ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ಇಬ್ರಾಹಿಂ ಸುತಾರ ಅವರು ವಚನ ಹಾಗೂ ಸೂಫಿ ಪರಂಪರೆ ಆಶಯಗಳನ್ನು ಭಜನೆ, ಪ್ರವಚನಗಳ ಮೂಲಕ ತಿಳಿಸುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಭಾವೈಕ್ಯತೆಯನ್ನು ಮೂಡಿಸಿದ್ದರು.

Written by - Zee Kannada News Desk | Last Updated : Feb 5, 2022, 10:02 AM IST
  • ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ ನಿಧನ
  • ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಕೊನೆಯುಸಿರು
  • ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಸಂತಾಪ
ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ title=
ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ

ಬಾಗಲಕೋಟೆ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ(Ibrahim Sutar) ಇಂದು(ಫೆ.5) ಬೆಳಗ್ಗೆ ಹೃದಯಾಘಾತ(Heart Attack)ದಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಇಬ್ರಾಹಿಂ ಸುತಾರ(Ibrahim Sutar) ಅವರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ವಿಶ್ವಗುರು ಬಸವಣ್ಣನವರ ಅನುಯಾಯಿಯಾಗಿ, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು. ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳನ್ನು ಭಜನೆ, ಪ್ರವಚನಗಳ ಮೂಲಕ ತಿಳಿಸುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಭಾವೈಕ್ಯತೆಯನ್ನು ಮೂಡಿಸಿದ್ದರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ಪಟ್ಟದಕಲ್ಲು-ಶಿರೂರು ಹೆದ್ದಾರಿ ವಿಸ್ತರಣೆಗೆ 264.15 ಕೋಟಿ ಮಂಜೂರು: ಗಡ್ಕರಿಗೆ ಸಿಎಂ ಧನ್ಯವಾದ

ಶನಿವಾರ ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು  ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಮಾರ್ಗಮಧ್ಯೆಯೇ ಇಬ್ರಾಹಿಂ ಸುತಾರ ನಿಧನರಾದರು. 1940ರ ಮೇ 10ರಂದು ಜನಿಸಿದ ಇಬ್ರಾಹಿಂ ಸುತಾರ(Ibrahim Sutar Death) ಅವರ ​ತಂದೆ ಮಹಾಲಿಂಗಪುರದ ನಬಿಸಾಹೇಬ್​, ತಾಯಿ ಅಮೀನಾಬಿ. ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬೇಕಾಯಿತು. ನೇಕಾರ ವೃತ್ತಿ ಮಾಡುವುದರ ಜೊತೆಗೆ ಮಸೀದಿಯಲ್ಲಿ ನಮಾಜು, ಕುರಾನ್​ ಅಧ್ಯಯನ ಮಾಡಿದರು. ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದ ಅವರು ಪ್ರವಚನಗಳನ್ನು ಮಾಡುತ್ತಾ ಭಾವೈಕ್ಯತೆಯ ಪಾಠ ಸಾರಿದರು. 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿಯನ್ನು ನೀಡಿದೆ. ಇದಲ್ಲದೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ(PadmaShri Award) ನೀಡಿ ಗೌರವಿಸಿದೆ.

ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai), ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ‘ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ‌. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಅಂತಾ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Basavaraj Bommai Cabinet Reshuffel: ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಸೇರಲು ಲಾಬಿ ಶುರು!

ಸಿದ್ದರಾಮಯ್ಯ(Siddaramaiah) ಟ್ವೀಟ್ ಮಾಡಿ, ‘ಕನ್ನಡದ ಕಬೀರರೆಂದೇ ಖ್ಯಾತಿ ಪಡೆದಿದ್ದ ಜನಪರ ಪ್ರವಚನಕಾರ ಇಬ್ರಾಹಿಂ ಸುತಾರ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಜಾತಿ-ಧರ್ಮಗಳ ಹೆಸರಲ್ಲಿ ಮನಸ್ಸುಗಳನ್ನು ಒಡೆಯಲಾಗುತ್ತಿರುವ ದಿನಗಳಲ್ಲಿ ಪ್ರವಚನಕಾರ ಸುತಾರ ಅವರು ಭಾವೈಕ್ಯದ ಕೊಂಡಿಯಾಗಿದ್ದರು. ಅವರ ಸಾವು ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಕೋರುವೆ’ ಅಂತಾ ಹೇಳಿದ್ದಾರೆ.

‘ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಟ್ವೀಟ್ ಮಾಡಿದ್ದಾರೆ.

‘ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಟ್ವೀಟ್ ಮಾಡಿದ್ದು, ‘ನಾಡಿನ ಭಾವೈಕ್ಯತೆಯ ರಾಯಭಾರಿಯಂತಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಧರ್ಮ, ಸೂಫಿ ಪರಂಪರೆಗಳ ಪ್ರವಚನಗಳ ಮೂಲಕ ಸಾಮರಸ್ಯಕ್ಕಾಗಿ ಅವರು ಶ್ರಮಿಸಿದ್ದರು. ಅವರಿಗೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News