ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ

ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತವೆಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು ಅಂತಾ ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Dec 6, 2022, 04:50 PM IST
  • ಮುಂಬೈ ನಾರ್ತ್‌ ಸೆಂಟ್ರಲ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್‍ರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್
  • ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ
  • ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರರಿಗೆ ಕಾಂಗ್ರೆಸ್ ಅವಮಾನಿಸಿದ್ದನ್ನು ಜನರು ಮರೆತಿಲ್ಲ
ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಸೋಲಿಸಿದ್ದ ಕಾಂಗ್ರೆಸ್ ಇದೀಗ ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರ ಹೆಸರನ್ನೇ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ್ದು, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಘೋಷಿಸಿಕೊಂಡಿದ್ದು, ತುರ್ತುಪರಿಸ್ಥಿತಿ ಹೇರಿ ಸಂವಿಧಾನ ಆಶಯಕ್ಕೆ ಕೊಳ್ಳಿ ಇಟ್ಟಿದ್ದು ಇದೆಲ್ಲಾ ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಇತಿಹಾಸ’ ಅಂತಾ ಬಿಜೆಪಿ ಟೀಕಿಸಿದೆ.

‘ಮುಂಬಯಿ ನಾರ್ತ್‌ ಸೆಂಟ್ರಲ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕುತಂತ್ರದಿಂದ ಸೋಲಿಸಿದ್ದು ಇದೇ ಕಾಂಗ್ರೆಸ್. ಆದರೆ ಈಗ ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದೇ‌ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. "ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ" ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತವೆಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು’ ಅಂತಾ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: “ಶೀಘ್ರವೇ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿ”: ಸಚಿವ ಸೋಮಣ್ಣ ಖಡಕ್ ಸೂಚನೆ

‘ನೆಹರೂ ಸಮಾಧಿಗೆ 52 ಎಕರೆಗೂ ಹೆಚ್ಚು ಜಾಗ ಕೊಟ್ಟ ಕಾಂಗ್ರೆಸ್‌ಗೆ ಡಾ.ಅಂಬೇಡ್ಕರ್ ಶವಸಂಸ್ಕಾರಕ್ಕೂ 6 ಅಡಿ ಜಾಗವನ್ನು ದೆಹಲಿಯಲ್ಲಿ ಬೇಕಂತಲೇ ಕೊಡಲಿಲ್ಲ. ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರರಿಗೆ ಕಾಂಗ್ರೆಸ್ ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲೂ ಬಿಡದೆ ಅವಮಾನಿಸಿದ್ದನ್ನು ಜನ ಮರೆತಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿತ್ತು, ಆದರೆ ಅದಾಗಲೇ ನೆಹರೂ, ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು! ಇಂತಹ ಸಮಯದಲ್ಲೂ ಸಂವಿಧಾನ ಕೊಟ್ಟವರ ನೆನಪೂ ಆಗದ ಕಾಂಗ್ರೆಸ್‌ಗೆ ಈಗ ಅಂಬೇಡ್ಕರ್ ಜಪ ಕೇವಲ ಆಷಾಡಭೂತಿತನ ಅಷ್ಟೇ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಅಂಬೇಡ್ಕರ್ ಕರ್ನಾಟಕದಲ್ಲಿ ಭೇಟಿ ನೀಡಿದ 10 ಪ್ರಮುಖ ಸ್ಥಳಗಳ ಅಭಿವೃದ್ಧಿಗೆ 70 ವರ್ಷಗಳಲ್ಲಿ ಕಾಂಗ್ರೆಸ್ ಮುಂದಾಗಲಿಲ್ಲ, ಬಿಜೆಪಿ ಬರಬೇಕಾಯಿತು‌. ಅತೀಹೆಚ್ಚು ದಲಿತರ ಗೆಲ್ಲಿಸಿ ಕೇಂದ್ರ ಸಂಪುಟದಲ್ಲಿರಿಸಿದ್ದು ಬಿಜೆಪಿ. 70 ವರ್ಷ ದಲಿತರ ಮೀಸಲು ಹೆಚ್ಚಳ ಮಾಡಲಿಲ್ಲ, ಬಿಜೆಪಿಯೇ ಬಂದು ಮೀಸಲು ಕೊಡಬೇಕಾಯ್ತು. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ರ ವಿಧಿ ತೆಗೆಯಬೇಕೆಂದು ಅಂಬೇಡ್ಕರ್ ಅಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಅವರ ಆಶಯವನ್ನು ಗೌರವಿಸದೇ ಆರ್ಟಿಕಲ್ 370ರ ವಿಧಿಯನ್ನು 70 ವರ್ಷ ಮುಂದುವರಿಸಿದರು. ಬಾಬಾ ಸಾಹೇಬರ ಆ ಆಶಯವನ್ನು ನನಸು ಮಾಡಿದ್ದು ಮೋದಿ ಸರ್ಕಾರ’ವೆಂದು ಬಿಜೆಪಿ ಹೇಳಿದೆ.

‘ಪ್ರಧಾನಿ ಮೋದಿ‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರಿಗೆ ಸಂಬಂಧಿಸಿದ, ಪ್ರಮುಖ 5 ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಅಭಿವೃದ್ಧಿ ಮಾಡಿದೆ. ಅರ್ಥಪೂರ್ಣವಾದ ಸಂವಿಧಾನ ದಿನಾಚರಣೆ ಜಾರಿಗೆ ತಂದಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Resort politics: ‘ಆಪರೇಶನ್ ಕಮಲ’ದ ಮಾದರಿಯಲ್ಲೇ ‘ಆಪರೇಶನ್ ಗ್ರಾಮ ಪಂಚಾಯಿತಿ’..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News