ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾಗೆ ಎಂಟು ಪ್ರಶ್ನೆಗಳನ್ನಿಟ್ಟ ಸಿದ್ದರಾಮಯ್ಯ !

ರಾಜ್ಯವು ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈಗ ಅವರು ಎಂಟು ಪ್ರಶ್ನೆಗಳನ್ನು ನಡ್ದಾ ಎದುರು ಇಟ್ಟಿದ್ದಾರೆ.

Written by - Zee Kannada News Desk | Last Updated : Apr 20, 2023, 11:49 PM IST
  • ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ ರೂ.86,000 ಸಾಲದ ಹೊರೆ ಬಿದ್ದಿರುವುದು ಮೋದಿ ಆಶೀರ್ವಾದವೇ? ಶಾಪವೇ?
  • ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ಮೋದಿ ಆಶೀರ್ವಾದವೇ? ಶಾಪವೇ?
  • ನಂದಿನಿ’ಯನ್ನು ಗುಜರಾತ್ ಮೂಲದ ‘ಅಮುಲ್’ ಆಪೋಶನ ತೆಗೆದುಕೊಳ್ಳಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ
 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾಗೆ ಎಂಟು ಪ್ರಶ್ನೆಗಳನ್ನಿಟ್ಟ ಸಿದ್ದರಾಮಯ್ಯ ! title=

ಬೆಂಗಳೂರು: ರಾಜ್ಯವು ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈಗ ಅವರು ಎಂಟು ಪ್ರಶ್ನೆಗಳನ್ನು ನಡ್ದಾ ಎದುರು ಇಟ್ಟಿದ್ದಾರೆ.

ಸರಣಿ ಟ್ವೀಟ್ ಗಳ ಮೂಲಕ ವಾಗ್ದಾಳಿ ನಡೆಸಿರುವ ಅವರು ತಮ್ಮ ಎಂಟು ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.

ಜೆಪಿ ನಡ್ಡಾ ಅವರೇ, ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡದ್ದು,ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸು ನೀಡುವುದು,ಮೋದಿಯವರ ಆಶೀರ್ವಾದವೇ ಶಾಪವೇ? 

ಇದನ್ನೂ ಓದಿ: ವರುಣ ಬಳಿಕ ಚಾಮರಾಜನಗರದಲ್ಲಿ 2ನೇ ಸುತ್ತಿನ ಮತಬೇಟೆ

ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಸರ್ಕಾರ ಮಾಡಿಕೊಂಡ ಸಾಲ ರೂ.2.4.0 ಲಕ್ಷ ಕೋಟಿಗಳಿಂದ ರೂ.5.60 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಮತ್ತು
ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ ರೂ.86,000 ಸಾಲದ ಹೊರೆ ಬಿದ್ದಿರುವುದು ಮೋದಿ ಆಶೀರ್ವಾದವೇ? ಶಾಪವೇ? 

2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ ರೂ.35,000 ಕೋಟಿ ಪರಿಹಾರ ಕೇಳಿದ್ದರೂ, ಕೇವಲ ರೂ.1,869 ಕೋಟಿ ಮಾತ್ರ ಕೇಂದ್ರ ಸರ್ಕಾರ  ಕೊಟ್ಟಿದ್ದು,
2020 ಮತ್ತು 2021ರಲ್ಲಿಯೂ ಇದೇ ಅನ್ಯಾಯ ಮುಂದುವರಿಸಿದ್ದು ಮೋದಿ ಆಶೀರ್ವಾದವೇ? ಶಾಪವೇ?

ಕನ್ನಡಿಗರು ಕಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ನುಂಗಿ ಹಾಕಿದ್ದು, ಕನ್ನಡಿಗರ ಹೆಮ್ಮೆಯ ‘ನಂದಿನಿ’ಯನ್ನು ಗುಜರಾತ್ ಮೂಲದ ‘ಅಮುಲ್’ ಆಪೋಶನ ತೆಗೆದುಕೊಳ್ಳಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ? 

ಐಬಿಪಿಎಸ್ ಮತ್ತು ಎಲ್ಐಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲಿಕ್ಕೆ ಅವಕಾಶ ನೀಡದೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿ ಕನ್ನಡಿಗ ಯುವಜನರ ಹೊಟ್ಟೆಗೆ ಹೊಡೆದದ್ದು ಮೋದಿ ಆಶೀರ್ವಾದವೇ? ಶಾಪವೇ? 

ಕರ್ನಾಟಕ ಗಡಿಪ್ರದೇಶವನ್ನು ಆಕ್ರಮಿಸುವ ದುರುದ್ದೇಶದಿಂದ ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ನಮ್ಮ ರಾಜ್ಯದ 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ? 

ಇದನ್ನೂ ಓದಿ-ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ

ಮಹದಾಹಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲು ವಿಳಂಬ ಮಾಡಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಫಲವಾಗಿದ್ದು, ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ಮೋದಿ ಆಶೀರ್ವಾದವೇ? ಶಾಪವೇ? 

ರಾಜ್ಯ ಬಿಜೆಪಿ ನಾಯಕರು 40% ಕಮಿಷನ್ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳನ್ನು ನುಂಗಿ ಹಾಕಿರುವುದು ಮೋದಿ ಆಶೀರ್ವಾದವೇ? ಶಾಪವೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News