ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆ: ಕಾಂಗ್ರೆಸ್

ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ರಾಜ್ಯದಲ್ಲಿ ಸಿಎಂ ಮಾತು ನಡೆಯುತ್ತಿಲ್ಲ. ಸಿಎಂ ಆದೇಶಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆಸೆಯುತ್ತಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Aug 24, 2022, 06:44 PM IST
  • ಹಣ ವಸೂಲಿ ಮಾಡಿ ಕೊಡದಿದ್ದರೆ ಸಸ್ಪೆಂಡ್ ಮಾಡುತ್ತೇನೆಂದು ‘ಮನಿ’ರತ್ನ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ
  • ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ಪಡೆಯುವಿರಿ?
  • ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭ್ರಷ್ಟ ಆಡಳಿತದ ವಿರುದ್ಧ ಕಾಂಗ್ರೆಸ್ ಆಕ್ರೋಶ
ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆ: ಕಾಂಗ್ರೆಸ್ title=
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆಯೇ? ಎಂದು ಕಾಂಗ್ರೆಸ್ ಟೀಕಿಸಿದೆ. #BJPBrastotsava ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಬಿಬಿಎಂಪಿಯಲ್ಲಿ 50% ಕೆಲವೆಡೆ 40% ಇನ್ನು ಕೆಲವೆಡೆ 100%. ಹಲವು ಕಡೆ ಕೆಲಸವನ್ನೇ ಮಾಡದೆ ಸಂಪೂರ್ಣ ಹಣ ಬಿಡುಗಡೆಯಾಗಿದೆ ಎನ್ನುವುದು ಗುತ್ತಿಗೆದಾರರ ಆರೋಪ. ಅಲ್ಲಿಗೆ ಬಿಜೆಪಿಯ ಕಮಿಷನ್ 100%ಗೆ ತಲುಪಿದಂತಾಯ್ತು!’ ಅಂತಾ ಕಾಂಗ್ರೆಸ್ ಕುಟುಕಿದೆ. ‘ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 40% ರಿಂದ 50% ಏರಿಕೆಯಾಗಿದೆ, ರಸ್ತೆಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿರುವುದು #BJPBrashtotsavaದ ಪರಿಣಾಮದಿಂದ. ರಸ್ತೆ ಗುಂಡಿಗೆ ಆಗಿರುವ ಸಾವುಗಳೆಲ್ಲವೂ ಸರ್ಕಾರವೇ ಮಾಡಿದ ಕೊಲೆಯಲ್ಲವೇ, ಪರಿಹಾರ ನೀಡಬೇಕಲ್ಲವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ನಕಲಿ ಡಿಗ್ರಿ-ಪಿಯುಸಿ ಮಾರ್ಕ್ಸ್ ಕಾರ್ಡ್ ಜಾಲ: ಇಬ್ಬರು ಆರೋಪಿಗಳ ಬಂಧನ

‘ಹಣ ವಸೂಲಿ ಮಾಡಿ ಕೊಡದಿದ್ದರೆ ಸಸ್ಪೆಂಡ್ ಮಾಡುತ್ತೇನೆಂದು ‘ಮನಿ’ರತ್ನ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಸಂಗತಿ ಗುತ್ತಿಗೆದಾರರಿಂದ ಹೊರಬಂದಿದೆ. ಸಿಎಂ ಬೊಮ್ಮಾಯಿಯವರೇ, ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ಪಡೆಯುವಿರಿ? ತನಿಖೆ ನಡೆಸಿ ತಮ್ಮ ಪಾರದರ್ಶಕತೆ ಯಾವಾಗ ತೋರಿಸುವಿರಿ? ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ 'ಮನಿ'ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋಪ. ರಾಜ್ಯದಲ್ಲಿ IAS, IPS ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ರಾಜ್ಯದಲ್ಲಿ ಸಿಎಂ ಮಾತು ನಡೆಯುತ್ತಿಲ್ಲ. ಸಿಎಂ ಆದೇಶಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆಸೆಯುತ್ತಾರೆ. ಇದು ಗುತ್ತಿಗೆದಾರರ ಸಂಘದ ಆರೋಪಗಳು. ಬೊಮ್ಮಾಯಿಯವರೇ ನೀವು ಅದೆಷ್ಟು ಜನರ ಕೈಯ್ಯಲ್ಲಿ ಆಡುವ ಕೀಲಿ ಗೊಂಬೆಯಾಗಿದ್ದೀರಿ? 40% ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗಿಟ್ಟ ಗುತ್ತಿಗೆದಾರರ ಸಂಘದವರಿಗೆ ಸಚಿವರು ಬೆದರಿಕೆ ಹಾಕಿ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಕೂಡಲೇ ಕೆಂಪಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕಿದೆ. ದುರದೃಷ್ಟವಶಾತ್ ಗೃಹಸಚಿವರೇ ಧಮಕಿ ಹಾಕುವ ಮಾದರಿಯಲ್ಲಿ ಮಾತಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗುತ್ತೇಗೆದಾರರ ಸಂಘ ಅಧ್ಯಕ್ಷರಿಂದ ಮತ್ತೊಂದು ಆರೋಪ

‘ಸಿಎಂ ಮಾತನ್ನು ಸಚಿವರು ಕೇಳ್ತಿಲ್ಲ, ಅಧಿಕಾರಿಗಳು ಕೇಳ್ತಿಲ್ಲ ಮತ್ತು ಕಾರ್ಯಕರ್ತರೂ ಕೇಳ್ತಿಲ್ಲ. ಸ್ವತಃ ಪಕ್ಷದಲ್ಲಿ ಸಿಎಂಗೆ ಕಿಮ್ಮತ್ತಿಲ್ಲ. ಬೊಮ್ಮಾಯಿಯವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ಮೆಂಟ್ ಸರ್ಕಾರವನ್ನು ಕೇವಲ ತಳ್ಳಿಕೊಂಡು ಹೋಗುವುದಷ್ಟೇ ನಿಮ್ಮ ಕೆಲಸವೇ? 40% ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲವೇ? ಕೆಲವು ಶಾಸಕರು ಕೆಲಸವೇ ಮಾಡದೆ ಹಣ ತಿಂದಿದ್ದಾರೆ, ಕಮಿಷನ್ ಲೂಟಿ 100%ಗೆ ತಲುಪಿದೆ. ಸರ್ಕಾರ ನ್ಯಾಯಾಂಗ ತನಿಖೆ ನಡೆಸಲಿ, ದಾಖಲೆ ಕೊಡುತ್ತೇವೆ. ನಮ್ಮಿಂದ ಹಗರಣ ನಿರೂಪಿಸಲಾಗದಿದ್ದರೆ ಸರ್ಕಾರ ಕೊಡುವ ಯಾವ ಶಿಕ್ಷೆಗೂ ಸಿದ್ಧರಿದ್ದೇವೆ. ಇದು ಗುತ್ತಿಗೆದಾರರ ಸವಾಲು, ಬೊಮ್ಮಾಯಿಯವರೇ, ಈ ಸವಾಲು ಸ್ವೀಕರಿಸಲು ಹಿಂದೇಟು ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News