ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶದ ಹಲವಾರು ಭಾಗಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ.
ಎಸ್ ಪಿ ಮುಖರ್ಜಿ ಮಾರ್ಗದ ಫತೇಪುರಿ ಟಿ-ಪಾಯಿಂಟ್, ರಾಜಧಾನಿ ಪಾರ್ಕ್, ಕಾಶ್ಮೀರಿ ಗೇಟ್, ಮೆಹ್ರೌಲಿ-ಬಾದರ್ಪುರ್ ಟಿ-ಪಾಯಿಂಟ್ ಮತ್ತು ಪ್ರಮೋದ್ ಮಹಾಜನ್ ಮಾರ್ಗದಂತಹ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ನಿಂದಾಗಿ ಸಂಸದರು ಪಾರ್ಲಿಮೆಂಟ್ ಹೌಸ್ ಗೆ ತೆರಳಲು ಸಾಕಷ್ಟು ಸಮಯ ಬೇಕಾಯಿತು.
ಈಗಾಗಲೇ ದೆಹಲಿಯಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಂಚಾರ ಅಡಚಣೆ ಮತ್ತು ನೀರು ನಿಂತಿರುವ ಪ್ರದೇಶಗಳ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಮಳೆಯಿಂದಾಗಿ ಅಸ್ತವ್ಯಸ್ತಗೊಂಡ ರಸ್ತೆಗಳು ಮತ್ತು ವಾಹನ ಸಂಚಾರದ ಫೋಟೋಗಳನ್ನೂ ಸಹ ಪೋಸ್ಟ್ ಮಾಡಲಾಗಿದ್ದು, ಗುರುಗ್ರಾಮ ಮತ್ತು ನೋಯ್ಡಾದ ಹಲವು ಭಾಗಗಳಲ್ಲಿ ಮೊಣಕಾಲು ಉದ್ದದವರೆಗೆ ನಿರು ನಿಂತಿದೆ. ರಾಷ್ಟ್ರ ರಾಜಧಾನಿಯ ಕೆಲವು ಮನೆಗಳಿಗೆ ನೀರು ನುಗಿದ್ದು, ಜನಜೀವನ ಸಹ ಅಸ್ತವ್ಯಸ್ತಗೊಂಡಿದೆ.
ಇದೇ ವೇಳೆ, ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ದಿನವಿಡೀ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.