ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧದ 12 ವರ್ಷಗಳ ಹಿಂದಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಇಂದು ಅವರಿಗೆ ಜಾಮೀನು ದೊರಕಿದ ಕಾರಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2006ರಲ್ಲಿ ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ, ಆ ನಂತರ ಅವರು ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ಜನಾರ್ಧನ್ ರೆಡ್ಡಿಯನ್ನು ಬಂಧನ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಈಗ ಅದನ್ನು 12 ವರ್ಷಗಳ ನಂತರ ನನ್ನನ್ನು ಬಂಧಿಸುವ ಮೂಲಕ ಆ ಆಸೆಯನ್ನು ಪೂರೈಸಿಕೊಂಡಿದ್ದಾರೆ ಎಂದು ರೆಡ್ಡಿ ವಾಗ್ದಾಳಿ ನಡೆಸಿದರು
ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ಜನಾರ್ಧನ ರೆಡ್ಡಿ ತಿಳಿಸಿದರು.