ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಗುತ್ತಾ ನ್ಯಾಯಾ?

ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ಅಂತಿಮ ಹಂತದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನಾಳೆ ಕಾವೇರಿ ತೀರ್ಪನ್ನು ಪ್ರಕಟಿಸಲಿದೆ.

Last Updated : Feb 15, 2018, 02:48 PM IST
ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಗುತ್ತಾ ನ್ಯಾಯಾ? title=

ನವದೆಹಲಿ: ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು 2007ರ ಜುಲೈ 11 ರಂದು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ಅಂತಿಮ ಹಂತದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನಾಳೆ ಕಾವೇರಿ ತೀರ್ಪನ್ನು ಪ್ರಕಟಿಸಲಿದೆ. ಈ ತೀರ್ಪಿನಿಂದ ಕರ್ನಾಟಕಕ್ಕೇ ನ್ಯಾಯ ಸಿಗಲಿದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ.

ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಅಂತಿಮ ಹಂತದ ವಿಚಾರಣೆಯಲ್ಲಿ ಹಿರಿಯ ವಕೀಲ ಪಾಲಿ ಎಸ್. ನಾರಿಮನ್ ಕರ್ನಾಟಕದ ಪರವಾಗಿ ವಾದ ಮಂಡಿಸಿದರೆ, ವಕೀಲರಾದ ಶೇಖರ್ ನಾಫಡೆ ತಮಿಳುನಾಡು ಪರ ಹಾಗೂ ವಕೀಲ ಹರೀಶ್ ಸಲ್ವ ಕೇರಳ ಪರ ವಾದ ಮಂಡಿಸಿದ್ದರು.

1892 ಮತ್ತು 1924ರಲ್ಲಿ ಮದ್ರಾಸ್, ಮೈಸೂರು ಸಂಸ್ಥಾನಗಳ ನಡುವೆ ಆಗಿದ್ದ ಒಪ್ಪಂದಗಳನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆಸಿದ್ದ ಕರ್ನಾಟಕದ ಪರ ವಕೀಲ ಫಾಲಿ.ಎಸ್. ನಾರಿಮನ್,  ಎರಡೂ ಒಪ್ಪಂದಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹೊಸದಾಗಿ ನೀರು ಹಂಚಿಕೆ ಮಾಡಬೇಕು ಎಂದು ಪ್ರತಿಪಾದಿಸಿದ್ದರು. 

ಹಳೇ ಒಪ್ಪಂದಗಳ ಮಾನ್ಯತೆ ಬಗ್ಗೆ ಸುದೀರ್ಘ ವಾದ ಮಂಡಿಸಿದ್ದ ನಾರಿಮನ್, ಬ್ರಿಟಿಷ್ ಕಾಲದ ಒಪ್ಪಂದಗಳೇ ರಾಜ್ಯಕ್ಕೆ ಮುಳುವಾಗಿದ್ದು, ಅವುಗಳನ್ನು ಮಾನ್ಯತೆ ಮಾಡಬಾರದು. ಸ್ವಾತಂತ್ರ್ಯದ  ನಂತರವೂ ಹಳೆ ಒಪ್ಪಂದಗಳನ್ನು ನ್ಯಾಯಾಧಿಕರಣ ಪರಿಗಣಿಸಿ ತೀರ್ಪು ನೀಡಿರುವುದರಿಂದ ರಾಜ್ಯಕ್ಕೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ತಮ್ಮ ವಾದ ಮಂಡಿಸಿದ್ದರು.

ಕಾವೇರಿ ನ್ಯಾಯಾಧಿಕರಣ ತೀರ್ಪುನೀಡುವಾಗ 1991ರ ಜನಗಣತಿಯನ್ನು ಆಧರಿಸಿ ಬೆಂಗಳೂರಿಗೆ ಕುಡಿಯುವ ನೀರನ್ನು ನಿಗಧಿ ಮಾಡಿದೆ. ಈಗ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 2011ರ ಜನಗಣತಿಯ ಮಾಹಿತಿಗಳನ್ನು ಆಧರಿಸಿ ಬೆಂಗಳೂರಿಗೆ ನೀರನ್ನು ನೀಡಬೇಕೆಂದು‌ ಕರ್ನಾಟಕದ ಪರ ವಕೀಲರು ವಾದ ಮಂಡಿಸಿದ್ದರು.

* ಕಾವೇರಿ ನಿರ್ವಹಣ ಮಂಡಳಿಗೆ ಪಟ್ಟು ಹಿಡಿದಿದ್ದ ತಮಿಳುನಾಡು
 
ಕಾವೇರಿ ಅಂತಿಮ ವಿಚಾರಣೆ ವೇಳೆ ತಮಿಳುನಾಡು ಪರ ವಾದ ಮಂಡಿಸಿದ್ದ ವಕೀಲ ಶೇಖರ್ ನಾಫಡೆ, ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಪಟ್ಟು ಹಿಡಿದಿದ್ದರು. ಕರ್ನಾಟಕದ ಕಾವೇರಿ ನೀರಾವರಿ ಪ್ರದೇಶವು ಮರಳು ಮಿಶ್ರಿತವಾಗಿರುವುದರಿಂದ, ಅಚ್ಚುಕಟ್ಟು ನೀರಾವರಿಗೆ ಯೋಗ್ಯವಲ್ಲ. ಆದ್ದರಿಂದ ಹನಿ ನೀರಾವರಿಗೆ ಉತ್ತೇಜನ ನೀಡಬೇಕು ಎಂದು ವಾದ ಮಂಡಿಸಿದ್ದರು.

Trending News