Farmers Protest: ಕೃಷಿ ಸಚಿವರ ಪತ್ರ, ನಂತರ ಪ್ರಧಾನಿ ಮೋದಿ ಮನವಿ

ಥೋಮರ್ ಪತ್ರ ಬರೆದ ಬಳಿಕ ಟ್ವೀಟ್ ಮಾಡಿರುವ ಮೋದಿ, 'ಕೃಷಿ ಸಚಿವ @nstomar ಜೀ  ರೈತ ಸಹೋದರ ಸಹೋದರಿಯರಿಗೆ ಪತ್ರ ಬರೆದು ಒಳ್ಳೆಯ ಸಂವಾದ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ರೈತರು ಪತ್ರವನ್ನು ಓದುವಂತೆ ವಿನಂತಿಸುತ್ತೇನೆ' ಎಂದಿದ್ದಾರೆ.

Written by - Yashaswini V | Last Updated : Dec 18, 2020, 08:35 AM IST
  • ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ರೈತರಿಗೆ 8 ಪುಟಗಳ ಪತ್ರ ಬರೆದು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ
  • 8 ಪುಟಗಳ ಪತ್ರದಲ್ಲಿ ನರೇಂದ್ರ ಸಿಂಗ್ ಥೋಮರ್, ಕೇಂದ್ರ ಸರ್ಕಾರ ತಂದಿರುವ ಕಾನೂನುಗಳಿಂದ ಹೇಗೆ ಕೃಷಿ ಕ್ಷೇತ್ರಕ್ಕೆ ಪೂರಕವಾಗಿವೆ? ಅವುಗಳ ಪ್ರಯೋಜನ ಪಡೆಯುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
Farmers Protest: ಕೃಷಿ ಸಚಿವರ ಪತ್ರ, ನಂತರ ಪ್ರಧಾನಿ ಮೋದಿ ಮನವಿ title=

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ರೈತರಿಗೆ 8 ಪುಟಗಳ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಥೋಮರ್ ಪತ್ರ ಬರೆದ ಕೆಲವೇ ಹೊತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕೂಡ ವಿನಂತಿಸಿಕೊಂಡಿದ್ದಾರೆ.

ರೈತರಿಗೆ ಶಾಪವಾಗಿ ಪರಿಣಮಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ 500ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ದೆಹಲಿ ಗಡಿಯಲ್ಲಿ 32 ರೈತ ಸಂಘಟನೆಗಳು ಕಳೆದ 23 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ಈ ಪ್ರತಿಭಟನೆಗಳ ಭಾಗವಾಗಿ ಡಿಸೆಂಬರ್ 8ರಂದು ಭಾರತ್ ಬಂದ್ (Bharat Bandh) ಆಗಿತ್ತು. ಡಿಸೆಂಬರ್ 14ರಂದು ಒಂದು ದಿನದ ಉಪವಾಸ ಸತ್ಯಾಗ್ರಹ (Hunger strike) ನಡೆಯಿತು. ನಡುವೆ  ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ 5 ಸಭೆ ಆಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಮ್ಮೆ ಅನೌಪಚಾರಿಕವಾಗಿ ಮಾತನಾಡಿದ್ದಾರೆ. ಆದರೂ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಈಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ರೈತರಿಗೆ 8 ಪುಟಗಳ ಪತ್ರ ಬರೆದು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ನರೇಂದ್ರ ಮೋದಿ ಕೂಡ ಕೇಳಿಕೊಂಡಿದ್ದಾರೆ.

8 ಪುಟಗಳ ಪತ್ರದಲ್ಲಿ ನರೇಂದ್ರ ಸಿಂಗ್ ಥೋಮರ್ (Narendra Singh Tomar), ಕೇಂದ್ರ ಸರ್ಕಾರ ತಂದಿರುವ ಕಾನೂನುಗಳಿಂದ ಹೇಗೆ ಕೃಷಿ ಕ್ಷೇತ್ರಕ್ಕೆ ಪೂರಕವಾಗಿವೆ? ಅವುಗಳ ಪ್ರಯೋಜನ ಪಡೆಯುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್​

ಥೋಮರ್ ಪತ್ರ ಬರೆದ ಕೆಲವೇ ಹೊತ್ತಿನ ಬಳಿಕ ಟ್ವೀಟ್ ಮಾಡಿರುವ ಮೋದಿ, 'ಕೃಷಿ ಸಚಿವ @nstomar ಜೀ  ರೈತ ಸಹೋದರ ಸಹೋದರಿಯರಿಗೆ ಪತ್ರ ಬರೆದು ಒಳ್ಳೆಯ ಸಂವಾದ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ರೈತರು ಅದನ್ನು ಓದುವಂತೆ ವಿನಂತಿಸುತ್ತೇನೆ. ಇದನ್ನು ಸಾಧ್ಯವಾದಷ್ಟು ಜನರಿಗೆ ತಲುಪುವಂತೆ ಕೂಡ ದೇಶವಾಸಿಗಳನ್ನು ಕೋರುತ್ತೇನೆ' ಎಂದಿದ್ದಾರೆ. https://t.co/9B4d5pyUF1

"ಯಾವುದೇ ವಂಚನೆಗೆ ಒಳಗಾಗದೆ ಸತ್ಯಗಳ ಆಧಾರದ ಮೇಲೆ ಸತ್ಯವನ್ನು ಧ್ಯಾನಿಸಿ, ಪ್ರತಿ ಅನುಮಾನವನ್ನು ತೆಗೆದುಹಾಕುವುದು ಸರ್ಕಾರದ ಜವಾಬ್ದಾರಿಯಾಗಿದೆ" ಎಂದು ಕೃಷಿ ಸಚಿವರು ರೈತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮೂರು ಕೃಷಿ ಸುಧಾರಣಾ ಕಾನೂನುಗಳು ಭಾರತೀಯ ಕೃಷಿ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಅಡಿಪಾಯವನ್ನು ರೂಪಿಸುತ್ತವೆ. ಇವು ರೈತರನ್ನು ಹೆಚ್ಚು ಸ್ವತಂತ್ರ ಮತ್ತು ಸಬಲೀಕರಣಗೊಳಿಸುತ್ತವೆ ಎಂದು ಬರೆದಿದ್ದಾರೆ.

ರೈತರ ಪ್ರತಿಭಟನೆಯನ್ನು ಸಾಂವಿಧಾನಿಕ ಎಂದ ಸುಪ್ರೀಂಕೋರ್ಟ್

"ಕೃಷಿ ಸಚಿವರಾಗಿ, ಪ್ರತಿಯೊಬ್ಬ ರೈತನ ಗೊಂದಲವನ್ನು ತೆಗೆದುಹಾಕುವುದು, ಪ್ರತಿಯೊಬ್ಬ ರೈತನ ಕಾಳಜಿಯನ್ನು ಕಾಪಾಡುವುದು ನನ್ನ ಕರ್ತವ್ಯ. ಹಾಗೆಯೇ ಸರ್ಕಾರ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶದ ರೈತರ ನಡುವೆ 'ಸುಳ್ಳಿನ ಗೋಡೆ' ನಿರ್ಮಿಸಲು ಮಾಡಲಾಗುತ್ತಿರುವ ಪಿತೂರಿಯ ಬಗ್ಗೆ ಮತ್ತು ನಿಜವಾದ ಸ್ಥಿತಿಯನ್ನು ನಿಮ್ಮ ಮುಂದೆ ಇಡುವುದು ಕೂಡ ನನ್ನ ಜವಾಬ್ದಾರಿಯಾಗಿದೆ" ಎಂದಿದ್ದಾರೆ.

ಹಿಂದೆ ನಾನು ಅನೇಕ ರಾಜ್ಯಗಳ ರೈತ ಸಂಘಟನೆಗಳೊಂದಿಗೆ ಸಂವಾದ ನಡೆಸಿದ್ದೇನೆ. ಆಗ ಈ ಕೃಷಿ ಸುಧಾರಣೆಗಳನ್ನು ಅನೇಕ ಕೃಷಿ ಸಂಸ್ಥೆಗಳು ಸ್ವಾಗತಿಸಿವೆ. ಇನ್ನೊಂದು ಈ ಕೃಷಿ ಸುಧಾರಣೆಗಳ ಬಗ್ಗೆ ಕೆಲವು ರೈತ ಸಂಘಟನೆಗಳು ಭ್ರಮೆಯನ್ನು ಹುಟ್ಟುಹಾಕಿವೆ. ನಾನು ರೈತರ ಕುಟುಂಬದಿಂದ ಬಂದವನು. ಕೃಷಿಯ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಕೃಷಿಯ ಸವಾಲುಗಳನ್ನು ನೋಡುತ್ತಾ ಯೋಚಿಸುತ್ತಾ ಬೆಳೆವನು. ಸುಗ್ಗಿಯ ನಂತರ ಅದನ್ನು ಮಾರಾಟ ಮಾಡಲು ವಾರಗಳವರೆಗೆ ಕಾಯುವುದನ್ನು ಕೂಡ ನೋಡಿದ್ದೇನೆ ಎಂದು ವಿವರಿಸಿದ್ದಾರೆ.

Trending News