಸುಗಳನ್ನು ಸಾಕುವಂತೆ ಮಾಡಿರುವ ಸರ್ಕಾರದ ನಿರ್ಧಾರದಿಂದ ಜೀವನ ದುರ್ಲಭವಾಗಿದೆ ಎಂದಿದ್ದಾರೆ.

"ಒಂದು ವೇಳೆ ನಾವು ಏನಾದರೂ ಹಸುಗಳಿಗೆ ನಮ್ಮ ಬೆಳೆ ನಾಶ ಮಾಡಿವೆ ಎಂದು ಹೊಡೆದು ಬಡಿದು ಮಾಡಿ, ಅವುಗಳಿಗೆ ಏನಾದರೂ ಹಾನಿಯಾದರೆ ಆಗ ನಾವು ಜಾಮೀನು ಸಿಗದೆ ಜೈಲಿನಲ್ಲಿ ಕೂರಬೇಕಾದೀತು. ನಿಜವಾಗಿಯೂ ಹಸುಗಳನ್ನು ಬೀದಿಗೆ ಬಿಡುವವರನ್ನು ಜೈಲಿಗೆ ಹಾಕಬೇಕು" ಎನ್ನುತ್ತಾರೆ ಅವರು.

ಈಗ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಿರುವುದರ ಜೊತೆಗೆ, ಗೋರಕ್ಷಕರ ಸೋಗಿನಲ್ಲಿರುವವರೂ ಜನರ ಮೇಲೆ ದಾಳಿ ನಡೆಸುತ್ತಾರೆ ಎನ್ನುತ್ತಿವೆ ಮಾದ್ಯಮಗಳು.

2015 ಮತ್ತು 2018ರ ನಡುವೆ ದುಷ್ಕರ್ಮಿಗಳು 44 ಜನರನ್ನು ಕೊಂದು, 280 ಜನರನ್ನು ಗಾಯಗೊಳಿಸಿವೆ.

ಸ್ಥಳೀಯ ಪೊಲೀಸರು ಈ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಆಗಸ್ಟ್ 2018ರ ತನಕವೂ ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಮಾತನಾಡಿರಲಿಲ್ಲ.

"ಉದ್ದೇಶ ಅಥವಾ ಕಾರಣ ಏನೇ ಇದ್ದರೂ, ಜನರನ್ನು ಹತ್ಯೆ ಮಾಡುವುದು ಅಪರಾಧ" ಎಂದು ಮೋದಿ ಸ್ಪಷ್ಟಪಡಿಸಿದರು.

ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನರು ಯಾವುದೇ ರೋಗಪೀಡಿತ ಹಸುವಿನ ಬಗ್ಗೆಯಾದರೂ ಆಡಳಿತಕ್ಕೆ ವರದಿ ಮಾಡಬೇಕಿದೆ. ಯಾವುದಾದರೂ ಹಸು ಸಂಶಯಾಸ್ಪದವಾಗಿ ಸಾವನ್ನಪ್ಪಿದರೆ ಅದಕ್ಕೆ ಮರಣೋತ್ತರ ಪರೀಕ್ಷೆ ನಡೆಸಬೇಕಾಗುತ್ತದೆ.

ಬೀಡಾಡಿ ಹಸುಗಳಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಗೋಶಾಲೆ ನಿರ್ಮಿಸಲು ಮೋದಿ ಸರ್ಕಾರ 2014 - 2016ರ ನಡುವೆ 41 ಮಿಲಿಯನ್ ಡಾಲರ್ ಖರ್ಚು ಮಾಡಿದೆ. ಭಾರತದಲ್ಲಿ ಪ್ರಸ್ತುತ 5,000ಕ್ಕೂ ಹೆಚ್ಚಿನ ಗೋಶಾಲೆಗಳಿವೆ. ಆದರೆ ಅವುಗಳು ಇರುವ ಹಸುಗಳಿಗೆ ಸಾಕಾಗುತ್ತಿಲ್ಲ ಎನ್ನುತ್ತಿವೆ ವರದಿಗಳು.

ಉತ್ತರ ಪ್ರದೇಶದಲ್ಲಿ ಸರ್ಕಾರ ಹಸುಗಳಿಗಾಗಿ 130 ಎಕರೆ ಪ್ರದೇಶದಲ್ಲಿ ಆಶ್ರಯ ತಾಣ ನಿರ್ಮಿಸಲು ಉದ್ದೇಶಿಸಿದೆ.

ಹುಟ್ಟುವ ಕರುವಿನ ಲಿಂಗ ಖಚಿತಪಡಿಸಲು ಮತ್ತು ಗಂಡು ಕರುಗಳ ಸಂಖ್ಯೆ ಕಡಿತಗೊಳಿಸಲು ಕೆಲವು ರೈತರು ಈಗಾಗಲೇ ಕೃತಕ ಗರ್ಭಧಾರಣೆ ಕೈಗೊಳ್ಳುತ್ತಿದ್ದು, ಇದೊಂದು ವೆಚ್ಚದಾಯಕ ಕ್ರಮವಾಗಿದೆ.

ಗೋಮೂತ್ರ ಮತ್ತು ಸೆಗಣಿಯನ್ನು ವೈದ್ಯಕೀಯವಾಗಿ ಬಳಸಿಕೊಳ್ಳುವ ಕುರಿತೂ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೆ ಇವುಗಳಿಗೆ ವಿಜ್ಞಾನದ ಬೆಂಬಲ ಲಭ್ಯವಿಲ್ಲ.

ಹಸುಗಳ ರಕ್ಷಣೆ ಮತ್ತು ಉತ್ತೇಜಿಸುವ ಸಂಸ್ಥೆಯ ಮಾಜಿ ಅಧ್ಯಕ್ಷರ ಪ್ರಕಾರ, ಬೀಡಾಡಿ ಹಸುಗಳೂ ದೇಶದಲ್ಲಿ ಧನಾತ್ಮಕತೆಯನ್ನು ಪ್ರತಿಬಿಂಬಿಸುತ್ತವೆ.

ಸಾರ್ವಜನಿಕರು ಯಾವಾಗಲಾದರೂ ಒಂದು ಹಸುವನ್ನು ಕಂಡಾಗ ಯಾವುದೋ ಆಭರಣ ಕಂಡಂತೆ ಖುಷಿಪಡಬೇಕು ಎಂದು ಅವರು ಕರೆ ನೀಡುತ್ತಾರೆ. ಆದರೆ ಈ ಆಲೋಚನೆ ಮಾತ್ರವೇ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲವಷ್ಟೇ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News