ಕಣ್ಣು ನೋವಿನ ನೆವ ಹೇಳಿದ್ದ ಸಿದ್ದರಾಮಯ್ಯ ಸೋನಿಯಾ ಎದುರು ಕೈಕಟ್ಟಿ ಕುಳಿತಿದ್ದರು: ಬಿಜೆಪಿ

ನೆರೆಪೀಡಿತ ಪ್ರದೇಶಗಳ ಜನರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರ್ಕಾರವು ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

Written by - Zee Kannada News Desk | Last Updated : Nov 22, 2021, 02:40 PM IST
  • ಮಾಜಿ ಸಿಎಂ ಸಿದ್ದರಾಮಯ್ಯರ ನೆರೆ ಪರಿಹಾರ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ
  • ನೆರೆಪೀಡಿತ ಬಾದಾಮಿಗೆ ತೆರಳಲು ಕಣ್ಣು ನೋವು ಎಂದಿದ್ದ ಸಿದ್ದರಾಮಯ್ಯ ಸೋನಿಯಾ ಮುಂದೆ ಕೈಕಟ್ಟಿ ಕುಳಿತಿದ್ದರು
  • ಸರ್ಕಾರಕ್ಕೆ ಕರ್ತವ್ಯದ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯನವರು ಮಾಡಿದ್ದೇನು? ಎಂದು ಪ್ರಶ್ನಿಸಿದ ಬಿಜೆಪಿ
ಕಣ್ಣು ನೋವಿನ ನೆವ ಹೇಳಿದ್ದ ಸಿದ್ದರಾಮಯ್ಯ ಸೋನಿಯಾ ಎದುರು ಕೈಕಟ್ಟಿ ಕುಳಿತಿದ್ದರು: ಬಿಜೆಪಿ title=
ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಬಿಜೆಪಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ಬಿಜೆಪಿ ಸರ್ಕಾರ(BJP Government) ವಿಫಲವಾಗಿದೆ ಎಂಬ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಸೋಮವಾರ #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಟ್ವೀಟ್ ಮಾಡಿದೆ.

‘ಸರ್ಕಾರಕ್ಕೆ ಕರ್ತವ್ಯದ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯ(Siddaramaiah)ನವರು ಮಾಡಿದ್ದೇನು? ನೆರೆ ಪೀಡಿತವಾಗಿದ್ದ ಬಾದಾಮಿ ಮತಕ್ಷೇತ್ರಕ್ಕೆ ತೆರಳಲು ಕಣ್ಣು ನೋವಿನ ಕಾರಣ ಹೇಳಿದ್ದ ಸಿದ್ದರಾಮಯ್ಯ, ಅದೇ ವೇಳೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ನಿಮ್ಮ ಕರ್ತವ್ಯ ನಿಷ್ಠೆ?’ ಎಂದು ಬಿಜೆಪಿ ಕುಟುಕಿದೆ.

ಇದನ್ನು ಓದಿ: ಎಪಿಎಂಸಿ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ ಹಿಂಪಡೆಯಲು ಸಿದ್ಧರಾಮಯ್ಯ ಆಗ್ರಹ

‘ಮಾನ್ಯ ಸಿದ್ದರಾಮಯ್ಯ ಅವರೇ ಬಾದಾಮಿ ಮತ ಕ್ಷೇತ್ರ(Badami Vidhana Sabha constituency) ನೀರಿನಲ್ಲಿ‌ ಮುಳುಗಿದಾಗ ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಭೇಟಿ ನೀಡಲು ಕಣ್ಣು ನೋವಿನ ಅಡ್ಡಿ ಹೇಳಿದ್ದು ಮರೆತು ಹೋಯಿತೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ!

‘ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. 10 ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಮನೆ ಬಿದ್ದು ಜನರು ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರ್ಕಾರ(BJP Government)ವು ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ. ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ,ರಾಗಿ,ಜೋಳ, ತರಕಾರಿ,ಬಾಳೆ,ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿದ್ದಾನೆ. ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ.ಇಲ್ಲೊಂದು ಸರ್ಕಾರ ಇದೆಯೇ?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.  

ಇದನ್ನು ಓದಿ: ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡುತ್ತಿದೆ-ಸಿದ್ಧರಾಮಯ್ಯ

‘ಅರ್ಧ ರಾಜ್ಯವೇ ಅಕಾಲಿಕ ಮಳೆಯಿಂದ ತತ್ತರಿಸಿ(Flood)ಹೋಗಿದೆ. ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಇದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ’ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News