ಕಾಂಗ್ರೆಸ್ ಪ್ರಣಾಳಿಕೆ ರಾಜ್ಯದ ಜನತೆಯ ಧ್ವನಿ: ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

Last Updated : Apr 27, 2018, 11:15 AM IST
ಕಾಂಗ್ರೆಸ್ ಪ್ರಣಾಳಿಕೆ ರಾಜ್ಯದ ಜನತೆಯ ಧ್ವನಿ: ರಾಹುಲ್ ಗಾಂಧಿ title=
Pic : Twitter/@INCKarnataka

ಮಂಗಳೂರು : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ರಾಜ್ಯದ ಜನತೆಯ ಧ್ವನಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಇಲ್ಲಿನ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಮನದ ಮಾತನ್ನು ಮನ್ ಕಿ ಬಾತ್'ನಲ್ಲಿ ಹೇಳುತ್ತಾರೆ. ಆದರೆ ನಮ್ಮ ಪ್ರಣಾಳಿಕೆಯಲ್ಲಿ ಕರ್ನಾಟಕ ರಾಜ್ಯದ ಜನತೆಯ ಮನದ ಮಾತನ್ನು ಅಳವಡಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ರಾಜ್ಯದ ಜನತೆಯ ಧ್ವನಿಯಾಗಿದೆ ಎಂದರು. 

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಜೆಪಿಯಂತೆ ಕೇವಲ ನಾಲ್ಕೈದು ಜನ ಸೇರಿ ತಯಾರಿಸಿದ ಪ್ರಣಾಳಿಕೆಯಲ್ಲ; ಬಿಜೆಪಿ ಪ್ರಣಾಳಿಕೆಯಲ್ಲಿ ರೆಡ್ಡಿ ಸಹೋದರರ ಪ್ರಭಾವ ಇರಲಿದೆ, ಭ್ರಷ್ಟಾಚಾರ ಇರಲಿದೆ, ಅದು ಆರ್ಎಸ್ಎಸ್ ಪ್ರಣಾಳಿಕೆಯಾಗಲಿದೆ. ಅವರು ಬಸವಣ್ಣನಿಗೆ ಕೈ ಮುಗಿದು, ಹಾರ ಹಾಕಿ ನಮಸ್ಕರಿಸಬಹುದು, ಆದರೆ ಬಸವಣ್ಣನ ತತ್ವಗಳಿಗೆ ಬದ್ಧರಾಗಿಲ್ಲ ಟೀಕಿಸಿದರು.

ಈ ಬಾರಿ ಕರ್ನಾಟಕ ರಾಜ್ಯದ ಪ್ರದೇಶಾವಾರು ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದಿಂದ ಜನರಿಗೆ ಏನು ಬೇಕು ಎಂಬುದನ್ನು ತಿಳಿದು, ಕುಂದು ಕೊರತೆಗಳ ಪಟ್ಟಿ ತಯಾರಿಸಿ, ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಲಾಗಿದೆ. ಕಳೆದ ವರ್ಷ ನಮ್ಮ ಪಕ್ಷ ನೀಡಿದ್ದ ಭರವಸೆಗಳಲ್ಲಿ ಶೇ.95 ಭಾಗ ಈಡೇರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ ಎಂದು ನಿದರ್ಶನಗಳ ಮೂಲಕ ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್,  ಕೆಪಿಸಿಸಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Trending News