ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ, ಆದರೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಿಎಂ

ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ನಷ್ಟ ಆಗ್ತಿದ್ದು, ದರ ಹೆಚ್ಚಳ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ.

Last Updated : Mar 5, 2019, 08:07 AM IST
ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ, ಆದರೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಿಎಂ  title=
File Image

ಬೆಂಗಳೂರು: ಸಾರ್ವಜನಿಕರಿಗೆ ಹೊರೆ ಹಾಕುವ ಚಿಂತನೆಯಿಲ್ಲ,  ರಾಜ್ಯ ಸಾರಿಗೆ ಬಸ್ ಪ್ರಯಾಣ ದರ ಸದ್ಯಕ್ಕೆ ಏರಿಕೆ ಮಾಡುವ ಉದ್ದೇಶವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.  

ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ನಷ್ಟ ಆಗ್ತಿದ್ದು, ದರ ಹೆಚ್ಚಳ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ಆದರೆ ಲೋಕಸಭಾ ಚುನಾವಣೆಯಿಂದಾಗಿ, ಇದು ಸಮಸ್ಯೆಯಾಗುತ್ತದೆ. ದರ ಹೆಚ್ಚಳ ಮಾಡಿದ್ರೇ ಅದನ್ನೆ ದೊಡ್ಡದು ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನ ಬಲಪಡಿಸಿ

ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೆಲ ಸಲಹೆಗಳನ್ನು ನೀಡಿದ ಸಾಹಿತಿ ಮರುಳಸಿದ್ದಪ್ಪ,  ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನ ಬಲಪಡಿಸಬೇಕು. ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು . ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಕೊಡೋದು ಮುಖ್ಯ ಅಲ್ಲ. ಸರ್ಕಾರಿ ಶಾಲೆಗಳಿಗೆ ಆದ್ಯತೆ, ಗುಣಮಟ್ಟ, ಮೂಲಸೌಲಭ್ಯಗಳನ್ನ ಹೆಚ್ಚಿಸಬೇಕು. ಇಲಾಖೆಗಳಲ್ಲಿ ಸ್ಥಿರ ಆಡಳಿತ ನೀಡುವಂತೆ ಸಲಹೆ ನೀಡಿದರು.

ಈ ಕುರಿತು ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕನ್ನಡ ಶಾಲೆಗಳು ಉಳಿಯಬೇಕು ಅನ್ನೋವವರಲ್ಲಿ ನಾನು ಮೊದಲಿಗ. ಎಸ್‌ಎಸ್ಎಲ್‌ಸಿ ವರೆಗೂ ನಾವು ಕನ್ನಡ ಮಾಧ್ಯಮಗಳಲ್ಲಿ ಓದಿದವರು. ಶಿಕ್ಷಕರು ಎಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಶಿಕ್ಷಕರನ್ನ ಪ್ರತಿನಿಧಿಸೋ ಜನಪ್ರತಿನಿಧಿಗಳು ಚರ್ಚಿಸಲ್ಲ. ಒಂದು ಸೆಕ್ಷನ್ ಕನ್ನಡ, ಒಂದು ಸೆಕ್ಷನ್ ಇಂಗ್ಲೀಷ್ ಇರುತ್ತೆ. ಆಯ್ಕೆಯ ಹಕ್ಕು ಪೋಷಕರಿಗೆ ಬಿಟ್ಟಿದ್ದು‌. ಮೂಲಸೌಕರ್ಯಗಳ ನೀಡುವಲ್ಲಿ ಲೋಪದೋಷಗಳಿರೋದು ನಿಜ. ಅದನ್ನ ಸರಿಪಡಿಸಿ ಉತ್ತಮ ಕೆಲಸ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನಮ್ಮ ಹಳ್ಳಿಯಲ್ಲಿ 200 ವಿದ್ಯಾರ್ಥಿಗಳಿದ್ದವರೂ 14ಕ್ಕೆ ಇಳಿದಿದೆ. 35-40  ಸಾವಿರ ದುಡ್ಡು ಆಂಗ್ಲ ಮಾಧ್ಯಮಕ್ಕೆ ಸೇರಿಸ್ತಿದ್ದಾರೆ. ಕನ್ನಡ ಶಾಲೆಗಳ ಉಳಿಸೋಕೆ ಏನ್ ಮಾಡ್ಬೇಕು ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರಶ್ನೆಮಾಡಿದರು.  ಶಿಕ್ಷಕರ ಗುಣಮಟ್ಟ ಕೂಡ ಹೆಚ್ಚಳ ಮಾಡಬೇಕಿದೆ. ಹೀಗಾಗಿ ಅವರಿಗೂ ತರಬೇತಿ ಕೊಡಲು ಉದ್ಧೇಶಿಸಲಾಗಿದೆ ಎಂದು ಹೆಚ್‌ಡಿಕೆ ತಿಳಿಸಿದರು.
 

Trending News