ಗೋಲ್ಡನ್ ಸ್ಟಾರ್ ಗಣೇಶ್ ‘ಬಾನ ದಾರಿಯಲ್ಲಿ’ ಬಂತು ಇಂಪಾದ ಹಾಡು..

Baana Dariyalli: ನನ್ನ ಸಿನಿ ಜರ್ನಿಯಲ್ಲೇ ಅತಿಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡ ಆನಂದ್ ಆಡಿಯೋಗೆ ಧನ್ಯವಾದ ಹೇಳುತ್ತೇನೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಖುಷಿ ಹಂಚಿಕೊಂಡರು.

Written by - Zee Kannada News Desk | Last Updated : Jan 5, 2023, 02:47 PM IST
  • ಮತ್ತೊಮ್ಮೆ ತೆರೆಮೇಲೆ ಮೋಡಿಮಾಡಲಿರುವ ಗೋಲ್ಡನ್ ‍ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ
  • ‘ಬಾನ ದಾರಿಯಲ್ಲಿ’ ಚಿತ್ರದ "ನಿನ್ನನ್ನು ನೋಡಿದ ನಂತರ" ಹಾಡು ಬಿಡುಗಡೆ ಮಾಡಿದ ಚಿತ್ರತಂಡ
  • ಅತಿಹೆಚ್ಚಿನ ಮೊತ್ತಕ್ಕೆ ಆಡಿಯೋ ರೈಟ್ಸ್ ಪಡೆದ ಆನಂದ್ ಆಡಿಯೋಗೆ ನಟ ಗಣೇಶ್ ಧನ್ಯವಾದ
ಗೋಲ್ಡನ್ ಸ್ಟಾರ್ ಗಣೇಶ್ ‘ಬಾನ ದಾರಿಯಲ್ಲಿ’ ಬಂತು ಇಂಪಾದ ಹಾಡು..  title=
‘ಬಾನ ದಾರಿಯಲ್ಲಿ’ ಬಂತು ಇಂಪಾದ ಹಾಡು

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ ‘ಬಾನ ದಾರಿಯಲ್ಲಿ’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನಿನ್ನನ್ನು ನೋಡಿದ ನಂತರ" ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ಬಳಿಕ ಚಿತ್ರತಂಡದ ಸದಸ್ಯರು ‘ಬಾನ ದಾರಿಯಲ್ಲಿ’ ಚಿತ್ರದ ಬಗ್ಗೆ ಮಾತನಾಡಿದರು.

‘ಇದು ಕೊರೊನಾ ಸಮಯದಲ್ಲಿ ಅಂದರೆ ಸುಮಾರು ಎರಡೂವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದರು.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ‘ನಾನು ಮೊದಲು ಆನಂದ್ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿ ಜರ್ನಿಯಲ್ಲೇ ಅತೀಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. "ಹುಡುಗಾಟ" ಚಿತ್ರದ "ಮಂದಾಕಿನಿ ಯೇ" ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೇ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವುದು ಚಿತ್ರದ ಮತ್ತೊಂದು ಹೈಲೆಟ್’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mr Bachelor: ನಾಳೆ ‘MR ಬ್ಯಾಚುಲರ್’ ಆಗಮನ…

‘ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ - ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ  ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ. ಹೀಗಾಗಿ ನಮ್ಮ ಚಿತ್ರತಂಡ ಹಾಗೂ ಸ್ಟಾರ್ ರಿಪೋರ್ಟರ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಆನಂತರ ಹಾಡು ಬಿಡುಗಡೆ ಮಾಡಿದ್ದೇವೆ’ ಎಂದು ಗಣೇಶ್ ತಿಳಿಸಿದರು.

ಸಿನಿಮಾ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದು ನಾಯಕಿ ರುಕ್ಮಿಣಿ ವಸಂತ್ ಖುಷಿ ಹಂಚಿಕೊಂಡರು. ಹಾಡು ಅದ್ಭುತವಾಗಿದೆ. ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ. ಕಳೆದ ವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿದೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ "ಬಾನ ದಾರಿಯಲ್ಲಿ" ಚಿತ್ರವೂ ಇರಲಿ ಎಂದು ನಾಯಕಿ ರೀಷ್ಮಾ ನಾಣಯ್ಯ ಶುಭ ಕೋರಿದರು.

‘ಬಾನ ದಾರಿಯಲ್ಲಿ’ ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ  ಗೀತರಚನೆಕಾರ ಕವಿರಾಜ್, ‘ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ’ ಎಂದು ತಿಳಿಸಿದರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: Orchestra Mysore: ಸಂಕ್ರಾಂತಿ ಹಬ್ಬಕ್ಕೆ ಸೌಂಡ್ ಮಾಡಲಿರುವ ಡಾಲಿ ಬಳಗದ ‘ಆರ್ಕೇಸ್ಟ್ರಾ ಮೈಸೂರು’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News