ನವದೆಹಲಿ: ಬಹುನಿರೀಕ್ಷಿತ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಗೊಳ್ಳಲು ದಿನಗಣನೆ ಆರಂಭವಾಗಿದೆ. ಏತನ್ಮಧ್ಯೆ, ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರವು ಉತ್ತರ ಪ್ರದೇಶಕ್ಕೆ ಸುಮಾರು 4000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಯನ್ನು ರವಾನಿಸಿದೆ.
ಗೃಹ ಸಚಿವಾಲಯವು (ಎಂಎಚ್ಎ) ಸೋಮವಾರ ಉತ್ತರಪ್ರದೇಶಕ್ಕೆ 15 ಅರೆಸೈನಿಕ ಪಡೆ ತುಕಡಿಗಳನ್ನು ರವಾನಿಸಲು ಸೂಚಿಸಿದ್ದು, ಹೆಚ್ಚುವರಿ ಅರೆಸೈನಿಕ ತುಕಡಿಗಳಿಗೆ ನವೆಂಬರ್ 18 ರವರೆಗೆ ರಾಜ್ಯದಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ನವೆಂಬರ್ 17 ರ ಮೊದಲು, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿ ಆಗಲಿದ್ದಾರೆ. ಅದಕ್ಕೂ ಮೊದಲು ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಎಎನ್ಐ ವರದಿಯ ಪ್ರಕಾರ, ಅರೆಸೇನಾ ಪಡೆಗಳ 15 ಕಂಪನಿಗಳಿಗೆ ಉತ್ತರ ಪ್ರದೇಶಕ್ಕೆ ನಿಯೋಜಿಸಲಾಗಿದೆ. ಬಿಎಸ್ಎಫ್, ಆರ್ಎಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್ಬಿ ತಲಾ ಮೂರು ತುಕಡಿಗಳು ಇದರಲ್ಲಿ ಸೇರಿವೆ. ನವೆಂಬರ್ 11ರಂದು ಅರೆಸೇನಾಪಡೆ ತುಕಡಿಗಳು ಉತ್ತರಪ್ರದೇಶ ತಲುಪಲಿದ್ದು, ನವೆಂಬರ್ 18ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಪಿಡ್ ಆಕ್ಷನ್ ಫೋರ್ಸ್ನ (ಆರ್ಎಎಫ್) ಹತ್ತು ತುಕಡಿಗಳು ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ನಿಯೋಜಿಸಿದ್ದು, ನವೆಂಬರ್ 18 ರವರೆಗೆ ಅಲ್ಲಿಯೇ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ.
"ಆರ್ಎಎಫ್ನ 16 ತುಕಡಿಗಳು ಮತ್ತು ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಬಿಎಸ್ಎಫ್ ತಲಾ ಆರು ತುಕಡಿಗಳನ್ನು ಒಳಗೊಂಡ ಒಟ್ಟು 40 ತುಕಡಿಗಳನ್ನು ನವೆಂಬರ್ 18 ರವರೆಗೆ ಉತ್ತರಪ್ರದೇಶದಲ್ಲಿ ನಿಯೋಜಿಸಲಾಗುವುದು" ಎಂದು ಅಧಿಕಾರಿಗಳು ಎಎನ್ಐಗೆ ಮಾಹಿತಿ ನೀಡಿದ್ದಾರೆ.