ನವದೆಹಲಿ: ಮಾಜಿ ಸಿಎಂ ಎನ್.ಡಿ. ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿ ಅವರದ್ದು ಅಸ್ವಾಭಾವಿಕ ಸಾವು ಎಂದು ವೈದಕೀಯ ವರದಿ ಹೇಳಿದ ಬೆನ್ನಲ್ಲೇ ಈಗ ಮತ್ತೊಂದು ಆಘಾತಕಾರಿ ಸಂಗತಿಯನ್ನು ಈಗ ಪೊಲೀಸರು ತನಿಖೆ ಮೂಲಕ ಬಹಿರಂಗ ಪಡಿಸಿದ್ದಾರೆ. ರೋಹಿತ್ ಶೇಖರ್ ಅವರ ಸಾವಿಗೆ ಆತನ ಪತ್ನಿ ಅಪೂರ್ವ ಶುಕ್ಲಾ ಕಾರಣವೆಂದು ಈಗ ಪೊಲೀಸರು ಖಚಿತಪಡಿಸಿದ್ದಾರೆ.
ಈಗ ದೊರೆತಿರುವ ಆಧಾರದ ಮೇಲೆ ಕೊಲೆ ಪ್ರಕರಣದ ಅಡಿಯಲ್ಲಿ ಅವರ ಮೇಲೆ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಧೃಡಪಟ್ಟಿದೆ. ಆ ಮೂಲಕ ನಿಗೂಢವಾಗಿ ಸಾವನ್ನಪ್ಪಿದ ರೋಹಿತ್ ಪ್ರಕರಣದ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮದುವೆಯಾದ ನಂತರ ದಂಪತಿಗಳಿಬ್ಬರಲ್ಲಿ ಆಗಾಗ್ಗೆ ಕಲಹ ಉಂಟಾಗುತ್ತಿತ್ತು. ಅದು ಹೆಚ್ಚು ಕಡಿಮೆ ವಿಚ್ಚೇದನ ಹಂತಕ್ಕೆ ತಲುಪಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ರೋಹಿತ್ ಶೇಖರ್ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಇದಾದ ನಂತರ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವಹಿಸಿತ್ತು. ರೋಹಿತ್ ಅವರ ತಾಯಿ ಉಜ್ಜಲಾ ಶರ್ಮಾ ತಮ್ಮ ಮಗನ ಸಾವಿನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ "ಅವನ ಸಾವು ಸ್ವಾಭಾವಿಕವಾಗಿದೆ.ಈ ವಿಚಾರವಾಗಿ ನನಗೆ ಯಾವುದೇ ಸಂಶಯವಿಲ್ಲ.ಆದರೆ ಏತಕ್ಕೆ ಆತನು ಮೃತಪಟ್ಟಿದ್ದಾನೆ ಎನ್ನುವುದನ್ನು ಸೂಕ್ತ ಸಂದರ್ಭದಲ್ಲಿ ತಿಳಿಸುತ್ತೇನೆ " ಎಂದು ಹೇಳಿದ್ದರು.