'ತಾಲೂಕಿಗೊಂದು ಟ್ರೀ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ': ಅಧಿಕಾರಿಗಳಿಗೆ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಪ್ರತಿ ತಾಲೂಕಿಗೊಂದು ಟ್ರೀ ಪಾರ್ಕ್ (ಮರಗಳ ಉದ್ಯಾನವನ) ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ ಪನ್ವಾರ ಅವರಿಗೆ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೂಚಿಸಿದರು.

Written by - Manjunath N | Last Updated : Jul 9, 2023, 08:58 PM IST
  • ಕಲಬುರಗಿಯಲ್ಲಿ ಶೇ.3 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಈ ಪೈಕಿ ಚಿಂಚೋಳಿಯಲ್ಲಿಯೇ ಹೆಚ್ಚು.
  • ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಏನೆಲ್ಲ ಸಾಧ್ಯತೆಗಳಿವೆ ಎಲ್ಲವನ್ನು ಮಾಡಿ.
  • ವಿಶೇಷವಾಗಿ ಕೆರೆ, ಬಾವಿ, ಬ್ರಿಡ್ಜ್-ಕಂ-ಬ್ಯಾರೇಜ್, ಜಿಲ್ಲಾ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮುಂದಿನ 15 ದಿನದಲ್ಲಿ ಯುದ್ದೋಪಾದಿಯಲ್ಲಿ ಗಿಡ ನೆಡಬೇಕು.
'ತಾಲೂಕಿಗೊಂದು ಟ್ರೀ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ': ಅಧಿಕಾರಿಗಳಿಗೆ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ  title=
screengrab

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಪ್ರತಿ ತಾಲೂಕಿಗೊಂದು ಟ್ರೀ ಪಾರ್ಕ್ (ಮರಗಳ ಉದ್ಯಾನವನ) ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ ಪನ್ವಾರ ಅವರಿಗೆ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೂಚಿಸಿದರು.

ರವಿವಾರ ಕಲಬುರಗಿ ಕಲಬುರಗಿ ಅರಣ್ಯ ವೃತ್ತ ಕಚೇರಿಯಲ್ಲಿ ಕಲಬುರಗಿ, ಬೀದರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇದಕ್ಕೆ ಇಲಾಖೆಯಿಂದಾಗಲಿ ಅಥವಾ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಅನುದಾನ ಒದಗಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಇದನ್ನೂ ಓದಿ: ವಿಜೃಂಭಣೆಯಿಂದ ನಡೆದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ

ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಮತ್ತು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಸಸಿಗಳ ಕಥೆ ಏನು? ಅವುಗಳ ಸಂರಕ್ಷಣೆ ಆಗುತ್ತಿವೆ, ಅವು ಬದುಕಿದಾವ, ಅವುಗಳ ಮೇಲೆ ಇಲಾಖೆ ನಿಗಾವಹಿಸಿದೆಯೇ? ಎಂದ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಕಳೆದ 5 ವರ್ಷಗಳಲ್ಲಿ ನೆಡಲಾದ ಸಸಿಗಳ ಇಂದಿನ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸಬೇಕೆಂದರು. ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸಸಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿಯಲ್ಲಿ ಶೇ.3 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಈ ಪೈಕಿ ಚಿಂಚೋಳಿಯಲ್ಲಿಯೇ ಹೆಚ್ಚು. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಏನೆಲ್ಲ ಸಾಧ್ಯತೆಗಳಿವೆ ಎಲ್ಲವನ್ನು ಮಾಡಿ. ವಿಶೇಷವಾಗಿ ಕೆರೆ, ಬಾವಿ, ಬ್ರಿಡ್ಜ್-ಕಂ-ಬ್ಯಾರೇಜ್, ಜಿಲ್ಲಾ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮುಂದಿನ 15 ದಿನದಲ್ಲಿ ಯುದ್ದೋಪಾದಿಯಲ್ಲಿ ಗಿಡ ನೆಡಬೇಕು. ಚಿಂಚೋಳಿ ತಾಲೂಕಿನ ಗೊಟ್ಟಂಗೊಟ್ಟ ಮತ್ತು ಆಳಂದ ತಾಲೂಕಿನ ಭೂಸನೂರನಲ್ಲಿನ ದೈವಿ ವನ ಅಭಿವೃದ್ಧಿಗೂ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ ಅವರಿಗೆ ಸೂಚಿಸಿದರು.

ಕಲಬುರಗಿ ಮಣ್ಣಿಗೆ ಹೊಂದಿಕೊಳ್ಳುವಂತಹ ಗಿಡಗಳನ್ನು ಹೆಚ್ಚು ಬೆಳೆಸಲು ರೈತರಿಗೆ ಪ್ರೇರೇಪಿಸಬೇಕು. ಈ ಮರಗಳು ವಾಣಿಜ್ಯ ಮರಗಳಾಗಿರಬೇಕು. ಮುಂದೆ ರೈತರಿಗೆ ಲಾಭ ತರುವಂತಿರಬೇಕು. ಇಂತಹ ಯೋಜನೆಗಳು ಹಾಕಿಕೊಂಡಿದಲ್ಲಿ ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದ ಅರಣ್ಯ ಸಚಿವರು, ಕಲಬುರಗಿ ಜಿಲ್ಲೆಯಲ್ಲಿರುವ 14 ನರ್ಸರಿಗಳು ಮುಂದಿನ ವರ್ಷ 25 ಲಕ್ಷ ಸಸಿಗಳನ್ನು ತಯ್ಯಾರಿಸಬೇಕು ಸೂಚಿಸಿ, ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

5 ಕೋಟಿ ಸಸಿ ನೆಡುವ ಗುರಿ:

ರಾಜ್ಯದಲ್ಲಿ ಕಳೆದ ಜುಲೈ 1 ರಿಂದ ವನಮಹೋತ್ಸವ ಅಂಗವಾಗಿ ಸಸಿ ನೆಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮುಂದಿನ 3 ತಿಂಗಳಲ್ಲಿ ರಾಜ್ಯದಾದ್ಯಂತ 5 ಕೋಟಿ ಸಸಿ ನೆಡೆಯುವ ಗುರಿ ಹೊಂದಲಾಗಿದೆ. ಕಲಬುರಗಿಯಲ್ಲಿ ಕನಿಷ್ಠ 10 ಲಕ್ಷ ಸಸಿ ನೆಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಗುರಿ ಮೀರಿ ಸಾಧನೆ ಮಾಡುವಂತೆ ಡಿ.ಎಫ್.ಓ. ಗಳಿಗೆ ನಿರ್ದೇಶನ ನೀಡಿದರು.

6 ತಿಂಗಳಲ್ಲಿ ಹುದ್ದೆಗಳ ಭರ್ತಿಗೆ ಕ್ರಮ:

ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಪ್ರಗತಿ ವಿವರಿಸುತ್ತಾ, ಪ್ರಸ್ತುತ ಕಲಬುರಗಿ ವೃತ್ತದ ಕಲಬುರಗಿ, ಬೀದರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ 583 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 398 ಭರ್ತಿಯಾಗಿವೆ. ಉಳಿದಂತೆ 185 ಹುದ್ದೆಗಳು ಖಾಲಿ ಇವೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಖಾಲಿ ಹುದ್ದೆಗಳ ಮಾಹಿತಿ ನೀಡಿದಲ್ಲಿ ಮುಂದಿನ 6 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಅಲ್ಲಿಯ ವರೆಗೆ ಗುತ್ತಿಗೆ ಮೇಲೆ ಸಿಬ್ಬಂದಿಗಳ ಸೇವೆ ಪಡೆಯಿರಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ʼಯೇ ಸಾವು ಆಗಿಲ್ಲ ಮಾರ್ರೆ ಪ್ರದೀಪ್; ಬಜೆಟ್‌ ಮಂಡನೆ ವೇಳೆ ಸ್ವೀಕರ್‌, ಶಾಸಕನಿಗೆ ಪಾಠ.. ವಿಡಿಯೋ ವೈರಲ್‌ ..‌ !

ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನೀಲ ಪನ್ವಾರ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ 2023-24ನೇ ಸಾಲಿಗೆ ಕಲಬುರಗಿ ವೃತ್ತದಲ್ಲಿ 28 ಲಕ್ಷ ಸಸಿ ನೆಡೆಯುವ ಗುರಿ ಹೊಂದಿದ್ದು, ಕಾಲಮಿತಿಯಲ್ಲಿ ಈ ಗುರಿ ಸಾಧನೆ ಮಾಡಲಾಗುವುದು. ನೆಡಲಾದ ಸಸಿಗಳ ಮೇಲೆ ನಿಗಾ ವಹಿಸಲು ಸಹ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದಲ್ಲದೆ ಇಲಾಖೆಯ ಪ್ರಗತಿ ಚಿತ್ರಣ ಸಚಿವರ ಮುಂದಿಟ್ಟರು.

ಸಭೆಯಲ್ಲಿ ಬೀದರ್ ಡಿ.ಎಫ್.ಓ. ಗಳಾದ ಎಂ.ಎಂ. ವಾನತಿ ಮತ್ತು ಎ.ಬಿ.ಪಾಟೀಲ, ಯಾದಗಿರಿ ಡಿ.ಎಫ್.ಓ. ಗಳಾದ ಕಾಜೋಲ್ ಪಾಟೀಲ್ ಮತ್ತು ಎಂ.ಕೆ.ಭಗಾಯತ್, ರಾಯಚೂರು ಡಿ.ಎಫ್.ಓ. ಗಳಾದ ಚಂದ್ರಣ್ಣಾ ಮತ್ತು ಮುನೀರ್ ಅಹ್ಮದ್ ಹಾಗೂ ಕಲಬುರಗಿ ಡಿ.ಎಫ್.ಓ ಎಂ.ಎಲ್.ಭಾವಿಕಟ್ಟಿ ಸೇರಿದಂತೆ ಎ.ಸಿ.ಎಫ್. ಹಾಗೂ ಇನ್ನಿತರ ಅರಣ್ಯ ಅಧಿಕಾರಿಗಳು ಇದ್ದರು.

ಇದಕ್ಕು ಮುನ್ನ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿ ಕಲಬುರಗಿ ಅರಣ್ಯ ವೃತ್ತದ ಕಚೇರಿ ಆವರಣದಲ್ಲಿ ಭೇಟಿಯ ಸವಿನೆನಪಿಗೆ ಸಸಿ ನೆಟ್ಟು ನೀರುಣಿಸಿದರು. ಸಚಿವರಿಗೆ ಮಾಜಿ ಮಹಾಪೌರರಾದ ಶರಣು ಮೋದಿ ಸಾಥ್ ನೀಡಿದರು.

ಅರಣ್ಯ ಪ್ರದೇಶ ಹೆಚ್ಚಿಸಿ, ಸಚಿವರಿಗೆ ಮನವಿ:

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಡಾ.ರಾಜೇಂದ್ರ ಯರನಾಳೆ ನೇತೃತ್ವದ ರೈತರ ನಿಯೋಗವು ಸಚಿವರನ್ನು ಭೇಟಿಯಾಗಿ, ಕ.ಕ.ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬೇಕು, ಕಟಾವಿಗೆ ಬಂದ ಮರಗಳನ್ನು ಕಟಾವು ಮಾಡಲು ಸರಳೀಕೃತ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಪ್ರಸ್ತುತ ಶ್ರೀಗಂಧ ಬೆಳೆಯುವ ರೈತ ತನ್ನ ಮನೆಯಲ್ಲಿ ಕೇವಲ 4 ಕೆ.ಜಿ. ಮಾತ್ರ ಶ್ರೀಗಂಧದ ಕಟ್ಟಿಗೆ ಇಟ್ಟುಕೊಳ್ಳಲು ಅವಕಾಶವಿದ್ದು, ಈ ನಿಯಮ ರೈತರಿಗೆ ಪೂರಕವಾಗಿಲ್ಲ. ಹೀಗಾಗಿ ಈ ನಿಯಮ ತೆಗೆದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಳೆ-ಗಾಳಿಗೆ ಶ್ರೀಗಂಧದ ಗಿಡದ ಟೊಂಗೆ ಮುರಿದು ಬಿದ್ದಲ್ಲಿ ಅಂತಹ ಕಟ್ಟಿಗೆಗಳು ರೈತರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಮತ್ತು ಮಾರಟ ಮಾಡಲು ಅವಕಾಶ ಮಾಡಿಕೊಡಬೇಕು ಎಂಬ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News