Karnataka Assembly Elections: ಮೈಸೂರಿನಲ್ಲಿ ಪ್ರಧಾನಿ ನರೇಂದ್ರಮೋದಿ ರ‍್ಯಾಲಿಯಲ್ಲಿ ಭದ್ರತಾ ಲೋಪ- ವಿಡಿಯೋ ವೈರಲ್

Karnataka Assembly Elections: ರಾಜ್ಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಘಟಾನುಘಟಿ ನಾಯಕರು ರಾಜ್ಯದೆಲ್ಲೆಡೆ ರೋಡ್ ಶೋ ಮುಖಾಂತರ ಮತ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ (ಭಾನುವಾರ, 30 ಏಪ್ರಿಲ್) ಮೈಸೂರಿನಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭದ್ರತಾ ಲೋಪ ಕಂಡು ಬಂದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

Written by - Yashaswini V | Last Updated : May 1, 2023, 08:41 AM IST
  • ಅಂಬಾರಿ ಊರಿನಲ್ಲಿ ನಮೋ ಸವಾರಿ
  • ಮೈಸೂರಲ್ಲಿ ಮೋದಿ ಭರ್ಜರಿ ರೋಡ್‌ ಶೋ
  • ಪ್ರಧಾನಿಗೆ ಈಶ್ವರಪ್ಪ, ರಾಮದಾಸ್‌, ಪ್ರತಾಪ್‌ ಸಿಂಹ ಸಾಥ್‌
Karnataka Assembly Elections: ಮೈಸೂರಿನಲ್ಲಿ ಪ್ರಧಾನಿ ನರೇಂದ್ರಮೋದಿ ರ‍್ಯಾಲಿಯಲ್ಲಿ ಭದ್ರತಾ ಲೋಪ- ವಿಡಿಯೋ ವೈರಲ್  title=
PM Narendra Modi Mysuru Road Show viral video

Karnataka Assembly Elections: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಅರಮನೆಗಳ ನಗರಿ, ಅಂಬಾರಿ ಊರು ಎಂದೆಲ್ಲಾ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ರ್ಯಾಲಿ ನಡೆಸುವ ಮೂಲಕ ಕಮಲ ಕಲಿಗಳಿಗೆ ಬೂಸ್ಟರ್ ಡೋಸ್ ನೀಡಿದ್ದಾರೆ. ಆದರೆ, ಈ ಮಧ್ಯೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭದ್ರತಾ ಲೋಪ ಕಂಡು ಬಂದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

ಭಾನುವಾರ (30 ಏಪ್ರಿಲ್ 2023) ಸಾಂಸ್ಕೃತಿಕ ನಗರಿ ಮೈಸೂರಲ್ಲಿ 'ನಮೋ ಅಬ್ಬರ' ಜೋರಾಗಿತ್ತು. ಮೈಸೂರಿನಲ್ಲಿ ಬರೋಬ್ಬರಿ 4.ಕಿ.ಮೀಟರ್‌ ವರೆಗೆ ರೋಡ್ ಶೋ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು. ಇನ್ನು ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಗಳ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು. 

ಇದನ್ನೂ ಓದಿ- ನಾನು ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ: ಸಿಎಂ ಬೊಮ್ಮಾಯಿ‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಗನ್ ಹೌಸ್ ವೃತ್ತದಿಂದ ಹೈವೆ ವೃತ್ತದ ವರೆಗೂ ರೋಡ್ ಶೋ ನಡೆಸಿದರು. ಪಾಠಶಾಲಾ ವೃತ್ತ, ಮೈಸೂರು ಪಾಲಿಕೆ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್‌ಎಮ್‌ಸಿ, ಬಂಬೂ ಬಜಾರ್ ಹಾಗೂ ಹೈವೆ ವೃತ್ತ, ಬನ್ನಿಮಂಟಪದ ವರೆಗೂ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿ ದಶಕಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕೆ.ಆರ್. ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿರುವ ಎಸ್.ಎ. ರಾಮದಾಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಕ್ಕದಲ್ಲೇ ನಿಂತು ರೋಡ್ ಶೋಗೆ ಕಳೆಗಟ್ಟಿದರು. ಇವರೊಂದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಾಜಿ ಮಂತ್ರಿ ಕೆ.ಎಸ್. ಈಶ್ವರಪ್ಪ ಕೂಡ ಸಾಥ್ ನೀಡಿದ್ದರು. ಈ ರೀತಿಯಾಗಿ ಭಾರೀ ಸಂಭ್ರಮ ಸಡಗರದಿಂದ ಸಾಗುತ್ತಿದ್ದ ರೋಡ್ ಶೋ ವೇಳೆ ಭದ್ರತಾ ಲೋಪವೊಂದು ಕಂಡು ಬಂದಿದೆ.

ಅಂಬಾರಿ ಊರಲ್ಲಿ ನಮೋ ಸವಾರಿ ವೇಳೆ ಭದ್ರತಾ ಲೋಪ- ವಾಚ್ ವಿಡಿಯೋ

ಮೈಸೂರಿನಲ್ಲಿ ಭಾನುವಾರ (30 ಏಪ್ರಿಲ್ 2023) ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ, ಅವರು ಚಲಿಸುತ್ತಿದ್ದ ವಾಹನದ ಮೇಲೆ ಮೊಬೈಲ್ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮೊಬೈಲ್ ಅನ್ನು ವಾಹನದತ್ತ ಎಸೆದಿದ್ದು ಬಿಜೆಪಿಯ ಓರ್ವ ಮಹಿಳಾ ಕಾರ್ಯಕರ್ತೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಪರ ಕಿಚ್ಚ ಸುದೀಪ್ ರೋಡ್ ಶೋ

ಈ ಕುರಿತಂತೆ ಮಾಹಿತಿ ನೀಡಿರುವ ಕಾನೂನು ಮತ್ತು ಸುವ್ಯವಸ್ಥೆ ಎಡಿ‌ಜಿ‌ಪಿ ಅಲೋಕ್ ಕುಮಾರ್, ಪ್ರಧಾನಿ ಎಸ್‌ಪಿಜಿ ರಕ್ಷಣೆಯಲ್ಲಿದ್ದರು. ವಾಹನದ ಮೇಲೆ ಬಂದು ಬಿದ್ದ ಫೋನ್ ಬಿಜೆಪಿಯ ಕಾರ್ಯಕರ್ತರದ್ದು. ಪ್ರಧಾನಿಯವರ ವಾಹನದ ಮೇಲೆ ಮೊಬೈಲ್ ಫೋನ್ ಎಸೆದ ವ್ಯಕ್ತಿಯನ್ನು ನಾವು ಪತ್ತೆ ಹಚ್ಚಿದ್ದೇವೆ. ಪ್ರಧಾನಿಯವರ ವಾಹನದ ಮೇಲೆ ಮೊಬೈಲ್ ಎಸೆದ ವ್ಯಕ್ತಿಗೆ ಯಾವುದೇ ರೀತಿಯ ದುರುದ್ದೇಶ ಇರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೋಡಿದ ಖುಷಿಯಲ್ಲಿ ಉತ್ಸಾಹದಿಂದ ಅವರು ಮೊಬೈಲ್ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಫೋನ್ ಅನ್ನು ಎಸ್‌ಪಿಜಿ ವ್ಯಕ್ತಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿಸಿದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News