ಕೇಂದ್ರ ಸರ್ಕಾರದ ಕೆಳಹಂತದ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಮನವಿ

ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮೀಷನ್ ವತಿಯಿಂದ ನೇಮಕಗೊಳಿಸಲಾಗುವ ಕೆಳಹಂತದ ಹುದ್ದೆಗಳಿಗೆ ನಡೆಸಲಾಗುವ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸುವಂತೆ ಸಂಸದರಾದ ತೇಜಸ್ವೀ ಸೂರ್ಯ,ಎಸ್ ಮುನಿಸ್ವಾಮಿರವರು ಮನವಿ ಮಾಡಿದ್ದಾರೆ.

Written by - Zee Kannada News Desk | Last Updated : Mar 24, 2022, 11:43 PM IST
  • ಈ ಹಂತದ ಹುದ್ದೆಗಳಿಗೆ ಕೇವಲ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುವುದರಿಂದ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಕೈಗೊಂಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
 ಕೇಂದ್ರ ಸರ್ಕಾರದ ಕೆಳಹಂತದ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಮನವಿ  title=

ನವದೆಹಲಿ: ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮೀಷನ್ ವತಿಯಿಂದ ನೇಮಕಗೊಳಿಸಲಾಗುವ ಕೆಳಹಂತದ ಹುದ್ದೆಗಳಿಗೆ ನಡೆಸಲಾಗುವ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸುವಂತೆ ಸಂಸದರಾದ ತೇಜಸ್ವೀ ಸೂರ್ಯ,ಎಸ್ ಮುನಿಸ್ವಾಮಿರವರು ಮನವಿ ಮಾಡಿದ್ದಾರೆ.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಸಚಿವರಾದ ಡಾ.ಜಿತೇಂದ್ರ ಸಿಂಗ್ ರನ್ನು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿರುವ ಸಂಸದರಾದ ಶ್ರೀ ತೇಜಸ್ವೀ ಸೂರ್ಯ (Tejasvi Surya), ಶ್ರೀ ಎಸ್ ಮುನಿಸ್ವಾಮಿ ರವರು, ಈ ಕುರಿತು ಕ್ರಮ ಕೈಗೊಳ್ಳಲು ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದು, ಸಚಿವರಿಂದ ಸಕಾರಾತ್ಮಕವಾಗಿ ಸ್ಪಂದನೆ ದೊರಕಿರುವ ಕುರಿತು ಮಾಧ್ಯಮಕ್ಕೆ ತಿಳಿಸಿರುತ್ತಾರೆ.

ಇದನ್ನೂ ಓದಿ: 12 ಲಕ್ಷ ಸಾಫ್ಟ್ವೇರ್ ಎಂಜಿನಿಯರುಗಳ ಬಲದಿಂದ ಬೆಂಗಳೂರಿಗೆ ಸಿಲಿಕಾನ್ ಸಿಟಿ ಹಿರಿಮೆ

ಪ್ರತೀ ರಾಜ್ಯದಲ್ಲಿರುವ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿರುವ ಕೆಳಹಂತದ ಹುದ್ದೆಗಳಿಗೆ ನಡೆಯುವ ಪರೀಕ್ಷೆ (Examination) ಗಳನ್ನು ಹಿಂದಿ,ಇಂಗ್ಲಿಷ್ ನಲ್ಲಿ ಮಾತ್ರ ನಡೆಸಲಾಗುತ್ತಿದ್ದು, ಈ ಹುದ್ದೆಗಳು ಮೆಟ್ರಿಕ್ಯುಲೇಷನ್ ಹಂತದಲ್ಲಿರುತ್ತವೆ. ಮೆಟ್ರಿಕ್ಯುಲೇಷನ್ ಹಂತದ ವರೆಗಿನ ವಿಧ್ಯಾಭ್ಯಾಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ, ಪ್ರಾದೇಶಿಕ ಭಾಷೆಯಲ್ಲಿಯೇ ಕೈಗೊಳ್ಳುವುದರಿಂದ ಈ ಹಂತದ ಹುದ್ದೆಗಳಿಗೆ ಕೇವಲ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುವುದರಿಂದ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಕೈಗೊಂಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.

ಈ ಕುರಿತಾಗಿ ಮಾತನಾಡಿರುವ ಸಂಸದ ತೇಜಸ್ವೀ ಸೂರ್ಯ 'ಇತ್ತೀಚೆಗೆ ಸ್ಟಾಫ್ ಸೆಲೆಕ್ಷನ್ ಕಮೀಷನ್ ವತಿಯಿಂದ ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್ ) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,ಪರೀಕ್ಷಾ ಮಾಧ್ಯಮವಾಗಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹುದ್ದೆಗಳು ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಮೀಸಲಾಗಿದ್ದು, ಪರೀಕ್ಷಾ ಮಾಧ್ಯಮ ಮಾತ್ರ ಕೇವಲ ಇಂಗ್ಲಿಷ್ & ಹಿಂದಿಯಲ್ಲಿ ಇರುವುದರಿಂದ ಸ್ಥಳೀಯ ಅಭ್ಯರ್ಥಿಗಳಿಗೆ ಭಾಷಾ ತೊಂದರೆ ಉಂಟಾಗಲಿದೆ" ಎಂದು ವಿವರಿಸಿದರು.

ಇದನ್ನೂ ಓದಿ: 'ಮಹಿಳಾ ಜೀವನೋಪಾಯ ಸಂವರ್ಧನೆಗೆ 1,500 ಕೋಟಿ ರೂ. ಮೀಸಲು'

ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ರವರು, 'ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಕೇಂದ್ರ ಸರಕಾರದ ಎಲ್ಲ ಹುದ್ದೆಗಳಿಗೂ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆಗಳನ್ನು ನಡೆಸುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಈ ಹಿಂದೆ ಇದ್ದ ಪದ್ಧತಿಯನ್ನು ತೆಗೆದುಹಾಕಿ ಪ್ರಾದೇಶಿಕ ಭಾಷೆಗಳಲ್ಲಿಯೂ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಂಡಿರುತ್ತದೆ.ಅದೇ ಮಾದರಿಯಲ್ಲಿ ಕೆಳಹಂತದ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಕೂಡ ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ "ಎಂದು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಇಂಗ್ಲಿಷ್, ಹಿಂದಿ ಒಳಗೊಂಡಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಮಹತ್ವದ ತೀರ್ಮಾನ ಕೈಗೊಂಡ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳನ್ನು ಸಂಸದರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News