James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ!

ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌(Puneeth Rajkumar BirthDay) ಅವರ ಜನ್ಮದಿನ. ಹಾಗಾಗಿ ಅದೇ ದಿನ ಜೇಮ್ಸ್‌ ಚಿತ್ರ ಬಿಡುಗಡೆ ಮಾಡಲು ಈಗಾಗಲೇ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜಕುಮಾರನಿಗಾಗಿ ಥಿಯೇಟರ್‌ಗಳು ಕೂಡ ಸಿಂಗಾರಗೊಳ್ಳುತ್ತಿವೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯ, ವಿದೇಶದಲ್ಲೂ ಜೇಮ್ಸ್‌  ಬರುವಿಕೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 

Written by - YASHODHA POOJARI | Last Updated : Mar 14, 2022, 08:13 PM IST
  • ಮಾರ್ಚ್‌ 17 ರಂದು ನಮಗೆ ದರ್ಶನ ನೀಡಲು ಅವ್ರು ಬರುತ್ತಿದ್ದಾರೆ
  • ಜೇಮ್ಸ್‌ ಸಿನಿಮಾ ಇದೀಗ ಕರುನಾಡಿನ ಜನರ ಆಸ್ತಿಯಾಗಿದೆ.
  • ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ
James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ! title=

ಬೆಂಗಳೂರು : 46 ವರ್ಷಗಳ ಕಾಲ ಆ ಬೆಟ್ಟದ ಹೂವು ಭೂಮಿ ಮೇಲೆ ನೆಲೆ ನಿಂತು ಎಲ್ಲರನ್ನೂ ನಕ್ಕು ನಗಿಸಿ ಕೈಗೆಟುಕದ ನಕ್ಷತ್ರದಂತೆ ನಮ್ಮಿಂದ ದೂರವಾಗಿದೆ. ಮಾರ್ಚ್‌ 17 ರಂದು ನಮಗೆ ದರ್ಶನ ನೀಡಲು ಅವ್ರು ಬರುತ್ತಿದ್ದಾರೆ. ಅವರಿಗಾಗಿ ಭಾನುವಾರ ಒಂದು ವಿಶೇಷ ಕಾರ್ಯಕ್ರಮ ನಡೆದಿದೆ. ಯಾರವರು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿದೆ. ಅವರನ್ನು ನೆನೆದ ದೊಡ್ಮನೆ ಕುಟುಂಬದವರು ಭಾವುಕರಾಗಿದ್ರು. ಅಷ್ಟೇ ಅಲ್ಲ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಕಣ್ಣೀರು ಸುರಿಸಿದ್ದಾರೆ.

ಹೌದು, ಜೇಮ್ಸ್‌ ಸಿನಿಮಾ(James Movie) ಇದೀಗ ಕರುನಾಡಿನ ಜನರ ಆಸ್ತಿಯಾಗಿದೆ. ಆ ಸಿನಿಮಾ ರಿಲೀಸ್‌ ಕ್ಷಣಕ್ಕಾಗಿ ಇಡೀ ದೇಶವಷ್ಟೇ ಅಲ್ಲ ಹೊರ ದೇಶಗಳ ಜನರೂ ಕಾದು ಕುಳಿತ್ತಿದ್ದಾರೆ. ಇದು ಅಪ್ಪು ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿ ಎಂಥದ್ದು ಅನ್ನೋದನ್ನು ತೋರಿಸುತ್ತೆ. ಇದೀಗ ಎಲ್ಲೆಡೆ ಅಪ್ಪು ಅಪ್ಪು ಅನ್ನೋ ಹೆಸರು ಬಿಟ್ಟರೆ ಇನ್ನೇನೂ ಕೇಳುತ್ತಿಲ್ಲ. ಭಾನುವಾರ ಬೆಂಗಳೂರಿನಲ್ಲಿ ಅಪ್ಪು ಕೊನೆಯ ಸಿನಿಮಾ ಜೇಮ್ಸ್‌ ಪ್ರೀ ರಿಲೀಸ್ ಈವೆಂಟ್‌ ತುಂಬಾ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಅಪ್ಪು ನೆನೆದು ಭಾವುಕರಾಗಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ : Khadak Halli Hudugaru : ಡಾ. ರಾಜ್‌ ನಿವಾಸದ ಮುಂದೆ ʼಖಡಕ್‌ ಹಳ್ಳಿ ಹುಡುಗರುʼ

ಬೆಟ್ಟದ ಹೂವನ್ನು ಕಳೆದುಕೊಂಡ ಜನರು ದೇವರಿಗೆ ಹಿಡಿಶಾಪ ಹಾಕಿದ್ರು. ಬರೀ ಕಣ್ಣೀರು - ಪುನೀತ್‌(Puneeth Rajkumar)ಮಯವಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಏರಿ ಮಾತನಾಡಿದವರೆಲ್ಲರೂ ಅಪ್ಪು ನೆನೆದು ಭಾವುಕರಾಗಿದ್ರು. ಅದರಲ್ಲಿಯೂ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಆಡಿದ ಮಾತುಗಳು ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ದುಃಖ ಉಮ್ಮಳಿಸುವಂತೆ ಮಾಡಿದವು.

ದುಃಖದಿಂದಲೇ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌(Raghavendra Rajkumar), ನಾನು ನನ್ನ ತಮ್ಮನನ್ನು ಹುಡುಕಿಕೊಂಡು ಹೋಗುತ್ತೇನೆ ಎಂದುಬಿಟ್ಟರು. ಇದನ್ನು ಕೇಳಿ ಶಿವಣ್ಣ ತುಂಬಾ ದುಃಖಿತರಾದರು. ಶಿವಣ್ಣ ಮಾತನಾಡುವ ಸರದಿ ಬಂದಾಗ ಅವರ ಬಾಯಿಂದ ಒಂದು ಮಾತು ಕೂಡ ಬರಲಿಲ್ಲ. ತೀವ್ರ ಭಾವೋದ್ವೇಗಕ್ಕೆ ಒಳಗಾದ ಅವರು, ರಾಘವೇಂದ್ರ ರಾಜ್‌ಕುಮಾರ್ ಅವರನ್ನು ತಬ್ಬಿಕೊಂಡು ಅತ್ತುಬಿಟ್ಟರು.

 

ನಂತರ ಮಾತನಾಡಿದ ಶಿವಣ್ಣ(Shivarajkumar), 'ಜೇಮ್ಸ್' ಸಿನಿಮಾದ ನಟರಿಗೆ, ತಂತ್ರಜ್ಞರಿಗೆ ವಂದಿಸಿ, ಅಭಿನಂದಿಸಿದರು. 'ರಾಘು ಮಾತನಾಡಿದ್ದು ನೋವು ತರಿಸಿತು. ಇವರಿಬ್ಬರೂ ನನಗಿಂತ ಚಿಕ್ಕವರು. ನಾನು ಹೇಗೆ ಇದನ್ನೆಲ್ಲಾ ನೋಡುತ್ತಾ ಇರಬೇಕು? ಅನ್ನೋ ಪ್ರಶ್ನೆ ಅಲ್ಲಿ ನೆರೆದಿದ್ದವರ ದುಃಖವನ್ನೂ ಇಮ್ಮಡಿಯಾಗಿಸಿತು. ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಇರುತ್ತೇವೆ. ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ, ಹಾಡುತ್ತೇವೆ, ಕುಣಿಯುತ್ತೇವೆ, ಡಬ್ಬಿಂಗ್ ಮಾಡುತ್ತೇವೆ. ಆದರೆ ಆ ನೋವು ಒಳಗಡೆಯೇ ಇದೆ. ಪುನೀತ್‌ ಅಕಾಲಿಕವಾಗಿ ನಮ್ಮನ್ನು ಬಿಟ್ಟು ಹೋದ. ರಾಘು ಆರೋಗ್ಯ ಹೀಗೆ ಆಯಿತು. ಇವರು ನನಗಿಂತಲೂ ಸಣ್ಣವರು. ಇವರನ್ನು ಹೀಗೆಲ್ಲಾ ನೋಡುವುದು ನನಗೆ ಹೇಗೆ ತಾನೆ ಸಾಧ್ಯ?'' ಎಂದು ಮತ್ತೆ ಭಾವುಕರಾದರು ಶಿವಣ್ಣ. ನಾವು ಐದು ಜನ ಸಹೋದರ-ಸಹೋದರಿಯರು ಒಟ್ಟಿಗೆ ಇದ್ದೆವು. ಈಗ ನಮ್ಮ ಜೊತೆ ಒಬ್ಬ ಇಲ್ಲ. ಅದರಲ್ಲೂ ಚಿಕ್ಕವನಾಗಿದ್ದ ಅಪ್ಪು ಹೋಗಿದ್ದು ಎಂದೂ ಮಾಯದ ನೋವು. ಅಪ್ಪು ಎಲ್ಲರ ಮುದ್ದಿನ ಮಗನಾಗಿದ್ದ. ಎಲ್ಲರಿಗೂ ಅವನೆಂದರೆ ಅಚ್ಚುಮೆಚ್ಚು. ಅವನ ಅಗಲಿಕೆ ಯಾರಿಗೂ ಅರಗಿಸಿಕೊಳ್ಳಲು ಆಗಿಲ್ಲ. ಅಪ್ಪ-ಅಮ್ಮ ನಮ್ಮ ಜೊತೆ ನೂರಾರು ವರ್ಷ ಇರ್ತಾರೆ ಅಂದುಕೊಂಡಿದ್ದೆ. ಅವರು ಹೋಗಿಬಿಟ್ಟರು. ಆ ದುಃಖದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಅಪ್ಪು ಹೋಗಿಬಿಟ್ಟ ಅಂದ್ರು ಶಿವಣ್ಣ. 

 

ಇದನ್ನೂ ಓದಿ : ಕರ್ನಾಟಕ ಬಳಿಕ ಗೋವಾದಲ್ಲಿಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ

ಜೇಮ್ಸ್' ಸಿನಿಮಾಕ್ಕೆ ಡಬ್ಬಿಂಗ್‌ ಮಾಡಿದ ಬಗ್ಗೆ ಮಾತನಾಡಿದ ಶಿವಣ್ಣ, ''ಜೇಮ್ಸ್' ಸಿನಿಮಾ(James)ಕ್ಕೆ ಡಬ್ಬಿಂಗ್ ಮಾಡಲು ಬಹಳ ಕಷ್ಟವಾಯಿತು. ಯಾವ ನಟನಿಗೂ ಇನ್ನೊಬ್ಬ ವ್ಯಕ್ತಿ ಧ್ವನಿ ನೀಡಲಾಗದು. ಅದರಲ್ಲೂ ಇಂತಹ ಸನ್ನಿವೇಶದಲ್ಲಿ ಧ್ವನಿ ನೀಡುವುದು, ಅದೂ ಸ್ವಂತ ತಮ್ಮನಿಗೆ ಧ್ವನಿ ನೀಡುವುದು ಬಹಳ ನೋವಿನ ಸಂಗತಿ. ಆದರೂ ಡಬ್ಬಿಂಗ್ ಮಾಡಿದ್ದೇನೆ. ''ಇಬ್ಬರೂ ಸೇರಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ನಮ್ಮ ಬಹು ವರ್ಷಗಳ ಕನಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಕತೆಗಳನ್ನು ಕೇಳುತ್ತಲೇ ಇದ್ದೆವು. ಆದರೆ ಅದು ಸಾಧ್ಯವೇ ಆಗಲಿಲ್ಲ. ಆದರೆ ಒಬ್ಬ ತೆಲುಗು ನಿರ್ದೇಶಕರು ಬಂದು ಕತೆ ಹೇಳಿದ್ದಾರೆ. ಆ ಸಿನಿಮಾದಲ್ಲಿ ನನ್ನನ್ನು ಅಪ್ಪುವನ್ನು ನೀವು ಒಟ್ಟಿಗೆ ನೋಡುತ್ತೀರಾ. ಆ ಸಿನಿಮಾ ನನ್ನ ಕಡೆಯಿಂದ ಅಪ್ಪುಗೆ ಡೆಡಿಕೇಶನ್ ಆಗಿರುತ್ತದೆ'' ಎಂದರು ಶಿವರಾಜ್ ಕುಮಾರ್. ಇನ್ನು 'ಜೇಮ್ಸ್' ಸಿನಿಮಾದ ಬಿಡುಗಡೆ ದಿನ ನಾನು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಸಿನಿಮಾ ನೋಡುತ್ತೇನೆ'' ಎಂದರು. ಅಲ್ಲದೆ ಸಿನಿಮಾದ 25ನೇ ದಿನಕ್ಕೆ ಹೊಸಪೇಟೆಗೆ ಹೋಗಿ ಅಲ್ಲಿ ಕಾರ್ಯಕ್ರಮ ಮಾಡುವುದಾಗಿಯೂ ಶಿವಣ್ಣ ಭರವಸೆ ನೀಡಿದರು.

 

ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌(Puneeth Rajkumar BirthDay) ಅವರ ಜನ್ಮದಿನ. ಹಾಗಾಗಿ ಅದೇ ದಿನ ಜೇಮ್ಸ್‌ ಚಿತ್ರ ಬಿಡುಗಡೆ ಮಾಡಲು ಈಗಾಗಲೇ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜಕುಮಾರನಿಗಾಗಿ ಥಿಯೇಟರ್‌ಗಳು ಕೂಡ ಸಿಂಗಾರಗೊಳ್ಳುತ್ತಿವೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯ, ವಿದೇಶದಲ್ಲೂ ಜೇಮ್ಸ್‌  ಬರುವಿಕೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News