UP: CAA ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ, 9 ಜನರ ಸಾವು

ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಅಲ್ಲಿನ ರಾಜ್ಯ ಸರ್ಕಾರ ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್ ಇಡಲು ಆದೇಶ ಹೊರಡಿಸಿದೆ.

Written by - Nitin Tabib | Last Updated : Dec 21, 2019, 10:43 AM IST
UP: CAA ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ, 9 ಜನರ ಸಾವು title=

ಲಖನೌ: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಂದು ಓರ್ವ ವ್ಯಕ್ತಿ ಮೃತಪಟ್ಟಿರುವುದು ವರದಿಯಾಗಿದೆ. ಪ್ರದೇಶದ ಸಂಭಲ್ ಬಳಿಯಿಂದ ಈ ಸುದ್ದಿ ವರದಿಯಾಗಿದೆ. ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದುವರೆಗೆ 9 ಜನ ಮೃತಪಟ್ಟಿದ್ದಾರೆ.

ಡಿಸೆಂಬರ್ 20ರಂದು ಶುಕ್ರವಾರದ ನಮಾಜ್ ಬಳಿಕ ಹಲವಾರು ಜಿಲ್ಲೆಗಳಲ್ಲಿ ವ್ಯಾಪಕ ದಾಂಧಲೆ ನಡೆದಿದೆ. ರಾಜ್ಯದ ಗೋರಕ್ ಪುರ, ಬಿಜನೌರ್, ಫಿರೋಜಾಬಾದ್, ಸಂಭಲ್, ಕಾನ್ಪುರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟದ ಘಟನೆಗಳು ಸಂಭವಿಸಿದ್ದು, ಹಲವೆಡೆ ಬೆಂಕಿ ಹಚ್ಚಲಾಗಿದೆ.

ಪ್ರದೇಶದಲ್ಲಿ ನಡೆದ ವಿರೋಧ ಪ್ರದರ್ಶನದಲ್ಲಿ ಶುಕ್ರವಾರದವರೆಗೆ ಒಟ್ಟು 7 ಜನ ಮೃತಪಟ್ಟಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಬಿಜನೌರ್ ನಲ್ಲಿ ಇಬ್ಬರು, ಕಾನ್ಪುರ್, ಆಗ್ರಾ ಹಾಗೂ ಮೀರತ್ ನಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಗುರುವಾರ ಪ್ರತಿಭಟನೆಯ ವೇಳೆ ನಡೆದ ಗೋಲಿಬಾರ್ ನಲ್ಲಿ ಲಖನೌನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ, ಇದುವರೆಗೆ ನಡೆದ ಹಿಂಸಾಚಾರದಲ್ಲಿ ಒಟ್ಟು 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಿದ್ದಾರೆ.

ಹಿಂಸೆಯ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ಯೋಗಿ ಸರ್ಕಾರ
ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಶನಿವಾರ ಕೂಡ ಶಾಲಾ-ಕಾಲೇಜುಗಳು ಬಂದ್ ಇರಲಿವೆ ಎಂದು ಯೋಗಿ ಸರ್ಕಾರ ಹೇಳಿದೆ. ಈ ಕುರಿತು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ಪ್ರದೇಶದ ಜನರಿಗೆ ಶಾಂತಿ ಕಾಪಾಡುವಂತೆ ಸಿಎಂ ಯೋಗಿ ಆಧಿತ್ಯನಾಥ ಹೇಳಿದ್ದು, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಯಾರೊಬ್ಬರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಬಾರದು ಎಂದೂ ಸಹ ಅವರು ಮನವಿ ಮಾಡಿದ್ದಾರೆ.

ಪ್ರದೇಶದಲ್ಲಿ CAA ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ ಮುನ್ನೇಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ನಡೆಯಬೇಕಿದ್ದ TET ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಡಿಸೆಂಬರ್ 22 ರಂದು ನಡೆಯಬೇಕಿದ್ದ ಈ ಪರೀಕ್ಷೆಗೆ ರಾಜ್ಯದ ಒಟ್ಟು 75 ಜಿಲ್ಲೆಗಳ 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯಲಿದ್ದರು.

ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಇಂದು ಅಲ್ಲಿನ ರಾಜ್ಯ ಸರ್ಕಾರ ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್  ಮಾಡಲು ಆದೇಶ ಹೊರಡಿಸಿದೆ.

Trending News