2023 ರ ವರೆಗೂ ಬೊಮ್ಮಾಯಿ‌ ಮುಖ್ಯಮಂತ್ರಿ ಆಗಿರುತ್ತಾರೆ, ಮುಂದಿನ ಅವಧಿಗೂ ಅವರೇ ಸಿಎಂ: ಸಚಿವ ಮುರುಗೇಶ್ ನಿರಾಣಿ

Minister Murugesh Nirani: 2023 ರ ವರೆಗೂ ಬೊಮ್ಮಾಯಿ‌ ಸಿಎಂ ಆಗಿರುತ್ತಾರೆ. ಬೊಮ್ಮಾಯಿ‌ ಬಹಳ ಉತ್ತಮ ಆಡಳಿತ ಕೊಡುತ್ತಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದರು. 

Edited by - Zee Kannada News Desk | Last Updated : Jan 19, 2022, 07:54 PM IST
  • 2023 ರ ವರೆಗೂ ಬೊಮ್ಮಾಯಿ‌ ಸಿಎಂ ಆಗಿರುತ್ತಾರೆ.
  • ಬೊಮ್ಮಾಯಿ‌ ಬಹಳ ಉತ್ತಮ ಆಡಳಿತ ಕೊಡುತ್ತಿದ್ದಾರೆ.
  • ಮುಂದಿನ ಅವಧಿಗೂ ಬೊಮ್ಮಾಯಿ‌ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ.
  • ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ
2023 ರ ವರೆಗೂ ಬೊಮ್ಮಾಯಿ‌ ಮುಖ್ಯಮಂತ್ರಿ ಆಗಿರುತ್ತಾರೆ, ಮುಂದಿನ ಅವಧಿಗೂ ಅವರೇ ಸಿಎಂ: ಸಚಿವ ಮುರುಗೇಶ್ ನಿರಾಣಿ title=
ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: 2023 ರ ವರೆಗೂ ಬೊಮ್ಮಾಯಿ‌ ಸಿಎಂ (CM Bommai) ಆಗಿರುತ್ತಾರೆ. ಬೊಮ್ಮಾಯಿ‌ ಬಹಳ ಉತ್ತಮ ಆಡಳಿತ ಕೊಡುತ್ತಿದ್ದಾರೆ. ಅವರ ಆಡಳಿತಕ್ಕೆ ನಾವೆಲ್ಲರೂ ಖುಷಿಯಾಗಿದ್ದೇವೆ. ಯಾವುದೇ ರೀತಿಯಲ್ಲೂ ಸಿಎಂ ಬದಲಾವಣೆ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿ (Murugesh Nirani) ಸ್ಪಷ್ಟನೆ ನೀಡಿದರು. 

ಖಾಲಿ ಇರುವ ಸಚಿವ ಸ್ಥಾನ (Cabinet Expansion) ಭರ್ತಿ ಸಿಎಂ ಪರಮಾಧಿಕಾರ. ಉಚಿತವಾಗಿರುವ ಸಮಯದಲ್ಲಿ ಅದನ್ನು ಭರ್ತಿ ಮಾಡುತ್ತಾರೆ. ಇದು ಸಿಎಂ ಪರಮಾಧಿಕಾರ ಆಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಘಟಕದಲ್ಲಿ ಬದಲಾವಣೆ ವಿಚಾರ:

ಬಿಜೆಪಿ (BJP) ರಾಜ್ಯ ಪದಾಧಿಕಾರಿಗಳನ್ನು ಬದಲಿಸುವ ಪವರ್ ಇರುವುದು ರಾಷ್ಟ್ರೀಯ ನಾಯಕರಿಗೆ. ಅಂತಹ ಅಧಿಕೃತ ಘೋಷಣೆ ಏನೂ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಟೀಲ್ ಈಗಾಗಲೇ ಎರಡೂವರೆ ವರ್ಷ ಅವಧಿ ಪೂರೈಸಿದ್ದಾರೆ. ಪಕ್ಷದಲ್ಲಿ ಅಧ್ಯಕ್ಷರ ಅವಧಿ ಇರುವುದು ಮೂರು ವರ್ಷ ಮಾತ್ರ. ಕಟೀಲ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷ, ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ನೂರಕ್ಕೆ ನೂರು ಬದ್ಧ ಎಂದು ತಿಳಿಸಿದರು.  

ನನ್ನ ವಿರುದ್ಧ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ:

ನನ್ನ ವಿರುದ್ಧ ಹೈಕಮಾಂಡ್ ಗೆ (BJP High command)ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ. ನಾನು, ಬೊಮ್ಮಾಯಿ‌ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ನಾವು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಮೂವತ್ತು ವರ್ಷಗಳಿಂದ ನಮ್ಮ ಸಂಬಂಧ ಇದೆ. ಯಾವುದೇ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ವಾಪಸ್, ನಿರ್ಬಂಧಗಳ ಸಡಿಲಿಕೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿರ್ಧಾರ: ಸಿಎಂ ಬೊಮ್ಮಾಯಿ

ರಾಜಕೀಯ ಮಾತ್ರ ಅಲ್ಲ, ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬೊಮ್ಮಾಯಿ‌ ತಿಳಿ ಹೇಳುತ್ತಾ ಬಂದಿದ್ದಾರೆ. ನನಗೆ ಬೊಮ್ಮಾಯಿ‌ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಬೊಮ್ಮಾಯಿ‌ಗೆ ನನ್ನ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ದೂರುಗಳು ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಾಹಿತಿ ನೀಡಿದರು.

ಮುಂದಿನ ಅವಧಿಗೂ ಬೊಮ್ಮಾಯಿ‌ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಇವತ್ತು ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತಿದ್ದೇನೆ, ಉಳಿದವರು ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ವೀಕೆಂಡ್ ಕರ್ಫ್ಯೂ ವಿಚಾರ:

ಕರ್ಫ್ಯೂ ಬಗ್ಗೆ ವೈದ್ಯರು, ವಿಜ್ಞಾನಿಗಳು ಕಾಲ ಕಾಲಕ್ಕೆ ರಿಪೋರ್ಟ್ ಕೊಡ್ತಾರೆ. ಬೊಮ್ಮಾಯಿ‌ ಇಂಜಿನಿಯರ್, ನಿರಾಣಿ ಇಂಜಿನಿಯರ್. ಕರ್ಫ್ಯೂ ವೈದ್ಯಕೀಯ ಕ್ಷೇತ್ರದ ವಿಷಯ. ಹೀಗಾಗಿ ಅವರು ಕೊಡುವ ವರದಿ ಇಟ್ಟುಕೊಂಡು ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಭಿಪ್ರಾಯ ಸರ್ಕಾರದ ಪರ-ವಿರೋಧ ಇದ್ದೇ ಇರುತ್ತದೆ. ಸ್ಥಿತಿಗತಿ ನೋಡಿ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪದಾಧಿಕಾರಿಗಳ ಆಯ್ಕೆ:

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪದಾಧಿಕಾರಿಗಳ ಆಯ್ಕೆ ಮಾಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಿದ್ದೇವೆ. 2ಎ ಮೀಸಲಾತಿಗಾಗಿ (2A Reservation) ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರಪುರದ ವಚನಾನಂದ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಅವರಿಬ್ಬರೂ ಬೇರೆ ಬೇರೆ ಅಲ್ಲ ಎಂದರು.

ಇದನ್ನೂ ಓದಿ: ಪ್ರಾಣಿಗಳಿಗೂ 'ಕೊರೊನಾ' ಸಂಕಷ್ಟ! ಲಾಕ್ ಡೌನ್ ಮಾಡಿದ್ರೆ ಮತ್ತಷ್ಟು ಕಷ್ಟ ಕಷ್ಟ..

ಒಂದೇ ಪೀಠದಿಂದ ಎಲ್ಲಾ ಕಡೆ ಹೋಗಲು ಆಗುವುದಿಲ್ಲ. ಹಾಗಾಗಿ ಎರಡು ಪೀಠಗಳು ಆಗಿವೆ. ಅವರ ಗುರಿ, ನಮ್ಮ ಗುರಿ ಎರಡೂ ಒಂದೇ. ಒಂದೇ ಸ್ವಾಮೀಜಿ ಸಮಾಜದ ಎಲ್ಲಾ ಮದುವೆಗಳಲ್ಲಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಅದಕ್ಕಾಗಿ  ಎರಡು ಪೀಠ ಆಯ್ತು. ಮೂರನೇ ಪೀಠವನ್ನು ಅವರೇ ಮುಂದೆ ನಿಂತು‌ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮೀಸಲಾತಿ ವಿಚಾರದಲ್ಲಿ ಯಾರು ಪ್ರತ್ಯೇಕ ಮನವಿ‌ ಕೊಟ್ಟರೂ ಅದು ಒಂದೇ. ನಾನು ಬೇರೆಯವರ ಬಗ್ಗೆ ಮಾತಾಡಲು ಹೋಗಲ್ಲ. ನಾನು ಮುರುಗೇಶ್ ನಿರಾಣಿಯಾಗಿ ಮಾತಾಡುತ್ತೇನೆ. ಎರಡು ಪೀಠ, ಪದಾಧಿಕಾರಿಗಳು ಒಂದೇ. ಮೀಸಲಾತಿ ವಿಚಾರದಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು. 

ಸಿಎಂಗೆ ಪಂಚಮಸಾಲಿ ಸಮುದಾಯದ ಬಗ್ಗೆ ಅಪಾರ ವಿಶ್ವಾಸ ಇದೆ. ಆಯೋಗದ ವರದಿ ಕೊಟ್ಟ ಬಳಿಕ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಇಂದಿನ ಪದಾಧಿಕಾರಿಗಳ ಆಯ್ಕೆ ಸಭೆಗೆ ವಿಜಯಾನಂದ ಕಾಶಪ್ಪನವರ್ ಯಾಕೆ ಬಂದಿಲ್ಲ ಅಂತಾ ಅವರನ್ನೇ ಕೇಳ. ನನ್ನನ್ನು ಕರೆದಿದ್ದರು ಅದಕ್ಕೆ ಸಮಾಜದ ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ಹೇಳಿದರು. 

ಇದನ್ನೂ ಓದಿ: ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ: ಸ್ತಬ್ಧಚಿತ್ರ ವಿವಾದ ವಿಚಾರವಾಗಿ ಸಿದ್ದರಾಮಯ್ಯ ಗುಡುಗು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News