ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಚಿವರಿಂದ ತರಾಟೆ; ದಲೆದಂಡದ ಎಚ್ಚರಿಕೆ!

ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾದಗಿರಿ, ಕೊಪ್ಪಳ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಿಗದಿತ ಗುರಿ ತಲುಪದಿರುವುದಕ್ಕೆ ಡಿಎಚ್‌ಒಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

Written by - Sowmyashree Marnad | Edited by - Puttaraj K Alur | Last Updated : Apr 26, 2022, 08:26 PM IST
  • ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ಫೇಲ್ ಅದ ಯಾದಗಿರಿ, ಕೊಪ್ಪಳ, ವಿಜಯಪುರ, ಕಲಬುರಗಿ
  • ನಿಗದಿತ ಗುರಿ ತಲುಪದಿರುವುದಕ್ಕೆ ಡಿಎಚ್‌ಒಗಳನ್ನು ತರಾಟೆಗೆ ತೆಗೆದುಕೊಂಡ ಡಾ.ಕೆ.ಸುಧಾಕರ್
  • ಶೇ.50ರಷ್ಟು ಸಿಸೇರಿಯನ್ ಹೆರಿಗೆ ಮೀರಬಾರದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ
ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಚಿವರಿಂದ ತರಾಟೆ; ದಲೆದಂಡದ ಎಚ್ಚರಿಕೆ! title=
ಆರೋಗ್ಯಾಧಿಕಾರಿಗಳಿಗೆ ಸಚಿವ ಕೆ.ಸುಧಾಕರ್ ಖಡ್ ಎಚ್ಚರಿಕೆ

ಬೆಂಗಳೂರು: ಸರ್ಕಾರದ ಆರೋಗ್ಯ ಸೇವೆ ಯೋಜನೆಗಳು, ಕಾರ್ಯಕ್ರಮಗಳಲ್ಲಿ ಗುರಿ ತಲುಪದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ (ಡಿಎಚ್‌ಒ) ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾದಗಿರಿ, ಕೊಪ್ಪಳ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಿಗದಿತ ಗುರಿ ತಲುಪದಿರುವುದಕ್ಕೆ ಡಿಎಚ್‌ಒಗಳನ್ನು ತರಾಟೆಗೆ ತೆಗೆದುಕೊಂಡರು. ಏನಾದರೂ ಸಮಸ್ಯೆಗಳು ಇದ್ದಲ್ಲಿ ಹೇಳಿ ಬಗೆಹರಿಸೋಣ? ಆದರೆ, ಎಲ್ಲಾ ಸೌಲಭ್ಯ ಕೊಟ್ಟ ಮೇಲೂ ಗುರಿ ತಲುಪದಿದ್ದರೆ ಸಹಿಸಲು ಆಗುವುದಿಲ್ಲ. ಜೂನ್‌ 30ರೊಳಗೆ ಕನಿಷ್ಟ ಶೇ.80ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳು ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಬೇಕು. ನಿಮ್ಮ ಹಂತದಲ್ಲಿ ಇದು ಸಾಧ್ಯ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಸುವ ಪದ್ಧತಿ ಜಾರಿಗೂ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಮಾಸ್ಕ್ ನಿಯಮ ಪಾಲಿಸದಿದ್ರೆ ಮುಂದಿನ ಹಂತ ದಂಡ ಪ್ರಯೋಗ: ಬಿಬಿಎಂಪಿ

ವರ್ಗಾವಣೆಗೆ ಕಡಿವಾಣ

ಈ  ವರ್ಷ ಮಾರ್ಗಸೂಚಿ ಅನ್ವಯ ಮಾತ್ರ ವರ್ಗಾವಣೆಗಳನ್ನು ಮಾಡಲಾಗುವುದು. ಹಿಂದೆ ನಡೆಯುತ್ತಿದ್ದಂತೆ ಬೇಕಾಬಿಟ್ಟಿ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಒಟ್ಟಾರೆ ವರ್ಗಾವಣೆ ಪ್ರಮಾಣ ಶೇ.15ರಷ್ಟು ಮೀರದಂತೆ ಎಚ್ಚರ ವಹಿಸಲಾಗುವುದು. ಕೆಲವರು ಬೆಂಗಳೂರು ನಗರ ಬಿಟ್ಟು ಹೋಗುತ್ತಿಲ್ಲ. 10 ವರ್ಷ ಒಂದೇ ಸ್ಥಳದಲ್ಲಿ ಯಾರಾದರೂ ಇದ್ದರೆ ಅಂತಹ ಹುದ್ದೆಗಳನ್ನು ಖಾಲಿ ಎಂದು ಬೇರೆ ನೇಮಕ ಮಾಡಲಾಗುವುದು. ಜೊತೆಗೆ ನಗರದೊಳಗೆ  ಪರಸ್ಪರ ವರ್ಗಾವಣೆ ಕೋರುವ ಪ್ರಕರಣಗಳನ್ನೂ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶೇ.50ರಷ್ಟು ಸಿಸೇರಿಯನ್ ಹೆರಿಗೆ ಮೀರಬಾರದು

ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿಸುವ ಸಂಖ್ಯೆ ಹೆಚ್ಚುತ್ತಿದೆ.  ಕೆಲ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.50ನ್ನು ಮೀರಿದೆ. ಅಗತ್ಯವಿಲ್ಲದಿದ್ದರೂ ಸಿಸೇರಿಯನ್‌ ಮಾಡುತ್ತಿರುವ ಬಗ್ಗೆ ದೂರುಗಳು ಸರ್ವೇ ಸಾಮಾನ್ಯ ಆಗಿದೆ. ಇಂತಹ ಹಣಬಾಕ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಟ್ಟು ನಿಯಮ ಉಲ್ಲಂಘಿಸಿದವರ ಆಸ್ಪತ್ರೆಗಳಿಗೆ ಬೀಗ ಜಡಿಯಬೇಕು. ಈ ಬಗ್ಗೆ ನಿಯಮಿತವಾಗಿ ವರದಿ ನೀಡುವ ಪರಿಪಾಠ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: PSI Recruitment Scam: ಆರೋಪಿ ದಿವ್ಯಾ ಹಾಗರಗಿ ಜೊತೆ ಡಿಕೆಶಿ ಫೋಟೋ ವೈರಲ್

ರಾಜ್ಯಾದ್ಯಂತ ಡಯಾಲಿಸಿಸ್‌ ವಿಷಯದಲ್ಲಿ ದೂರುಗಳು ಬಾರದಂತೆ ಡಿಎಚ್‌ಒಗಳು ಕಾರ್ಯ ನಿರ್ವಹಿಸಬೇಕು. ಒತ್ತಡ ಆಧರಿಸಿ ಫಲಾನುಭವಿಗಳಿಗೆ ವೇಳಾಪಟ್ಟಿ ನಿಗದಿಗೊಳಿಸಬೇಕು. 167 ಕೇಂದ್ರಗಳಲ್ಲಿ 633 ಡಯಾಲಿಸಿಸ್‌ ಯಂತ್ರಗಳು ಕೆಲಸ ಮಾಡುತ್ತಿವೆ. ಒಟ್ಟು 4184 ಫಲಾನುಭವಿಗಳಿದ್ದಾರೆ. ಒತ್ತಡ ಹೆಚ್ಚು ಇರುವ ಕಡೆ ಮತ್ತಷ್ಟು ಯಂತ್ರಗಳನ್ನು ಆದ್ಯತೆ ಮೇರೆಗೆ ಅಳವಡಿಸಬೇಕು ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News