Karnataka Budget 2023 Live: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ

Karnataka Budget 2023 Live Updates: ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಸಿಎಂ ಬೊಮ್ಮಾಯಿ ಕಲ್ಯಾಣ ಯೋಜನೆಗಳು ಮತ್ತು ಹಲವಾರು ಪ್ರಮುಖ ಸಮುದಾಯಗಳ ಬೇಡಿಕೆಗಳ ಈಡೇರಿಕೆಯಂತಹ ಕೆಲವು ದೊಡ್ಡ  ಘೋಷಣೆ ಮಾಡುವ ಸಾಧ್ಯತೆಯಿದೆ.

Written by - Zee Kannada News Desk | Last Updated : Feb 17, 2023, 01:18 PM IST
Karnataka Budget 2023 Live: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ
Live Blog

ಕರ್ನಾಟಕ ಬಜೆಟ್ 2023 ಲೈವ್ ಅಪ್‌ಡೇಟ್‌ಗಳು: ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 2ನೇ ಬಜೆಟ್ ಆಗಿದ್ದು, ಪ್ರಸಕ್ತ ಅವಧಿಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಸಿಎಂ ಬೊಮ್ಮಾಯಿ ಕಲ್ಯಾಣ ಯೋಜನೆಗಳು ಮತ್ತು ಹಲವಾರು ಪ್ರಮುಖ ಸಮುದಾಯಗಳ ಬೇಡಿಕೆಗಳ ಈಡೇರಿಕೆಯಂತಹ ಕೆಲವು ದೊಡ್ಡ  ಘೋಷಣೆ ಮಾಡುವ ಸಾಧ್ಯತೆಯಿದೆ.

ನಿತ್ಯ ಟ್ರಾಫಿಕ್ ಸಮಸ್ಯೆಗಳು ಮತ್ತು ಪ್ರವಾಹ ಸಮಸ್ಯೆಗಳಿರುವ ಬೆಂಗಳೂರಿಗೆ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡುವ ಸಾಧ್ಯತೆಯಿದೆ. ಈ ವಾರದ ಆರಂಭದಲ್ಲಿ, ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್(TomTom Traffic Index) ಪ್ರಕಾರ ಬೆಂಗಳೂರು ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಸ್ಥಾನ ಪಡೆದಿತ್ತು. ಭಾರತದ ಅತ್ಯಂತ ಹೆಚ್ಚು ಟ್ರಾಫಿಕ್-ದಟ್ಟಣೆಯ ನಗರಗಳ ಪಟ್ಟಿಯಲ್ಲಿ ಬೆಂಗಳುರು ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪುಣೆ (6 ನೇ ಸ್ಥಾನ), ನವದೆಹಲಿ (34) ಮತ್ತು ಮುಂಬೈ (47) ಇವೆ. ಹೀಗಾಗಿ ಇಂದಿನ ಬಜೆಟ್ ಹಲವು ಕಾರಣಗಳಿಂದ ತೀವ್ರ ಕುತೂಹಲ ಸೃಷ್ಟಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

17 February, 2023

  • 13:17 PM

    ಬಿಸಿಲು ಕುದುರೆ ಬಜೆಟ್: CM ಬಸವರಾಜ ಬೊಮ್ಮಾಯಿ ಮಂಡಿಸಿರುವುದು ಬಿಸಿಲು ಕುದುರೆ ಬಜೆಟ್. ಬೊಮ್ಮಾಯಿ ಮಂಡಿಸಿದ ಬಜೆಟ್ ಯಾರ ಕೈಗೂ ಸಿಗುವುದಿಲ್ಲ. ಬೊಮ್ಮಾಯಿ ಮಂಡಿಸಿರುವುದು ಶೋ ಬಜೆಟ್. ಜಾತ್ರೆಯ ಕನ್ನಡದ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

  • 12:47 PM

    ಉದ್ಯೋಗ ದೊರಕದ ಯುವಕರಿಗೆ ನೆರವು: ಪದವಿ ಶಿಕ್ಷಣವನ್ನು ಮುಗಿಸಿ 3 ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ‘ಯುವಸ್ನೇಹಿ’ ಎಂಬ ಹೊಸ ಯೋಜನೆಯಡಿ ತಲಾ 2 ಸಾವಿರ ರೂ.ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗುವುದು.

  • 12:45 PM

    1,500 ರೂ.ಗಳ ಮಾಸಿಕ ಶಿಷ್ಯವೇತನ: ‘ಬದುಕುವ ದಾರಿ’ ಎಂಬ ಹೊಸ ಯೋಜನೆಯಡಿ ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ‍್ಯವಾಗದಿರುವ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ಅವಧಿಯ ಸರ್ಟಿಫಿಕೇಟ್ ತರಬೇತಿ ಪಡೆಯಲು ಮಾಸಿಕ 1,500 ರೂ.ಗಳ ಶಿಷ್ಯವೇತನವನ್ನು ನೀಡಲಾಗುವುದು. ಈ ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ Apprenticeship ಕಾರ್ಯಕ್ರಮದಡಿ 3 ತಿಂಗಳಿಗೆ ಮಾಸಿಕ 1,500 ರೂ.ಗಳ ಶಿಶಿಕ್ಷು ಭತ್ಯೆಯನ್ನು ನೀಡಲಾಗುವುದು.

  • 12:26 PM

    ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ: ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನದ ಆಯೋಜಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಸಮ್ಮೆಳನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಆಯೋಜಿಸಿದ್ದರು.  2011ರಲ್ಲಿ ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. ಇದೀಗ 3ನೇ ವಿಶ್ವ ಕನ್ನಡ ಸಮ್ಮೇಳನವು ದಾವಣಗೆರೆಯಲ್ಲಿ ನಡೆಯಲಿದೆ.

  • 12:21 PM

    ಮಠಮಾನ್ಯಗಳಿಗಿಲ್ಲ ನೇರ ಅನುದಾನ: ಬಜೆಟ್‍ನಲ್ಲಿ ಯಾವುದೇ ಮಠಮಾನ್ಯಗಳಿಗೆ ನೇರ ಅನುದಾನವನ್ನು ಸಿಎಂ ಬೊಮ್ಮಾಯಿ ನೀಡಿಲ್ಲ. ಬದಲಾಗಿ ಧಾರ್ಮಿಕ ದತ್ತಿ ಇಲಾಖೆಯಡಿ 1,000 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ 1,000 ಕೋಟಿ ರೂ. ವೆಚ್ಚದಲ್ಲಿ ಮುಂದಿನ 2 ವರ್ಷಕ್ಕೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ.

  • 12:10 PM

    ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಗಮನ ಕೊಡದ ಸರ್ಕಾರ. ಯೋಜನೆಗೆ ಅನುದಾನ ಮೀಸಲಿಡುವ ಕೆಲಸ ಮಾಡದ ಸರ್ಕಾರ. ಬರೀ ಯೋಜನೆಗೆ ಅಗತ್ಯ ಅನುದಾನ ಒದಗಿಸುವ ಭರವಸೆ. ಮೇಕೆದಾಟು ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ತಮಿಳುನಾಡು ರಾಜ್ಯವು ದಾವೆ ಹೂಡಿದೆ. ಇದನ್ನು ಶೀಘ್ರವೇ ಇತ್ಯರ್ಥಪಡಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಯೋಜನೆಗೆ ಅಗತ್ಯ ಅನುದಾನ ಕಲ್ಪಿಸುವುದಾಗಿ ಭರವಸೆ. ಆದರೆ ಯೋಜನೆ ಜಾರಿಗೆ ಸಮಯವಾಗಲಿ, ಅನುದಾನ ಮೀಸಲಿಡುವ ಕೆಲಸ ಮಾಡದ ಸರ್ಕಾರ. ಕಾಂಗ್ರೆಸ್ ಹೋರಾಟಕ್ಕೂ ಕ್ಯಾರೆ ಎನ್ನದ ಸರ್ಕಾರ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಮಾಡಿತ್ತು.

  • 12:00 PM

    ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ. ಪ್ರವಾಸಿ ತಾಣಗಳಲ್ಲಿನ ಗೈಡಗಳ ಪ್ರೋತ್ಸಾಹ ಧನ ಹೆಚ್ಚಳ. ನಾಡಪ್ರಭು ಕೆಂಪೇಗೌಡರ ಇತಿಹಾಸ ಪರಿಚಯಿಸಲು ಪ್ರವಾಸಿ ಸರ್ಕೀಟ್ ಸ್ಥಾಪನೆ. ರಾಜ್ಯದ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ.

  • 11:45 AM

    ಸಿಎಂ ಮಠ ಮಂತ್ರ: ಮಠ-ಮಂದಿರಗಳ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲು. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • 11:36 AM

    ಶೈಕ್ಷಣಿಕ ಕ್ರಾಂತಿ: ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ. 500 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 11:32 AM

    ಕೃಷಿ ವಲಯಕ್ಕೆ ಭರ್ಜರಿ ಅನುದಾನ: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24ನೇ‌ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂ. ಅನುದಾನ ಒದಗಿಸಲಾಗಿದೆ.

  • 11:30 AM

    ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಬಂಪರ್: ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ 2ನೇ ಬಜೆಟ್‍ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಬಂಪರ್ ಆಫರ್ ಘೋಷಿಸಿದ್ದಾರೆ. ಸರ್ಕಾರ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಘೋಷಣೆ ಮಾಡಿದೆ. ವಿದ್ಯಾವಾಹಿನಿ ಯೋಜನೆಯಡಿ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ. ಇದರಿಂದ ರಾಜ್ಯದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.

  • 11:29 AM

    ಮಕ್ಕಳ ಬಸ್ ಸಮಸ್ಯೆ ನಿವಾರಣೆಗೆ ಕ್ರಮ: ಶಾಲಾ-ಕಾಲೇಜುಗಳ ಮಕ್ಕಳ ಬಸ್ ಸಮಸ್ಯೆ ನಿವಾರಣೆಗೆ ಕ್ರಮ. ಮಕ್ಕಳ ಬಸ್ ಯೋಜನೆ ಪ್ರಾರಂಭಕ್ಕೆ ನಿರ್ಧಾರ. 100 ಕೋಟಿ ರೂ. ವೆಚ್ಚದಲ್ಲಿ 1000 ಹೊಸ ಕಾರ್ಯಾಚರಣೆ. ಇದರಿಂದ  ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

  • 11:27 AM

    ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ: ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ  ಮಹದಾಯಿ ನ್ಯಾಯಾಧಿಕರಣದಿಂದ ಹಂಚಿಕೆಯಾದ 3.90 ಟಿಎಂಸಿ ನೀರಿನ ಬಳಕೆಗಾಗಿ DPR. ಈ ಯೋಜನೆಗಳ ಕಾಮಗಾರಿ ಪ್ರಾರಂಭಿಸಲು 1,000 ಕೋಟಿ ರೂ.ವನ್ನು ಸರ್ಕಾರ ಮೀಸಲಿಟ್ಟಿದೆ.

    ಶೀಘ್ರವೇ ಮೇಕೆದಾಟು ಇತ್ಯರ್ಥ: ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರ ದಾವೆ ಹೂಡಿದೆ. ಇದನ್ನು ಶೀಘ್ರದಲ್ಲೇ ಇತ್ಯರ್ಥ ಪಡಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದ್ದೇವೆ. ಆ ಯೋಜನೆಗೆ ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕಳೆದ ಬಾರಿಯ ಬಜೆಟ್‌ನಲ್ಲಿ 1,000 ಕೋಟಿ ರೂ.ವನ್ನು ಸರ್ಕಾರ ಮೀಸಲಿಟ್ಟಿತ್ತು.  

  • 11:23 AM

    ವೆಚ್ಚಕ್ಕಿಂತ ಆದಾಯ ಹೆಚ್ಚಾಗಿದೆ: ವೆಚ್ಚಕ್ಕಿಂತ ಆದಾಯ ಹೆಚ್ಚಾಗಿದೆ ಎಂದು ಬಜೆಟ್‍ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ್ದಾರೆ. 402 ಕೋಟಿ ರೂ. ಹೆಚ್ಚುವರಿ ರಾಜಸ್ವ ಸಂಗ್ರಹವನ್ನು ಸರ್ಕಾರ ತೋರಿಸಿದೆ.

    LED ಲ್ಯಾಂಪ್ ಹಾಕಿಕೊಂಡ ಸಿಎಂ: ಬಜೆಟ್ ಪುಸ್ತಕ ಓದಲು ಸಿಎಂ ಬಸವರಾಜ ಬೊಮ್ಮಾಯಿಯವರು LED ಲ್ಯಾಂಪ್ ಹಾಕಿಕೊಂಡಿದ್ದರು. LED ಲ್ಯಾಂಪ್ ಬೆಳಕಲ್ಲಿ ಸಿಎಂ ಬಜೆಟ್ ಓದುತ್ತಿದ್ದಾರೆ.

  • 11:21 AM

    77,750 ಕೋಟಿ ರೂ. ಸಾಲ ಪಡೆಯಲು ನಿರ್ಧಾರ: 2023-24ನೇ ಸಾಲಿನಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವ ಸಂಗ್ರಹ ಗುರಿ 1,64,653 ಕೋಟಿ ರೂ. ಆಗಿದೆ. ತೆರಿಗೆಯೇತರ ರಾಜಸ್ವ ಸಂಗ್ರಹ ಗುರಿ‌ 11,000 ಕೋಟಿ ರೂ. ಆದರೆ, ಇದರಲ್ಲಿ ಕೇಂದ್ರದ ತೆರಿಗೆ ಪಾಲು ನಿರೀಕ್ಷೆ 37,252 ಕೋಟಿ ರೂ. ಆಗಿದೆ. ಕೇಂದ್ರದಿಂದ ಸಹಾಯ ಧನದ ಅನುದಾನ ನಿರೀಕ್ಷೆ 13,005 ಕೋಟಿ ರೂ. ಈ ಬಾರಿ ರಾಜ್ಯ ಸರ್ಕಾರ ಒಟ್ಟು 77,750 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿದೆ.

  • 11:17 AM

    ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ

    ಶಿಕ್ಷಣ: 37,960 ಕೋಟಿ

    ಜಲಸಂಪನ್ಮೂಲ: 22,854 ಕೋಟಿ

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20,494 ಕೋಟಿ

    ನಗರಾಭಿವೃದ್ಧಿ: 17,938 ಕೋಟಿ

    ಕಂದಾಯ: 15,943 ಕೋಟಿ

    ಆರೋಗ್ಯ: 15,151 ಕೋಟಿ

    ಒಳಾಡಳಿತ ಮತ್ತು ಸಾರಿಗೆ: 14,509 ಕೋಟಿ

    ಇಂಧನ: 13,803 ಕೋಟಿ

    ಸಮಾಜ ಕಲ್ಯಾಣ: 11,163 ಕೋಟಿ

    ಲೋಕೋಪಯೋಗಿ: 10,741 ಕೋಟಿ

    ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5,676 ಕೋಟಿ

    ಆಹಾರ ಮತ್ತು ನಾಗರೀಕ ಸರಬರಾಜು: 4,600 ಕೋಟಿ

    ವಸತಿ: 3,787 ಕೋಟಿ

    ಇತರೆ: 11,6968 ಕೋಟಿ

  • 11:11 AM

    6 ಹೊಸ ESI ಆಸ್ಪತ್ರೆ: ರಾಜ್ಯದಲ್ಲಿ ಹೊಸದಾಗಿ 6 ESI ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು. ತುಮಕೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 11:03 AM

    ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗಿದೆ: ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿಯಿಂದ ಬಿಡುಗಡೆಯಾದ GSDP ಅಂದಾಜುಗಳಂತೆ ರಾಜ್ಯದ ಆರ್ಥಿಕತೆಯು ಕೋವಿಡ್ ಮಟ್ಟವನ್ನು ಮೀರಿ ಚೇತರಿಸಿಕೊಂಡಿದೆ ಎಂದು ಮನರುಚ್ಚರಿಸಿದೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳಿಂದ ರಾಜ್ಯವು 2022ರಲ್ಲಿ ಹಣದುಬ್ಬರದ ಒತ್ತಡಕ್ಕೆ ಒಳಗಾಯಿತು. RBI ನಿಂದ ಸಮಯೋಚಿತ ಕ್ರಮಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಜನಪರ ನೀತಿಗಳಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಿದೆ.

  • 11:01 AM

    ಎಲ್ಲರೂ ಅಭಿವೃದ್ಧಿಯ ಅಮೃತ ಸವಿಯುವಂತಾಗಬೇಕು: ಪ್ರಧಾನಿ ಮೋದಿಯವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಂದಿನ 25 ವರ್ಷಗಳು ಅಮೃತ ಕಾಲ, ಕರ್ತವ್ಯದ ಕಾಲ ಎಂದು ಕರೆ ನೀಡಿದ್ದಾರೆ. ಭವ್ಯ ಕರ್ನಾಟಕ ನಿರ್ಮಾಣ ಮಾಡುವ ಆಶಯ ಈ ಆಯವ್ಯಯದ್ದಾಗಿದೆ. ಸ್ವಸ್ಥ, ಸುಶಿಕ್ಷಿತ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣದ ಮೂಲಕ ಅಭಿವೃದ್ಧಿಯ ಅಮೃತ ಎಲ್ಲರೂ ಸವಿಯುವಂತಾಗಬೇಕು. ಇಂತಹ ಭವಿಷ್ಯದ ಮುನ್ನೋಟವಿರುವ, ವಾಸ್ತವದ ಸವಾಲುಗಳನ್ನು ಮೆಟ್ಟಿ, ಸಮೃದ್ಧ ಕರ್ನಾಟಕದ ಗುರಿ ಸಾಧಿಸುವ ಹಂಬಲದೊಂದಿಗೆ ಈ ಆಯವ್ಯಯ ಮಂಡಿಸುತ್ತಿದ್ದೇನೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • 10:59 AM

    ಭದ್ರಾ ಮೇಲ್ದಂಡೆ ಯೋಜನೆಗೆ  5,300 ಕೋಟಿ ರೂ.: ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಸತತವಾಗಿ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. ಈ ವರ್ಷದ ಕೇಂದ್ರ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಆಯವ್ಯಯದಲ್ಲಿ 5,300 ಕೋಟಿ ರೂ. ಒದಗಿಸಿರುವುದು, ರೈಲ್ವೆ ಯೋಜನೆಗಳಿಗೆ ಅತಿಹೆಚ್ಚು ಅಂದರೆ 7,561 ಕೋಟಿ ರೂ. ಒದಗಿಸಿರುವುದು. ನಿರ್ಬಂಧ ಸಡಿಲಿಸಿ ಕರಾವಳಿಯಲ್ಲಿ ವಲಯದ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದು, ರಾಷ್ಟ್ರೀಯ ಹೆದ್ದಾರಿ, ಬಂದರು ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

  • 10:58 AM

    ಅವಕಾಶಗಳ ಸದ್ಬಳಕೆಗೆ ಆದ್ಯತೆ: ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವೆಂದು ಗುರುತಿಸಿಕೊಂಡಿದೆ. ಬೆಂಗಳೂರಿನಿಂದಾಚೆಗೂ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಿರುವುದು, ರಾಜ್ಯದ ಎಲ್ಲಾ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆ. ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ, ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ಹಾಗೂ ಜಲಸಾರಿಗೆಯ ಅವಕಾಶಗಳ ಸದ್ಬಳಕೆಗೆ ಆದ್ಯತೆ. ಬಂದರುಗಳ ಅಭಿವೃದ್ಧಿಗೆ ನೀಡಲಾಗುತ್ತಿರುವ ಮಹತ್ವ ಭವಿಷ್ಯದ ದಿನಗಳಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಿದೆ.

  • 10:55 AM

    ದೊಡ್ಡ ಪ್ರಮಾಣದ ಹೂಡಿಕೆ: ದಾವೊಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಹಾಗೂ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುವ ಮೂಲಕ ರಾಜ್ಯಕ್ಕೆ ಭಾರೀ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಲಾಗಿದೆ. ಈ ಒಪ್ಪಂದಗಳು ಕಾರ್ಯರೂಪಕ್ಕೆ ಬರಲು ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲಾಗುತ್ತಿದೆ. ಭಾರತ ಸರ್ಕಾರದ ಕೈಗಾರಿಕೆ ಮತ್ತು ಹೂಡಿಕೆ ಯೋಜನೆಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.

  • 10:54 AM

    ಸಂಪೂರ್ಣ ಅಭಿವೃದ್ಧಿಗೆ ಪ್ರಯತ್ನ: ರಾಜ್ಯದಲ್ಲಿ ಏಕರೂಪದ ಅಭಿವೃದ್ಧಿಯ ಆಶಯದೊಂದಿಗೆ ಕಳೆದ ವರ್ಷ ದೇಶದಲ್ಲಿಯೇ ಮೊದಲ ಬಾರಿಗೆ ಅಭಿವೃದ್ಧಿ ಆಕಾಂಕ್ಷಿ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಈ ತಾಲೂಕುಗಳಲ್ಲಿ ಆಯಾ ಕ್ಷೇತ್ರದಲ್ಲಿ ಸಮಗ್ರ ಹಾಗೂ ಸಂಪೂರ್ಣ ಅಭಿವೃದ್ಧಿಗೆ ಫಲಿತಾಂಶ ಕೇಂದ್ರಿತ ಪ್ರಯತ್ನ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಫಲ ನೀಡಲಿವೆ.

  • 10:53 AM

    ಆರೋಗ್ಯ ಕೇಂದ್ರಗಳ ಉನ್ನತೀಕರಣ: ಉನ್ನತೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಮತ್ತಿತರ ಅನುಗುಣವಾದ ಉಪಕ್ರಮಗಳು ಕೈಗಾರಿಕೆಯ ಬೇಡಿಕೆಗೆ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪೂರಕವಾಗಿವೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಮ್ಮ ಕ್ಲಿನಿಕ್ ಮತ್ತಿತರ ಕಾರ್ಯಕ್ರಮಗಳ ಮೂಲಕ ದ್ವಿತೀಯ ಮತ್ತು ತೃತೀಯ ಆರೈಕೆಗಳು ಬಡವರಿಗೆ ಸುಲಭವಾಗಿ, ಸುಗಮವಾಗಿ ಮತ್ತು ಸ್ಥಳೀಯವಾಗಿ ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.

  • 10:51 AM

    ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ: ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಸ್ಥ, ಸುಶಿಕ್ಷಿತ, ಪ್ರಜ್ಞಾವಂತ ಪೀಳಿಗೆಯ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದೇವೆ. ಉದ್ಯೋಗ ಸೃಜನೆಯ ಜೊತೆಗೆ ಅದಕ್ಕೆ ತಕ್ಕಂತ ಕೌಶಲ್ಯ ಅಭಿವೃದ್ಧಿ ಅವಕಾಶ ತರಬೇತಿ ನೀಡುವ ಮೂಲಕ ನಮ್ಮ ನಾಡಿನ ಯುವಕರು ಈ ಅವಕಾಶಗಳ ಸದ್ಬಳಕೆ ಮಾಡುವ ವಾತಾವರಣ ನಿರ್ಮಿಸುತ್ತಿದ್ದೇವೆ. ಪಾಲಿಟೆಕ್ನಿಕ್, ಐಟಿಐ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ಕ್ರಮ ವಹಿಸಿದ್ದೇವೆಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:50 AM

    ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಒಕ್ಕಲುತನದ ಪ್ರತಿ ಹಂತದಲ್ಲಿಯೂ ರೈತರಿಗೆ ಬೆಂಗಾವಲಾಗಿ ಅವಕಾಶ ಪ್ರೋತ್ಸಾಹಿಸಿದ್ದೇವೆ. ಬೆಂಬಲ ಬೆಲೆ ಯೋಜನೆಯಡಿ ದಾಖಲೆ ಪ್ರಮಾಣದ ರಾಗಿ ಖರೀದಿ, ಕುಚ್ಚಲಕ್ಕಿ ಖರೀದಿಗೆ ಒದಗಿಸುವುದರೊಂದಿಗೆ ಪ್ರವಾಹ ಸಂದರ್ಭದಲ್ಲಿ NDRF ಪರಿಹಾರ ಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರವನ್ನು ದಾಖಲೆ ಅವಧಿಯಲ್ಲಿ ವಿತರಿಸಲಾಗಿದೆ. ತೊಗರಿ ಬೆಳೆ, ಅಡಿಕೆ ಬೆಳೆಗೆ ರೋಗ ರಾಸುಗಳಿಗೆ ಚರ್ಮಗಂಟು ರೋಗಬಾಧೆ ಸಂಭವಿಸಿದಾಗಲೂ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಪ್ರಾರಂಭಿಸಲಾದ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಿದ್ದೇವೆಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:48 AM

    ವಿವಿಧ ಮಾಸಾಶನಗಳ ಹೆಚ್ಚಳ: ಜನರ ಅಭ್ಯುದಯ ಮತ್ತು ಅಗತ್ಯಗಳನ್ನೇ ಕೇಂದ್ರೀಕರಿಸಿದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ವಿತರಿಸುವ ನಿರ್ಮಾಣ ಮೂಲಕ ಪಾರದರ್ಶಕತೆ ಮೆರೆದಿದ್ದೇವೆ. ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಶ್ರಮಿಕರ ಕುರಿತ ನಮ್ಮ ಕಾಳಜಿ ಮೆರೆದಿದ್ದೇವೆ. ಆಸಿಡ್ ದಾಳಿ ಸಂತ್ರಸ್ತರ ಮಾಸಾಶನ 10 ಸಾವಿರ ರೂ. ಗಳಿಗೆ ಹೆಚ್ಚಳ, ವಿವಿಧ ಮಾಸಾಶನಗಳ ಹೆಚ್ಚಳ, ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಯೋಜನೆಗಳು ಮತ್ತಿತರ ಉಪಕ್ರಮಗಳೊಂದಿಗೆ ಸ್ಪಂದನಾಶೀಲ ಸರ್ಕಾರದ ಕರ್ತವ್ಯ ನಿಭಾಯಿಸಿದ್ದೇವೆಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:47 AM

    24 ಸಾವಿರ ಪೌರ ಕಾರ್ಮಿಕರ ಸೇವೆ ಖಾಯಂ: ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಕ್ರಮವಾಗಿ ಶೇ.15 ರಿಂದ ಶೇ.17ಕ್ಕೆ ಹಾಗೂ ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸುವ ಹಾಗೂ 24 ಸಾವಿರ ಪೌರ ಕಾರ್ಮಿಕರ ಸೇವೆ ಖಾಯಂ ಮಾಡುವ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:45 AM

    ಅಭಿವೃದ್ಧಿಗೆ ಸಮಾನ ಆದ್ಯತೆ: ಹಣಕಾಸು ಮೊದಲ 2 ತಿಂಗಳಿನಲ್ಲಿಯೇ ಬಹಳಷ್ಟು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಆಯವ್ಯಯದ ಸಕಾಲಿಕ ಹಾಗೂ ತ್ವರಿತ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮಾನವ ಅಭಿವೃದ್ಧಿ ಮತ್ತು ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿ, ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

     

  • 10:43 AM

    ಅಭಿವೃದ್ಧಿ & ಉತ್ತಮ ಭವಿಷ್ಯದ ಭರವಸೆ: ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯ ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ ದೂರದೃಷ್ಟಿಯೊಂದಿಗೆ ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ಆಯವ್ಯಯ ಮಂಡಿಸುತ್ತಿದ್ದೇನೆಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:41 AM

    150 ಕೋಟಿ ರೂ. ಅನುದಾನ: ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ರವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು.

  • 10:41 AM

    ಹೊರ ಜಗತ್ತಿಗೆ ಕನ್ನಡ ಪರಿಚಯಿಸಲು ಕ್ರಮ: ಕರ್ನಾಟಕ ಜಗತ್ತಿನೆಲ್ಲೆಡೆ ಒಂದು ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಕನ್ನಡವನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ.

  • 10:40 AM

    ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ: ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ ‘ಶ್ರೀ ಭುವನೇಶ್ವರಿ ತಾಯಿ’ಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು.

  • 10:40 AM

    ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ: ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಎಂಬ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು.

  • 10:39 AM

    ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ & ಅಕಾಡೆಮಿ: ಕರ್ನಾಟಕದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಅಕಾಡೆಮಿಯನ್ನು ಹಾಗೂ ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣವನ್ನು ಸ್ಥಾಪಿಸಲಾಗಿದೆ.

  • 10:33 AM

    ಮಹಿಳೆಯರಿಗೆ ಕೊಡುಗೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ರಾಮನಗದಲ್ಲಿ ಬೃಹತ್ ರಾಮಮಂದಿರ: ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:31 AM

    100 ಕೋಟಿ ರೂ. ಅನುದಾನ: ಬಳ್ಳಾರಿ ಮೆಗಾ ಡೇರಿಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:30 AM

    ಬೆಂಗಳೂರು ಅಭಿವೃದ್ಧಿಗೆ ಬಂಪರ್: ಸಿಲಿಕಾನ್ ಸಿಟಿ ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೀಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:29 AM

    10 ಸಾವಿರ ಸೈಟ್ ವಿತರಣೆ: ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ. ನೆಲೆ ಹೆಸರಲ್ಲಿ 10 ಸಾವಿರ ಸೈಟ್ ವಿತರಿಸುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

  • 10:28 AM

    ಉಚಿತ ಬಸ್ ಪಾಸ್: ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಘೋಷಿಸಿದ ಸಿಎಂ ಬೊಮ್ಮಾಯಿ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಹೇಳಿದ್ದಾರೆ.

  • 10:26 AM

    ಬಜೆಟ್‍ನಲ್ಲಿ ರೈತರಿಗೆ ಬಂಪರ್ ಗಿಫ್ಟ್: ಕರ್ನಾಟಕ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಶೂನ್ಯ ಬಡ್ಡಿದರಲ್ಲಿ ರೈತರಿಗೆ 5 ಲಕ್ಷ ರೂ. ಸಾಲವನ್ನು ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

  • 10:21 AM

    ಬಜೆಟ್ ಮಂಡನೆ ಆರಂಭಿಸಿದ ಸಿಎಂ ಬೊಮ್ಮಾಯಿಯವರು ಆರಂಭದಲ್ಲಿ ವಿಪಕ್ಷಗಳಿಗೆ ಟಾಂಗ್ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಇಷ್ಟು ದಿನ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನರೇ ಅವರ ಮೇಲೆ ಹೂ ಇಟ್ಟಿದ್ದಾರೆಂದು ಎಂದು ಗುಡುಗಿದ್ದಾರೆ.

Trending News