ಅಯೋಧ್ಯೆ ವಿವಾದ: ಆಗಸ್ಟ್ 15ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

"ಸಂಧಾನ ಸಮಿತಿಯಿಂದ ವರದಿಯನ್ನು ಸ್ವೀಕರಿಸಲಾಗಿದ್ದು, ಸಮಿತಿಯು ಆಗಸ್ಟ್ 15ರ ವರೆಗೆ ಹೆಚ್ಚುವರಿ ಕಾಲಾವಕಾಶವನ್ನು ಕೋರಿದೆ" ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ತಿಳಿಸಿದೆ. 

Last Updated : May 10, 2019, 12:04 PM IST
ಅಯೋಧ್ಯೆ ವಿವಾದ: ಆಗಸ್ಟ್ 15ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ title=

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣ ಇತ್ಯರ್ಥಕ್ಕಾಗಿ ಸಂಧಾನ ಸಮಿತಿಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ರಾಮಜನ್ಮ ಭೂಮಿ-ಬಾಬರಿ ಮಸೀದಿ ಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ಮಧ್ಯಸ್ಥಿಕೆ ಸಮಿತಿ ಮುಂದಿನ ಆಗಸ್ಟ್​ 15ರವರೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿದೆ.

"ಸಂಧಾನ ಸಮಿತಿಯಿಂದ ವರದಿಯನ್ನು ಸ್ವೀಕರಿಸಲಾಗಿದ್ದು, ಸಮಿತಿಯು ಆಗಸ್ಟ್ 15ರ ವರೆಗೆ ಹೆಚ್ಚುವರಿ ಕಾಲಾವಕಾಶವನ್ನು ಕೋರಿದೆ" ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ತಿಳಿಸಿದೆ. ಪಂಚ ಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್, ನ್ಯಾಯಮೂರ್ತಿಗಳಾದ ಎಸ್​.ಎ.ಬೊಬ್ಬೆ, ಡಿ.ವೈ.ಚಂದ್ರಚೂಡ್​, ಅಶೋಕ್​ ಭೂಷಣ್​ ಹಾಗೂ ಅಬ್ದುಲ್​ ನಜೀರ್​ ಇದ್ದಾರೆ.

ಮಾರ್ಚ್ 8 ರಂದು ಅಯೋಧ್ಯೆ ವಿವಾದ ಪ್ರಕರಣದ ಇತ್ಯರ್ಥಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಫ್.ಎಂ.ಐ ಖಲಿಫುಲ್ಲಾ, ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿತ್ತು. ಅಲ್ಲದೆ, ಎಂಟು ವಾರಗಳಲ್ಲಿ ಈ ಸಮಿತಿ ವರದಿ ಸಲ್ಲಿಸುವಂತೆಯೂ ಆದೇಶ ನೀಡಿತ್ತು. ಅದರಂತೆ ಇಂದು ಸಮಿತಿ ವರದಿ ಸಲ್ಲಿಸಿದ್ದು, ಹೆಚ್ಚುವರಿ ಕಾಲಾವಕಾಶ ಕೋರಿದೆ. 
 

Trending News