Naveen Gyangoudar: ಯುದ್ಧಭೂಮಿ ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ

ಯುದ್ಧಭೂಮಿ ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಗೌರವ ಸಲ್ಲಿಸಿದರು.

Written by - Zee Kannada News Desk | Last Updated : Mar 21, 2022, 10:15 AM IST
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಗ್ರಾಮದತ್ತ ಹೊರಟ ನವೀನ್ ಪಾರ್ಥಿವ ಶರೀರ
  • ಆಂಬ್ಯುಲನ್ಸ್ ಮೂಲಕ ಸ್ವಗ್ರಾಮದತ್ತ ಹೊರಟ ನವೀನ್ ಪಾರ್ಥಿವ ಶರೀರ
  • ಏರ್ಪೊಟ್ ನಿಂದ ಬಿಗಿ ಬಂದೋಬಸ್ತ್ ನಡುವೆ ರವಾನೆ
Naveen Gyangoudar: ಯುದ್ಧಭೂಮಿ ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ  title=
Naveen Janagoudar body reached karnataka

ಬೆಂಗಳೂರು:  ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಶೆಲ್ ದಾಳಿಯಲ್ಲಿ ಉಕ್ರೇನ್‌ನಲ್ಲಿ  ಮೃತಪಟ್ಟಿದ್ದ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಅವರ ಪಾರ್ಥೀವ ಶರೀರವನ್ನು ಸೋಮವಾರ ಮುಂಜಾನೆ ತಾಯ್ನಾಡಿಗೆ ತರಲಾಗಿದೆ. 

ಉಕ್ರೇನ್​ನಿಂದ ಬೆಂಗಳೂರಿಗೆ ಬಂದ ನವೀನ್ ಗ್ಯಾನಗೌಡರ (Naveen Gyangoudar) ಪಾರ್ಥೀವ ಶರೀರಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ  ಅವರು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಜತೆ ಆಗಮಿಸಿದ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕೂಡ ಉಪಸ್ಥಿತರಿದ್ದರು. 

ಇದನ್ನೂ ಓದಿ- Naveen Gyanagoudar: ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ನೆನೆದು ಆರೋಗ್ಯಾಧಿಕಾರಿ ಕಣ್ಣೀರು

ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ಉಕ್ರೇನ್​ಗೆ (Ukraine) ತೆರಳಿದ್ದ  21 ವರ್ಷದ ನವೀನ್ ಗ್ಯಾನಗೌಡರ್ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದು, ಮಾರ್ಚ್ 1 ರಂದು ಉಕ್ರೇನ್‌ನ ಖಾರ್ಕಿವ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಬಲಿಯಾದಾಗ ಅವರು ಆಹಾರ ಖರೀದಿಸಲು ಸರದಿಯಲ್ಲಿ ನಿಂತಿದ್ದರು ಎಂದು ವರದಿಯಾಗಿದೆ.  ನವೀನ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕೀವ್ ಅಧಿಕಾರಿಗಳಿಗೆ ಭಾರತ ಸರ್ಕಾರದ ಮೂಲಕ ಮನವಿ ಮಾಡಲಾಗಿತ್ತು. ನಂತರ ನವೀನ್ ಪಾರ್ಥಿವ ಶರೀರವನ್ನು ಕೀವ್​ನ ಮೆಡಿಕಲ್ ಕಾಲೇಜಿನಲ್ಲಿ‌ ಸುರಕ್ಷಿತವಾಗಿ ಇರಿಸಲಾಯಿತು.  

ಇಂದು ಏರ್ ಇಂಡಿಯಾ ಎಮಿರೇಟ್ಸ್ ವಿಮಾನದಲ್ಲಿ‌ ತಾಯ್ನಾಡಿಗೆ ತಲುಪಿದ ವಿದ್ಯಾರ್ಥಿ ನವೀನ್​ ಗ್ಯಾನಗೌಡರ (Naveen Janagoudar) ಅವರ ಪಾರ್ಥಿವ ಶರೀರವನ್ನು ಏರ್ಪೋರ್ಟ್​ನಿಂದ ಹಾವೇರಿಗೆ  ತೆಗೆದುಕೊಂಡು ಹೋಗಲು ಎರಡು ಆ್ಯಂಬುಲೇನ್ಸ್ ಗಳ ವ್ಯವಸ್ಥೆ ಮಾಡಲಾಗಿದ್ದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭದ್ರತೆ ಮೂಲಕ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು‌ ಹೋಗಲಾಗುತ್ತಿದೆ.  ನವೀನ್ ಮೃತದೇಹ ಏರ್ಪೊಟ್ ನಿಂದ ಹೆಬ್ಬಾಳ, ಯಶವಂತಪುರ, ನೆಲಮಂಗಲ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಮೂಲಕ ರಾಣೆ ಬೆನ್ನೂರು ತಲುಪಲಿದ್ದು ಇದಕ್ಕಾಗಿ  ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ- ನಾಳೆ ರಾಜ್ಯಕ್ಕೆ ನವೀನ್ ಮೃತದೇಹ: ಪಿಎಂಗೆ ಧನ್ಯವಾದ ಹೇಳಿದ ಸಿಎಂ

ನವೀನ್ ಮೃತದೇಹವನ್ನು ದಾವಣಗೆರೆಯ ಎಸ್​ಎಸ್ ಆಸ್ಪತ್ರೆಗೆ ದಾನ ಮಾಡಲಿರುವ ಪೋಷಕರು:
ರಷ್ಯಾ-ಉಕ್ರೇನ್ ಯುದ್ಧದ ವೇಳೆ ಶೆಲ್ ದಾಳಿಯಿಂದ ಮೃತಪಟ್ಟ ನವೀನ್ ಅವರ ಮೃತದೇಹವನ್ನು ದಾವಣಗೆರೆಯ ಎಸ್​ಎಸ್ ಆಸ್ಪತ್ರೆಗೆ ದಾನ ಮಾಡುವುದಾಗಿ ಮೃತ ನವೀನ್ ಪೋಷಕರು ತಿಳಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಎಸ್​ಎಸ್ ಆಸ್ಪತ್ರೆಯ ಚೇರ್ಮನ್ ಎಸ್.ಎಸ್. ಮಲ್ಲಿಕಾರ್ಜುನ್, ನವೀನ್ ಅವರ ಪೋಷಕರು ಮಗ ವೈದ್ಯನಾಗಬೇಕು ಎಂದು ಬಹಳ ಆಸೆಯಿಂದ ವಿದ್ಯಾಭ್ಯಾಸಕ್ಕೆಂದು ಅಷ್ಟು ದೂರ ಕಳಿಸಿದ್ದರು. ಆದರೆ ಅವರು ಉಕ್ರೇನ್​ನಲ್ಲಿಯೇ ಸಾವನ್ನಪ್ಪಿರುವುದು ಬಹಳ ದುಃಖದ ಸಂಗತಿ. ಈಗ ಅವರ ಮೃತದೇಹ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಮಗನ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News