S.R. Bommai Birthday: ಐತಿಹಾಸಿಕ ಎಸ್.ಆರ್.ಬೊಮ್ಮಾಯಿ ಪ್ರಕರಣ ಸ್ಮರಿಸುತ್ತಾ...

Written by - Manjunath Naragund | Last Updated : Jun 6, 2021, 07:46 PM IST
  • ಇಂದು ಈ ಪ್ರಕರಣದ ರೂವಾರಿಗಳು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಎಸ್.ಆರ್.ಬೊಮ್ಮಾಯಿ ಅವರ ಜನ್ಮದಿನವಾಗಿರುವುದರಿಂದ ಈ ಪ್ರಕರಣದ ಹಿನ್ನಲೆಯನ್ನು ತಿಳಿಯುವ ಪ್ರಯತ್ನ ಮಾಡೋಣ.
  • ಇಂದಿಗೂ ಕೂಡ ಅತಂತ್ರ ವಿಧಾನಸಭೆ, ಸರ್ಕಾರದ ರಚನೆ ಪ್ರಕ್ರಿಯೆ ಕಾರ್ಯಗಳು ಬಂದಾಗ ಬೊಮ್ಮಾಯಿ ಪ್ರಕರಣ ಆಗಾಗ ಮುನ್ನಲೆಗೆ ಬರುತ್ತದೆ.
  • ಇಂದಿಗೂ ಕೂಡ ಬೊಮ್ಮಾಯಿ ಪ್ರಕರಣವು ದೇಶದ ಸಾಂವಿಧಾನಿಕ ಚರಿತ್ರೆಯಲ್ಲಿ ಅತಿ ಹೆಚ್ಚು ಉಲ್ಲೇಖಿತವಾಗಿರುವ ಹಾಗೂ ಅಷ್ಟೇ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಪ್ರಕರಣ ಎನ್ನುವ ಖ್ಯಾತಿಯನ್ನು ಪಡೆದಿದೆ.
S.R. Bommai Birthday: ಐತಿಹಾಸಿಕ ಎಸ್.ಆರ್.ಬೊಮ್ಮಾಯಿ ಪ್ರಕರಣ ಸ್ಮರಿಸುತ್ತಾ... title=
Photo Courtesy: Facebook

ಭಾರತದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ಬೊಮ್ಮಾಯಿ ಪ್ರಕರಣ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ, ಅದರಲ್ಲೂ ಒಕ್ಕೂಟ ಮಾದರಿ ವ್ಯವಸ್ಥೆ ವಿಚಾರವಾಗಿ ಈ ಪ್ರಕರಣದ ಅಂಶಗಳು ಹಲವಾರು ಬಾರಿ ಉಲ್ಲೇಖವಾಗುತ್ತವೆ.ಇದರಿಂದಾಗಿ ಈ ಪ್ರಕರಣ ಕಳೆದ ಮೂರು ದಶಕಗಳಲ್ಲಿ ಇಂದಿಗೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಇಂದು ಈ ಪ್ರಕರಣದ ರೂವಾರಿಗಳು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಎಸ್.ಆರ್.ಬೊಮ್ಮಾಯಿ (S.R. Bommai) ಅವರ ಜನ್ಮದಿನವಾಗಿರುವುದರಿಂದಾಗಿ ಈ ಪ್ರಕರಣದ ಹಿನ್ನಲೆಯನ್ನು ತಿಳಿಯುವ ಪ್ರಯತ್ನ ಮಾಡೋಣ.

ಎಸ್ ಆರ್,ಬೊಮ್ಮಾಯಿ ಜೂನ್ 6 1924 ರಂದು ಅಖಂಡ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕರಡಗಿ ಗ್ರಾಮದಲ್ಲಿ ಜನಿಸಿದರು. ಅವರು ಭಾರತ ಹಾಗೂ ಮೆಕ್ಸಿಕೋದಲ್ಲಿ ಕಮ್ಯುನಿಸ್ಟ್ ಚಿಂತನೆಗಳನ್ನು ಹರಡಲು ಪ್ರಮುಖ ಪಾತ್ರವಹಿಸಿದ್ದ ಎಂ.ಎನ್.ರಾಯ್ ಅವರ ವಿಚಾರಧಾರೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದರು.ಇದೇ ಕಾರಣಕ್ಕಾಗಿಯೇ ಅವರನ್ನು ರಾಯಿಸ್ಟ್ ಬೊಮ್ಮಾಯಿ ಎಂದು ಸಹ ಕರೆಯುತ್ತಾರೆ.

ಬೊಮ್ಮಾಯಿ ಪ್ರಕರಣದ ಹಿನ್ನಲೆ:

ಎಸ್ ಆರ್,ಬೊಮ್ಮಾಯಿ ಅವರು ಆಗಸ್ಟ್ 13, 1988 ಮತ್ತು ಏಪ್ರಿಲ್ 21, 1989 ರ ನಡುವೆ ಕರ್ನಾಟಕದಲ್ಲಿ ಜನತಾದಳ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.ಅವರ ಸರ್ಕಾರವನ್ನು ಏಪ್ರಿಲ್ 21, 1989 ರಂದು ಸಂವಿಧಾನದ 356 ನೇ ವಿಧಿ ಅಡಿಯಲ್ಲಿ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಯಿತು.ಆಗ ಪ್ರತಿಪಕ್ಷಗಳನ್ನು ಹತೋಟಿಗೆ ಇಟ್ಟುಕೊಳ್ಳಲು ಕೇಂದ್ರ ಸರ್ಕಾರವು ಈ ವಿಧಿಯನ್ನು ಸರ್ವೇ ಸಾಮಾನ್ಯವಾಗಿ ಬಳಸುತ್ತಿತ್ತು.ಆಗಿನ ಸಂದರ್ಭದಲ್ಲಿ ಹಲವಾರು ಪ್ರಮುಖ ನಾಯಕರು ಪಕ್ಷಾಂತರ ಮಾಡಿದ್ದರಿಂದಾಗಿ ಸರ್ಕಾರವು ವಿಶ್ವಾಸಮತವನ್ನು ಕಳೆದುಕೊಂಡಿದೆ ಎನ್ನುವ ನೆಪವೊಡ್ಡಿ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಲಾಯಿತು.ಆಗಿನ ರಾಜ್ಯಪಾಲರಾದ ಪಿ.ವೆಂಕಟಸುಬ್ಬಯ್ಯನವರು ಬೊಮ್ಮಾಯಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ನೀಡಲು ನಿರಾಕರಿಸಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸ್ಸು ಮಾಡಿದ್ದರು.

ಈ ನಿರ್ಧಾರವನ್ನು ಪ್ರಶ್ನಿಸಿದ ಬೊಮ್ಮಾಯಿ ಅವರು ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ನ ಮೊರೆಹೋದರು, ಆದರೆ ಅವರ ರಿಟ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ಇದರಿಂದಾಗಿ ಅವರು ಮುಂದೆ ಸುಪ್ರಿಂಕೋರ್ಟ್ ಗೆ ಮೊರೆಹೋದರು.ಆದರೆ ಈ ಪ್ರಕರಣವು ಬೇಗನೆ ಇತ್ಯರ್ಥವಾಗದೇ ಐದು ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡಿತು.ಕೊನೆಗೆ ಮಾರ್ಚ್ 11,1994 ರಂದು, ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಐತಿಹಾಸಿಕ ಆದೇಶವನ್ನು ಹೊರಡಿಸಿ 356 ನೇ ವಿಧಿ ಅಡಿಯಲ್ಲಿ ಕೇಂದ್ರ ಸರ್ಕಾರವು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವಂತಿಲ್ಲ ಎನ್ನುವ ತೀರ್ಪು ನೀಡಿತು.

ಸುಪ್ರೀಂ ತೀರ್ಪು ಹೇಳಿದ್ದೇನು?

ರಾಜ್ಯ ಸರ್ಕಾರವನ್ನು ವಜಾಗೊಳಿಸುವ ರಾಷ್ಟ್ರಪತಿಗಳ ಅಧಿಕಾರವು ಸಂಪೂರ್ಣವಲ್ಲ, ಸಂಸತ್ತಿನ ಉಭಯ ಸದನಗಳಿಂದ ಘೋಷಣೆ ಅಂಗೀಕರಿಸಲ್ಪಟ್ಟ ನಂತರವೇ ರಾಷ್ಟ್ರಪತಿಗಳು ಅಧಿಕಾರವನ್ನು ಚಲಾಯಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.ಸಂಸತ್ತಿನ ಉಭಯ ಸದನಗಳು ಒಪ್ಪಿಗೆ ನೀಡದಿದ್ದಲ್ಲಿ ಅಥವಾ ಘೋಷಣೆಯನ್ನು ಅಂಗೀಕರಿಸದಿದ್ದಲ್ಲಿ, ಘೋಷಣೆ ಎರಡು ತಿಂಗಳ ಅವಧಿಯ ಕೊನೆಯಲ್ಲಿ ಕಳೆದುಹೋಗುತ್ತದೆ. ಅಂತಹ ಸಂದರ್ಭದಲ್ಲಿ, ವಜಾಗೊಳಿಸಲ್ಪಟ್ಟ ಸರ್ಕಾರವು ಪುನರುಜ್ಜೀವನಗೊಳ್ಳುತ್ತದೆ ಮತ್ತು ವಿಧಾನಸಭೆ ಪುನಃಸಕ್ರಿಯಗೊಳ್ಳುತ್ತದೆ 'ಎಂದು ಕೋರ್ಟ್ ತೀರ್ಪು ನೀಡಿತು. ಇದೆ ವೇಳೆ ಆರ್ಟಿಕಲ್ 356 ರ ಅಡಿಯಲ್ಲಿ ರಾಷ್ಟ್ರಪತಿ ಘೋಷಣೆ ಸಹಿತ ನ್ಯಾಯಾಂಗದ ಪರಿಶೀಲನೆ (Judicial Review) ಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಎಸ್.ಆರ್ ಬೊಮ್ಮಾಯಿ ಪ್ರಕರಣದ ಮಹತ್ವ:

ಈ ಪ್ರಕರಣದಿಂದಾಗಿ ಕೇಂದ್ರ ಸರ್ಕಾರವು ತನಗೆ ಇಚ್ಛೆ ಬಂದಾಗ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ನಡೆಗೆ ತಡೆ ನೀಡಿತು.ಮತ್ತು ತೀರ್ಪಿನ ಪ್ರಕಾರ, ಸದನವೂ ವಿಶ್ವಾಸಮತವನ್ನು ಸಾಬೀತುಪಡಿಸಲು ಇರುವ ಏಕೈಕ ವೇದಿಕೆ ಎಂದು ಸುಪ್ರೀಂಕೋರ್ಟ್ ತಿಳಿಸಿತು.ಇನ್ನೂ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ನಡೆಯೂ ರಾಜ್ಯದ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ವಿಚಾರವನ್ನು ಸುಪ್ರೀಂ ವ್ಯಕ್ತಪಡಿಸಿತು."ಪ್ರತಿ ರಾಜ್ಯದ ಮುಖ್ಯಮಂತ್ರಿ ತಮ್ಮ ಸಾಂವಿಧಾನಿಕ ಕಾರ್ಯಗಳನ್ನು ನಿರ್ವಹಿಸಬೇಕಾದರೆ ಘೋಷಣೆಯ ಕೊಡಲಿ ತನ್ನ ಮೇಲೆ ಬೀಳುತ್ತದೆ ಎಂಬ ಭಯದಲ್ಲಿ ಸದಾ ಭಯದಲ್ಲಿರುತ್ತಾರೆ, ಏಕೆಂದರೆ ಅವರು ಅಧಿಕಾರದಲ್ಲಿ ಉಳಿಯುತ್ತಾರೋ ಇಲ್ಲವೋ ಎಂದು ಖಚಿತವಾಗಿ ತಿಳಿದಿರುವುದಿಲ್ಲ, ಇದರ ಪರಿಣಾಮವಾಗಿ ರಾಜ್ಯದ ಹಿತದೃಷ್ಟಿಯಿಂದ ಸಂವಿಧಾನದ ಕಟ್ಟುಪಾಡುಗಳನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ" ಎಂದು ಕೋರ್ಟ್ ವಿಶ್ಲೇಷಿಸಿತು.

ಈ ಪ್ರಕರಣ ಮೊದಲ ಬಾರಿಗೆ ಪರಿಣಾಮ ಬೀರಿದ್ದು 1999 ರಲ್ಲಿ, ಆಗ ಕೇಂದ್ರದಲ್ಲಿನ ವಾಜಪೇಯಿ ಸರ್ಕಾರವು ಬಿಹಾರದಲ್ಲಿನ ರಾಬ್ಡಿದೇವಿ ಸರ್ಕಾರವನ್ನು ವಜಾಗೊಳಿಸಲಾಗಿತ್ತು, ಆದರೆ ಈ ವಿಚಾರವು ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಾಗ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಯಿತು.

ಇಂದಿಗೂ ಕೂಡ ಅತಂತ್ರ ವಿಧಾನಸಭೆ, ಸರ್ಕಾರದ ರಚನೆ ಪ್ರಕ್ರಿಯೆ ಕಾರ್ಯಗಳು ಬಂದಾಗ ಬೊಮ್ಮಾಯಿ ಪ್ರಕರಣ ಆಗಾಗ ಮುನ್ನಲೆಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಇಂದಿಗೂ ಕೂಡ ಬೊಮ್ಮಾಯಿ ಪ್ರಕರಣವು ದೇಶದ ಸಾಂವಿಧಾನಿಕ ಚರಿತ್ರೆಯಲ್ಲಿ ಅತಿ ಹೆಚ್ಚು ಉಲ್ಲೇಖಿತವಾಗಿರುವ ಹಾಗೂ ಅಷ್ಟೇ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಪ್ರಕರಣ ಎನ್ನುವ ಖ್ಯಾತಿಯನ್ನು ಪಡೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News