ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮೈಸೂರು, ಚಾಮರಾಜನಗರ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ನಾಳೆ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ನಂತರ ಚಿನ್ನೇನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಾಜೇಂದ್ರ ಮನೆಗೆ ಭೇಟಿ ನೀಡಿ, ರೈತನ ಮನೆಯಲ್ಲೇ ಮುಷ್ಠಿ ಅಕ್ಕಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್ಗೆ ಆಗಮಿಸಿ, ಅಲ್ಲಿಂದ ಕಾಪ್ಟರ್ ಮೂಲಕ ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 12.10ಕ್ಕೆ ಶ್ರೀರಂಗಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ಸಾವಯವ ಕೃಷಿಕರ ರೈತಗಳ ಒಕ್ಕೂಟ ಮತ್ತು ಕೀರೆಮಡಿ ಮಹಿಳಾ ಕೂಟದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಷಾ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ನಗರದ ಹೊರವಲಯದ ಶ್ರೀನಿವಾಸಪುರ ಗೇಟಿನಲ್ಲಿರುವ ಶಶಿಕಿರಣ ಕನ್'ವೆನ್ಷನ್ ಹಾಲ್'ನಲ್ಲಿ ನಡೆಯುವ ಮಂಡ್ಯ, ಮೈಸೂರು, ಮೈಸೂರು ಗ್ರಾಮಾಂತರ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಶಕ್ತಿಕೇಂದ್ರದ ಪ್ರಮುಖ ಸಭೆಯಲ್ಲಿ ಭಾಗಿಯಾಗಿ, ಅಲ್ಲಿಂದ ಚನ್ನಪಟ್ಟಣದ ಬೊಂಬೆಗಳ ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಮೈಸೂರಿಗೆ ತೆರಳಿ ಸಂಜೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಯೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.