ಶಿಕ್ಷಣದ ಅನುಸಂಧಾನ ಮತ್ತು ಶಾಲೆಗಳಲ್ಲಿನ ಪಠ್ಯವಿಷಯಗಳು

Written by - Zee Kannada News Desk | Last Updated : Nov 28, 2023, 07:53 PM IST
  • ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮೂರು ನಿರ್ಣಾಯಕ ಅಂಶಗಳನ್ನು ನಿಭಾಯಿಸುತ್ತದೆ
  • ಹೀಗಿರದಿದ್ದರೆ ಈ ಒಟ್ಟಾರೆ ವಿಷಯಗಳ ಆಯೋಜನೆಯ ಅನುಷ್ಠಾನವು ಕಷ್ಟಕರವಾಗಿಸುತ್ತಿತ್ತು
  • ಮೊದಲಿಗೆ ಇದು ಎಲ್ಲ ವಿಷಯಗಳನ್ನು ಒಳಗೊಂಡ ‘ವೇಳಾಪಟ್ಟಿಯನ್ನು ರೂಪಿಸಲು ಅವಕಾಶʼವನ್ನು ಕಲ್ಪಿಸುತ್ತದೆ
ಶಿಕ್ಷಣದ ಅನುಸಂಧಾನ ಮತ್ತು ಶಾಲೆಗಳಲ್ಲಿನ ಪಠ್ಯವಿಷಯಗಳು title=

ಶಾಲಾ ಶಿಕ್ಷಣವನ್ನು ವಿಷಯಗಳ ಅಧ್ಯಯನದ ಸುತ್ತಲೂ ಸಂಯೋಜಿಸಲಾಗುತ್ತದೆ. ಮಕ್ಕಳು 11ನೇ ತರಗತಿಗೆ ತಲುಪುವ ತನಕ ನಾವು ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಮತ್ತು ಮುಂದೆ ಕಲಿಯಬೇಕಾದ ವಿಷಯವನ್ನು ಆಯ್ಕೆ ಮಾಡುವ ಅನಿವಾರ್ಯತೆಯು ಈ ಹಂತದಲ್ಲಿ ಉಂಟಾಗುತ್ತದೆ. ಪಠ್ಯವಿಷಯಗಳ ಆಯೋಜನೆ ಮತ್ತು ಶಾಲಾ ಮಂಡಳಿಗಳ ಅಗತ್ಯತೆಗಳು, ವಿವಿಧ ವಿಷಯಗಳನ್ನು ಕಲಿಸಲು ಶಾಲೆಗಳು ಹೊಂದಿರುವ ಸಾಮರ್ಥ್ಯ, ಸಮಾಜದ ನಿರೀಕ್ಷೆಗಳು, ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದ ಅಗತ್ಯತೆಗಳು ಮತ್ತು ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಬೇಡಿಕೆ, ಇವೆಲ್ಲವೂ ಈ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ವಿಜ್ಞಾನ, ಕಲೆ ಅಥವಾ ವಾಣಿಜ್ಯ – ಹೀಗೆ ಒಂದು ನಿರ್ದಿಷ್ಟ ಜ್ಞಾನ ಶಾಖೆಗೆ ಸೀಮಿತಗೊಳಿಸಲಾಗುತ್ತದೆ ಅಥವಾ ಕಟ್ಟುನಿಟ್ಟಾಗಿ ವಿಭಜಿಸಲಾಗುತ್ತದೆ. ಪ್ರತಿ ವಿಷಯವಾರು ಗುಂಪನ್ನು ಬಿಗುವಾಗಿ ವ್ಯಾಖ್ಯಾನಿಸಲಾಗುತ್ತದೆ ಮತ್ತು ಈ ಗುಂಪಿಗೆ ಇತರ ಕ್ಷೇತ್ರ ಮತ್ತು ವಿಷಯಗಳ ವಿದ್ಯಾರ್ಥಿಗಳು ಹತ್ತಿರ ಬರದಂತೆ ನೋಡಿಕೊಳ್ಳಲಾಗುತ್ತದೆ. ಇಂತಹ ಪ್ರತ್ಯೇಕತೆಯು ನಮ್ಮ ಶಿಕ್ಷಣವನ್ನು ದುರ್ಬಲಗೊಳಿಸುತ್ತಿದ್ದರೂ ಈ ವಿಷಯಕ್ಕೆ ಹೆಚ್ಚಿನ ಸಾರ್ವಜನಿಕ ಮಹತ್ವವನ್ನು ನೀಡಲಾಗಿಲ್ಲ. ಇಂತಹ ದೌರ್ಬಲ್ಯವು ಈಗ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ʻಅಂತರ್‌ ಶಿಸ್ತೀಯ ಶಿಕ್ಷಣʼದ ಅಗತ್ಯತೆಯನ್ನು ಆಗಾಗ್ಗೆ ವ್ಯಕ್ತಪಡಿಸಲಾಗುತ್ತಿದೆ. ಅಲ್ಲದೆ ಉದ್ಯೋಗ ಮಾರುಕಟ್ಟೆಯ ಬೇಡಿಕೆಯು ವಿವಿಧ ವಿಷಯಗಳು ಮತ್ತು ಕ್ಷೇತ್ರಗಳಿಗೆ ತೆರೆದುಕೊಳ್ಳುವುದು ಮತ್ತು ಅರಿವನ್ನು ಹೊಂದಿರುವುದನ್ನು ಬೇಡುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 (ಎನ್‌.ಸಿ.ಎಫ್‌) ಈ ವಿಷಯದ ಕುರಿತು ಕಾಳಜಿಯನ್ನು ಹೊಂದಿರುತ್ತದೆ. 

ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕು? ಈ ಅಂಶವು 11-12ನೇ ತರಗತಿಯ ಮಟ್ಟದಲ್ಲಿ ಮಾತ್ರವೇ ಪ್ರಮುಖವಾದುದಲ್ಲ. ಬದಲಾಗಿ ಶಾಲೆಗೆ ಕಾಲಿಡುವ ದಿನದಿಂದಲೇ, ಅಂದರೆ ಶಾಲಾಪೂರ್ವದ ಕಲಿಕೆಯಿಂದ 10ನೇ ತರಗತಿಯವರೆಗಿನ ಮೊದಲ 13 ವರ್ಷಗಳಲ್ಲಿ ಇದು ನಿರ್ಣಾಯಕವೆನಿಸುತ್ತದೆ. ಈ ಅಂಕಣ ಹಾಗೂ ಮುಂದಿನ ಕೆಲವು ಅಂಕಣಗಳು, ಶಾಲಾ ವಿಷಯಗಳ ಕುರಿತು ಎನ್‌.ಸಿ.ಎಫ್‌ ಆಯ್ದುಕೊಂಡಿರುವ ಮಾರ್ಗವನ್ನು ಶೋಧಿಸುತ್ತವೆ.

ಮೂರರಿಂದ ಎಂಟನೇ ವಯಸ್ಸಿನವರೆಗಿನ ಬುನಾದಿ ಹಂತದಲ್ಲಿ (ಅಂದರೆ ಶಾಲಾಪೂರ್ವದ ಹಂತದಿಂದ ಎರಡನೇ ತರಗತಿಯ ತನಕ) ಶಿಕ್ಷಣವು ʻಆಟ ಆಧಾರಿತʼವಾಗಿರುತ್ತದೆ. ಅಂದರೆ ಇದು ಅಸಂಘಟಿತವಾಗಿರುವುದು ಎಂದಲ್ಲ. ಬದಲಾಗಿ
ಮಗುವಿಗೆ ಆಟದಂತೆ ಭಾಸವಾಗುವ ರೀತಿಯಲ್ಲಿ ಇದನ್ನು ಸಂಘಟಿಸಲಾಗುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಆಟದ ಮೂಲಕ ಚೆನ್ನಾಗಿ ಕಲಿಯುತ್ತಾರೆ. ಇಂತಹ ಆಟವನ್ನು ಕಥೆಗಳು, ಆಟಗಳು, ಸಂಗೀತ, ದೈಹಿಕ ಚಟುವಟಿಕೆಗಳು ಹಾಗೂ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಒಳಗೊಂಡಂತೆ ಮಗುವಿನ ಸಮಗ್ರ ಬೆಳವಣಿಗೆಯನ್ನು ಸಾಧಿಸಲು ಒಟ್ಟಾಗಿ ಸಹಾಯ ಮಾಡುವ ಇತರ ಅನೇಕ ವಿಧಾನಗಳ ಮೂಲಕ ಸಂಘಟಿಸಬಹುದು. ಒಂದನೇ ಮತ್ತು ಎರಡನೇ ತರಗತಿಗಳಲ್ಲಿ ಅಧ್ಯಯನವುಭಾಷೆ ಮತ್ತು ಗಣಿತ ಇತ್ಯಾದಿ ವಿಷಯಗಳಾಗಿ ಔಪಚಾರಿಕ ರೂಪವನ್ನು ಪಡೆಯುತ್ತದೆ. ಆದರೆ ಆಟ ಆಧಾರಿತ ಬೋಧನಾ ವಿಧಾನದ ಕಾರಣ ಇದು ವಿದ್ಯಾರ್ಥಿಗಳನ್ನು ವ್ಯಾಪಕ ವಿಷಯಗಳಾದ  ಸಾಮಾಜಿಕ ಬದುಕು ಮತ್ತು ಭೌತಿಕ ಪರಿಸರ, ಕಲೆ ಮತ್ತು ಸಂಗೀತ, ಕ್ರೀಡೆ, ಕೈಯ್ಯಾರೆ ಕೆಲಸ ಮಾಡುವುದು ಇತ್ಯಾದಿಗಳೊಂದಿಗೆ ಸಂಬಂಧೀಕರಿಸಿಕೊಂಡಿರುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಲಿಕೆ ಆಗುತ್ತದೆ. ಮೂರನೇ ತರಗತಿಯಿಂದ, ವಿಷಯಗಳ ಸುತ್ತ ಕಲಿಕೆಯನ್ನು ಆಯೋಜಿಸಲಾಗುತ್ತದೆ. ಹಾಗೂ ಪ್ರತೀ ವಯೋಮಾನದ ಗುಂಪಿಗೆ ತಕ್ಕಂತೆ ಸೂಕ್ತ ಬೋಧನಾ ವಿಧಾನವನ್ನು ಆರಿಸಲಾಗುತ್ತದೆ.ಮೂರರಿಂದ ಐದನೇ ತರಗತಿಯ ಪೂರ್ವತಯಾರಿ ಹಂತದಲ್ಲಿ, ಬುನಾದಿ ಹಂತದಿಂದ ಸಂಗೀತ ಸೇರಿದಂತೆ ಕಲೆ, ದೈಹಿಕ ಶಿಕ್ಷಣ ಮತ್ತು ಯೋಗಕ್ಷೇಮ, ಹಾಗೂ ಮಗುವಿನ ಸಾಮಾಜಿಕ ಭೌತಿಕ ಪರಿಸರದ ಅಂತರ್‌ ಶಿಸ್ತೀಯ ಕಲಿಕೆ ಎನಿಸಿರುವ ʻನಮ್ಮ ಸುತ್ತಲಿನ ಪ್ರಪಂಚʼ ಎನ್ನುವ ಮೂರು ವಿಷಯಗಳನ್ನು ಈ ವಿಷಯಗಳ ಪಟ್ಟಿಗೆ ಸೇರಿಸಲಾಗುತ್ತದೆ. 

ಆರರಿಂದ ಎಂಟನೇ ತರಗತಿಯಲ್ಲಿ, ಅಥವಾ ಮಾಧ್ಯಮಿಕ ಹಂತದಲ್ಲಿ, ʻನಮ್ಮ ಸುತ್ತಲಿನ ಪ್ರಪಂಚʼವು ಒಂದು ವಿಷಯವಾಗಿ ಮುಂದುವರಿಯುವುದಿಲ್ಲ. ಬದಲಾಗಿ ನಾಲ್ಕು ವಿಷಯಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಅವೆಂದರೆ: ಮೂರನೇ ಭಾಷೆ,ಸಾಮಾಜಿಕ ವಿಜ್ಞಾನ, ವಿಜ್ಞಾನ ಮತ್ತು ವೃತ್ತಿ ಆಧರಿತ ಶಿಕ್ಷಣ. ಪ್ರೌಢ ಶಿಕ್ಷಣದ ಮೊದಲನೇ ಹಂತವಾದ 9 ಮತ್ತು 10ನೇ ತರಗತಿಗಳಲ್ಲಿ ಒಂದು ಅಂತರ್‌ ಶಿಸ್ತೀಯ ವಿಷಯವನ್ನು ಸೇರಿಸಲಾಗುತ್ತದೆ. ಒಂಬತ್ತನೇ ತರಗತಿಯಲ್ಲಿ, ನೈತಿಕ ಮತ್ತು ಸನ್ನಡತೆಯ ಆಲೋಚನೆಗೆ ಸಂಬಂಧಿಸಿದ ʻಸಮಾಜದಲ್ಲಿ ವ್ಯಕ್ತಿʼ ಮತ್ತು 10ನೇ ತರಗತಿಯಲ್ಲಿ ʻಪರಿಸರ ಶಿಕ್ಷಣʼ ಅಂತರ್ ಶಿಸ್ತೀಯ ವಿಷಯಗಳನ್ನು ಸೇರಿಸಲಾಗುತ್ತದೆ. ಪ್ರೌಢ ಶಿಕ್ಷಣದ ಎರಡನೇ ಹಂತದ 11 ಹಾಗೂ 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು, ಅಂತರ್‌ ಶಿಸ್ತೀಯ ಜ್ಞಾನಕ್ಕೆ ಮುಕ್ತವಾಗಿ ತೆರೆದುಕೊಂಡು ಸಂಕುಚಿತ ವರ್ಗೀಕರಣವನ್ನು ಮೀರಲು ಸಾಧ್ಯವಾಗುವಂತೆ ಹೊಸ ವಿಧಾನದಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮೂರು ನಿರ್ಣಾಯಕ ಅಂಶಗಳನ್ನು ನಿಭಾಯಿಸುತ್ತದೆ. ಹೀಗಿರದಿದ್ದರೆ ಈ ಒಟ್ಟಾರೆ ವಿಷಯಗಳ ಆಯೋಜನೆಯ ಅನುಷ್ಠಾನವು ಕಷ್ಟಕರವಾಗಿಸುತ್ತಿತ್ತು. ಮೊದಲಿಗೆ ಇದು ಎಲ್ಲ ವಿಷಯಗಳನ್ನು ಒಳಗೊಂಡ ‘ವೇಳಾಪಟ್ಟಿಯನ್ನು ರೂಪಿಸಲು ಅವಕಾಶʼವನ್ನು ಕಲ್ಪಿಸುತ್ತದೆ. ಕಲೆ ಮತ್ತು ವೃತ್ತಿ ಆಧರಿತ ಶಿಕ್ಷಣವನ್ನು ಹೆಸರಿಗಷ್ಟೇ ಅಲ್ಲದೆ ಸರಿಯಾಗಿ ಕಲಿಸುವಂತೆ ಮಾಡುತ್ತದೆ. ಸಮಾಜ ವಿಜ್ಞಾನ ಮತ್ತು ವಿಜ್ಞಾನ ಇತ್ಯಾದಿ ವಿಷಯಗಳ ಪಠ್ಯದ ಹೊರೆಯನ್ನು ಕಡಿತಗೊಳಿಸಿ ಇದಕ್ಕೆ ಅವಕಾಶ ಮಾಡಿಕೊಡುತ್ತದೆ. ವಿಷಯಗಳನ್ನು ವಿಪರೀತವಾಗಿ ತುರುಕದೆ ಕಡಿತಗೊಳಿಸಿ ಅನಿವಾರ್ಯ ಮಾಹಿತಿಯನ್ನು ಉರುಹೊಡೆಯುವುದನ್ನು ತಪ್ಪಿಸುವ ಮೂಲಕ ನೈಜ ತಿಳುವಳಿಕೆಯೊಂದಿಗೆ ಈ ವಿಷಯಗಳ ಆಳವಾದ ಕಲಿಕೆಗೆ ಹಾಗೂ ಅತಿ ಮುಖ್ಯ ಸಾಮರ್ಥ್ಯವಾದ ತರ್ಕಬದ್ಧ ಆಲೋಚನೆಯ ಬೇಳವಣಿಗೆಗೆ ಸಹಾಯ ಮಾಡುತ್ತದೆ. 

ಎರಡನೆಯದಾಗಿ, ಇದು ಎಲ್ಲಾ ವಿಷಯಗಳು ಸಮಾನ ಮಹತ್ವದ್ದು ಎಂಬುದನ್ನು  ಸ್ಥಾಪಿಸುತ್ತದೆ. ಎಲ್ಲಾ ವಿಷಯಗಳಿಗೆ ಸಾಕಷ್ಟು ಸಮಯ ಮತ್ತು ಔಪಚಾರಿಕ ಮೌಲ್ಯಮಾಪನವನ್ನು ಮೀಸಲಿಡುವ ಮೂಲಕ ಇದನ್ನು ಸಾಧ್ಯವಾಗಿಸಲಾಗುತ್ತದೆ.

ಮೂರನೆಯದಾಗಿ, ಪ್ರಸ್ತುತವಾಗಿ ಶಾಲೆಯು ಹೊಂದಿರುವ ಸಂಪನ್ಮೂಲಗಳು ಸೇರಿದಂತೆ ಇರುವ ಇತಿಮಿತಿಗಳೊಳಗೆ ಈ ವಿಷಯಗಳನ್ನು ಕಲಿಸಲು ಮಾರ್ಗವೊಂದನ್ನು ಇದು ಅಭಿವೃದ್ಧಿಪಡಿಸುತ್ತದೆ. ಉದಾಹರಣೆಗೆ, ಭಾರತದ ಹೆಚ್ಚಿನ ಶಾಲೆಗಳು ವೃತ್ತಿ ಆಧರಿತ ಕೌಶಲ್ಯಗಳನ್ನು ಕಲಿಸುವ ಶಿಕ್ಷಕರನ್ನು ಹೊಂದಿಲ್ಲ. ಹೀಗಾಗಿ, ಅಗತ್ಯ ತರಬೇತಿ ಮತ್ತು ಸ್ಥಳೀಯ ಸಮುದಾಯದಸಂಪನ್ಮೂಲಗಳ ಮೂಲಕ ಈಗ ಇರುವ ಶಿಕ್ಷಕರೇ ನಿರ್ವಹಿಸಬಹುದಾದ ಕಲಿಕಾ ಮಾನದಂಡಗಳು ಮತ್ತು ವಿಷಯಗಳ ಆಯ್ಕೆಯನ್ನು ಹೊಂದಿರುವ ಪಠ್ಯಕ್ರಮ ವಿಧಾನವನ್ನು ಇದು ರೂಪಿಸುತ್ತದೆ. ಪಠ್ಯಕ್ರಮದ ವಿನ್ಯಾಸದೊಳಗೆ ಈ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಎನ್‌.ಸಿ.ಎಫ್‌ ಅನ್ನು ಅದರ ಮೂಲ ಆಶಯಕ್ಕೆ ಬದ್ಧವಾಗಿ ಜಾರಿಗೊಳಿಸಬಹುದು.

ಈ ಎಲ್ಲ ವಿಷಯಗಳನ್ನು ಸಮಗ್ರವಾಗಿ ಆಯೋಜಿಸಿ ಬೋಧನೆ ಮತ್ತು ಕಲಿಕೆಯನ್ನು ಪರಿಣಾಮಕಾರಿಯಾಗಿಸುವ ಮೂಲಕ ನಮ್ಮ ಮಕ್ಕಳಿಗೆ ಅಗತ್ಯವಿರುವ ಜ್ಞಾನ, ಸಾಮರ್ಥ್ಯಗಳು, ಮೌಲ್ಯಗಳು ಮತ್ತು ಮನೋಭಾವನೆಯನ್ನು ಸಂಪೂರ್ಣವಾಗಿ ಸಾಧ್ಯವಾಗಿಸಬಹುದಾಗಿದೆ. ಎನ್ ಸಿ ಎಫ್ ನ ಉದ್ದೇಶ ಕೂಡಾ ಇದೇ ಆಗಿದೆ.  ಹಲವು ವಿಷಯಗಳ ಕಲಿಕಾ ಗುರಿಗಳ ನಡುವೆ ಸಹಮತವನ್ನು ಸ್ಥಾಪಿಸುವುದರೊಂದಿಗೆ ಈ ʻಕಲಿಕಾ ಮಾನದಂಡʼಗಳನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಸಮಾಜ ವಿಜ್ಞಾನದಲ್ಲಿನ ಕಲಿಕಾ ಗುರಿಗೆ ಕಲೆಯ ಅಗತ್ಯ ಬೀಳುತ್ತದೆ. ಇದು ಪ್ರತ್ಯೇಕತೆಯನ್ನು ತೊಡೆದು ಹಾಕುತ್ತದೆ ಮತ್ತು ವಿವಿಧ ವಿಷಯಗಳ ನಡುವಿನ ಸಹಯೋಗವನ್ನು ಪ್ರೋತ್ಸಾಹಿಸುತ್ತದೆ.

ಮನುಕುಲ ಸಂಬಂಧಿ ಜ್ಞಾನ ಮತ್ತು ಸಾಮರ್ಥ್ಯಗಳ ಸಂಪೂರ್ಣ ವ್ಯಾಪ್ತಿಯ ಅಧ್ಯಯನವನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ಅನುಕೂಲಿಸುವಂತೆ ಮಾಡುವುದು ಹಾಗೂ ಈ ವಿಷಯಗಳನ್ನು ವಿಭಜಿಸದೇ ಅವು ಪರಸ್ಪರ ಅನುಸಂಧಾನದಲ್ಲಿ ತೊಡಗುವ ರೀತಿಯಲ್ಲಿ ಇವನ್ನು ಸಂಯೋಜಿಸುವುದರಿಂದ ಅನಿಶ್ಚಿತವೆನಿಸಿರುವ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭವಿಷ್ಯಕ್ಕೆ ನಮ್ಮ ಮಕ್ಕಳನ್ನು ಚೆನ್ನಾಗಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ.

- ಲೇಖಕರು: ಅನುರಾಗ್‌ ಬೆಹರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News