ಸಂತೇಮರಹಳ್ಳಿ: ಚುನಾವಣಾ ಪ್ರಚಾರಕ್ಕಾಗಿ ಸಂತೇಮರಹಳ್ಳಿಗೆ ಆಗಮಿಸಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದಲ್ಲಿ 2+1 ರಾಜಕೀಯ ನಡೆಯುತ್ತಿದೆ. ಕುಟುಂಬ ರಾಜಕಾರಣದ ಹೊಸ ಮಜಲು ಕರ್ನಾಟಕದಲ್ಲಿ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡೂ ಕಡೆ ಚುನಾವಣೆಗೆ ನಿಂತಿದ್ದಾರೆ. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರದಿಂದ ಅವರ ಮಗನನ್ನು ಬಲಿ ಕೊಡಲು ತಯಾರಿ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸಿನ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2 +1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ? ಎಂದ ಮೋದಿಯವರು ಕುಟುಂಬ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಭ್ರಷ್ಟಾಚಾರ!
ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವ ಯಾವ ರಾಜಕಾರಣಿಯೂ ಈ ಸರ್ಕಾರದಲ್ಲಿಲ್ಲ. ಪ್ರತಿಯೊಬ್ಬರ ಮೇಲೆ ಕನಿಷ್ಟ ಒಂದಾದರೂ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಅವ್ಯವಸ್ಥೆ ,ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತವೆ. ಅಭಿವೃದ್ಧಿಯಂತೂ ದೂರದ ಮಾತು. ಕಾಂಗ್ರೆಸ್ ಕರ್ನಾಟಕದ ವಿಕಾಸದ ಹಾದಿಯನ್ನು ಹದಗೆಡಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹೈದರು.