ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು: ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್ 6,25,553 ಮತ ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5,22,823 ಮತ ಪಡೆದು ಪರಾಭವಗೊಂಡಿದ್ದಾರೆ.

Last Updated : May 23, 2019, 06:15 PM IST
ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು: ಸುಮಲತಾ ಅಂಬರೀಶ್ title=

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುಧ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಅವರು 'ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು' ಎಂದಿದ್ದಾರೆ.

"ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನೂ ಮೀರಿ, ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಮಂಡ್ಯದ ಜನತೆಗೆ ಕೋಟಿ ಕೋಟಿ ಅನಂತ ಅನಂತ ಅಭಿನಂದನೆಗಳು" ಎಂದು ಸುಮಲತಾ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, "ಇದು ನನ್ನ ಗೆಲುವಲ್ಲ, ಅಂಬರೀಷ್ ಅವರ ಗೆಲುವು ಆಗಿದೆ. ನನ್ನ ಗೆಲುವಿಗೆ ಮಂಡ್ಯ ಜನತೆ ಮಾತ್ರವಲ್ಲದೆ ರಾಜ್ಯದ ಜನತೆಯೇ ಹಾರೈಸಿದ್ದಾರೆ. ಈ ಹಾದಿಯಲ್ಲಿ  ಚಿತ್ರೋದ್ಯಮದ ಗಣ್ಯರು, ರಾಜ್ಯದ ಜನತೆಯೇ ಬೆಂಬಲಿಸಿದ್ದು, ಅವರೆಲ್ಲರಿಗೂ ಚಿರಖುಣಿಯಾಗಿರುವುದಾಗಿ ಹೇಳಿರುವ ಸುಮಲತಾ ಅವರು, ಮಂಡ್ಯ ಕ್ಷೇತ್ರದ ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದ್ಯದಲ್ಲೇ ಜನರ ಮುಂದೆ ವಿವರಿಸಲಿದ್ದೇನೆ" ಎಂದಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವಂಗತ ನಟ ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಇಂದು ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಫಲಿತಾಂಶ ಹೊರಬಿದ್ದಿದ್ದು, ಸುಮಲತಾ ಅಂಬರೀಶ್ 6,25,553 ಮತ ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5,22,823 ಮತ ಪಡೆದು ಪರಾಭವಗೊಂಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅವರಿಗೆ ಬಿಜೆಪಿ ತನ್ನ ಭಯ್ರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಘೋಷಿಸಿತ್ತು. ಸುಮಲತಾ ಪರವಾಗಿ ಕನ್ನಡ ಚಿತ್ರರಂಗದ ನಟರಾದ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಪ್ರಚಾರ ನಡೆಸಿದ್ದರು. ಚುನಾವಣಾ ಸಭೆಗಳಲ್ಲಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Trending News