“ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿಕೆಶಿ ಹೆಸರು ಬಳಸದೇ ಒಂದಾದರೂ ಕಾರ್ಯಕ್ರಮವನ್ನು ಮಾಡಲಿ”

  ದಿನ ಬೆಳಗಾದರೆ ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಬಳಸದೇ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.

Written by - Zee Kannada News Desk | Last Updated : Nov 16, 2022, 04:36 PM IST
  • ಈ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮಕ್ಕಾಗಿ ಪ್ರಪಂಚದಾದ್ಯಂತ ಇವರು ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ.
  • ಭೂ ಬ್ಯಾಂಕ್ ಮೂಲಕ 1.5 ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.
  • ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ, ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು.
“ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿಕೆಶಿ ಹೆಸರು ಬಳಸದೇ ಒಂದಾದರೂ ಕಾರ್ಯಕ್ರಮವನ್ನು ಮಾಡಲಿ” title=
screengrab

ಬೆಂಗಳೂರು:  ದಿನ ಬೆಳಗಾದರೆ ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಬಳಸದೇ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಅವರು ಕೆಪಿಸಿಸಿ ಸಂವಹನ ವಿಭಾಗ ಉಪಾಧ್ಯಕ್ಷರಾದ ರಮೇಶ್ ಬಾಬು ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಎಂ.ಲಕ್ಷ್ಮಣ್:

ಕರ್ನಾಟಕ ರಾಜ್ಯ ಸರ್ಕಾರ ವಾರದ ಹಿಂದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದು 7 ಲಕ್ಷ ಉದ್ಯೋಗ ಸೃಷ್ಟಿ ಎಂದು ಹೇಳಿದ್ದಾರೆ. ಮುರುಗೇಶ್ ನಿರಾಣಿ ಅವರು 2010 ಹಾಗೂ 2012ರಲ್ಲೂ ಕೈಗಾರಿಕಾ ಸಚಿವರಾಗಿದ್ದರು. ಆಗಲೂ ಇದೇ ರೀತಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದರು. 2010ರಲ್ಲಿ 3 ಲಕ್ಷ ಕೋಟಿ ಹೂಡಿಕೆ ಎಂದು ಘೋಷಣೆ ಮಾಡಿದ್ದರು. ಇಲ್ಲಿವರೆಗೂ ಅದರಲ್ಲಿ ಜಾರಿ ಆಗಿದ್ದು ಶೇ.14ರಷ್ಟು ಮಾತ್ರ. 3 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದರು ಆದರೆ ಇಲ್ಲಿಯವರೆಗೂ ಸಿಕ್ಕಿರುವ ಕೆಲಸ 4 ಸಾವಿರ ಮಾತ್ರ. ಇನ್ನು 2012ರಲ್ಲಿ ಘೋಷಣೆ ಆಗಿದ್ದು 6.77 ಲಕ್ಷ ಕೋಟಿ, ಹೂಡಿಕೆ ಆಗಿದ್ದು ಶೇ.8ರಷ್ಟು ಅಂದರೆ 54 ಸಾವಿರ ಕೋಟಿ. ಅಂದು 4.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದರು. ಆದರೆ ಸಿಕ್ಕಿದ ಉದ್ಯೋಗ ಕೇವಲ 3500 ಮಾತ್ರ.

ಈಗ 2022ರಲ್ಲಿ ಘೋಷಣೆ ಆಗಿರುವುದು 9.89 ಲಕ್ಷ ಕೋಟಿ ಅದರಲ್ಲಿ ಮಾಡಿಕೊಂಡಿರುವ ಒಪ್ಪಂದ 2.83 ಲಕ್ಷ ಕೋಟಿ ಎಂದು ಹೇಳುತ್ತಿದ್ದು, 7 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಇದೆಲ್ಲವೂ ರಾಜಕೀಯ ಗಿಮಿಕ್ ಆಗಿದೆ.

ಈ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮಕ್ಕಾಗಿ ಪ್ರಪಂಚದಾದ್ಯಂತ ಇವರು ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ. ಭೂ ಬ್ಯಾಂಕ್ ಮೂಲಕ 1.5 ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ, ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು. ದೇವನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆಯನ್ನು ರೈತರಿಂದ ಕಸಿದು ರಿಯಲ್ ಎಸ್ಟೇಟ್ ನವರಿಗೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಬಿಸಿನೆಸ್: ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಪ್ರಶ್ನಿಸಿದ ಬಿಜೆಪಿ

ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ಈ ಕಾರ್ಯಕ್ರಮದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಆ ಸಮಿತಿಯಲ್ಲಿ ಅವರು ಇದ್ದು, ಕಾರ್ಯಕ್ರಮದ ಆಯೋಜನೆಯಲ್ಲೂ ಅವರ ಪಾತ್ರವಿತ್ತು. ಸಚಿವರ ಪುತ್ರ ಎನ್ನುವುದು ಹೊರತಾಗಿ ಉಳಿದ ಯಾವುದೇ ಅರ್ಹತೆ ಅವರಿಗೆ ಇಲ್ಲವಾಗಿದೆ. ಅವರನ್ನು ಯಾಕೆ ಇದರಲ್ಲಿ ಭಾಗವಹಿಸಲು ಅವಕಾಸ ನೀಡಿ ಅವರ ಮೂಲಕ ಯಾರಿಗೆ ಎಷ್ಟು ಎಕರೆ ಜಮೀನು ಕೊಡಿಸಿದ್ದೀರಿ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಅತಿಥಿಗಳ ವಾಸ್ತವ್ಯಕ್ಕೆ ಸ್ಟಾರ್ ಹೋಟೇಲ್ ಗಳಿಗಾಗಿ 85 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಮೊನ್ನೆ ಪ್ರಧಾನಿ ಅವರು 4 ಗಂಟೆ ಆಗಮಿಸಿದ್ದಕ್ಕೆ ಜಾಹೀರಾತು ಹೊರತುಪಡಿಸಿ 48 ಕೋಟಿ ಖರ್ಚು ಮಾಡಲಾಗಿದೆ. ಇದು ಜನಸಾಮಾನ್ಯರ ಹಣವಾಗಿದೆ. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಸರ್ಕಾರ.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 144ಪೊಲೀಸ್ ಠಾಣೆಗಳಿವೆ. 44 ಟ್ರಾಫಿಕ್ ಪೊಲೀಸ್ ಠಾಣೆಗಳಿವೆ. ಒಟ್ಟು 188 ಠಾಣೆಗಳಿವೆ. ಇವುಗಳಿಂದ ಭ್ರಷ್ಟಾಚಾರದ ಮೂಲಕ ಬರುತ್ತಿರುವ ಆದಾಯ ವಾರ್ಷಿಕವಾಗಿ 250 ಕೋಟಿ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಗೆ 1.50 ಕೋಟಿ. ಉಪ್ಪಾರಪೇಟೆ ಠಾಣೆಯಲ್ಲಿ 1.25 ಕೋಟಿ, ಬಸವೇಶ್ವರ ನಗರ 1 ಕೋಟಿ. ಕೇವಲ ವರ್ಗಾವಣೆ ಧಂದೆಯಲ್ಲಿ 188 ಪೊಲೀಸ್ ಠಾಣೆಗಳ ಮೂಲಕ 250 ಕೋಟಿ ವಸೂಲಿ ಮಾಡಲಾಗಿದೆ. ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಹಸ್ಯವಾಗಿ ನೀಡಿರುವ ಮಾಹಿತಿ. ಈ ವಿಚಾರ ತನಿಖೆ ಮೂಲಕ ಬಹಿರಂಗವಾಗಬೇಕು.

ಪೊಲೀಸ್ ಠಾಣೆಗಳಿಂದ ಪ್ರತಿನಿತ್ಯ ಆಗುತ್ತಿರುವ ವಸೂಲಿ 5 ಕೋಟಿ. ತಿಂಗಳಿಗೆ 150 ಕೋಟಿ ವಸೂಲಿ ಆಗುತ್ತಿದೆ. ಕಳೆದ ಮೂರುವರೆ ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ನಂತರ ಸುಮಾರು 1 ಲಕ್ಷ ಕೋಟಿ ವಸೂಲಿ ಮಾಡಲಾಗಿದೆ. ಇದು ಹಾಲಿ 6 ಸಚಿವರು ಇಬ್ಬರು ಆಪ್ತರ ಬಳಿ ಈ ಹಣವಿದೆ. ಈ ವಿಚಾರವಾಗಿ ಹಾಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇಡಿ ಅಥವಾ ಸಿಬಿಐ ಮೂಲಕ ತನಿಖೆ ಆದರೆ 8 ಜನರ ಹೆಸರನ್ನು ನಾವು ನೀಡುತ್ತೇವೆ ಎಂದು ಸವಾಲು ಹಾಕುತ್ತೇವೆ.

ಇಡಿ ಅವರು ಸಣ್ಣ ಪುಟ್ಟ ಪ್ರಕರಣ ಇಟ್ಟುಕೊಂಡು ಅವರು ಸಾಯುವ ವರೆಗೂ ಬಿಡುವುದಿಲ್ಲ. ನೀವು ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಿ. ಬೊಮ್ಮಾಯಿ ಅವರೇ ನೀವು ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ. ನಿಮ್ಮ ಸುತ್ತಮುತ್ತಲಿನವರೇ ಈ 1 ಲಕ್ಷ ಕೋಟಿ ಒಡೆಯರು.

ಇದನ್ನೂ ಓದಿ: ನವೆಂಬರ್‌ 19 ಹಾಗೂ 20 ರಂದು ಬೆಂಗಳೂರಿನಲ್ಲಿ ಡಾಗ್‌ ಷೋ- ಮುಧೋಳ ಶ್ವಾನವೂ ಭಾಗಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರ ಕಿ.ಮೀ ರಸ್ತೆಗಳಿದ್ದು, 32 ಸಾವಿರ ರಸ್ತೆಗುಂಡಿಗಳಿವೆ ಎಂದು ಸರ್ಕಾರ ಹೈಕೋರ್ಟ್ ಗೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ 10 ಸಾವಿರ ರಸ್ತೆಗುಂಡಿ ಮುಚ್ಚಲಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಖರ್ಚಾಗಿರುವ ಹಣ 790 ಕೋಟಿ. ಇನ್ನು ಉಳಿದ 22 ಸಾವಿರ ಕೋಟಿ ರಸ್ತೆಗುಂಡಿ ಮುಚ್ಚಲು 1500 ಕೋಟಿ ಬೇಕಾಗುತ್ತದೆ. ಒಟ್ಟಾರೆ 2200 ಕೋಟಿ ಯನ್ನು ರಸ್ತೆ ಗುಂಡಿ ಮುಚ್ಚಲು ಬೇಕಾಗಿದೆ.

ಕೇಂದ್ರದ ಇಂಡಿಯನ್ ರೋಡ್ ಕಾಂಗ್ರೆಸ್ ಸಂಸ್ಥೆ ಪ್ರಕಾರ 1 ಕಿ.ಮೀ ರಸ್ತೆಯ ಡಾಂಬರೀಕರಣಕ್ಕೆ 1.5 ಕೋಟಿ ವೆಚ್ಚ ಬೀಳುತ್ತದೆ. ಇವರು 1 ಕಿ.ಮೀ ರಸ್ತೆಯ ರಸ್ತೆಗುಂಡಿ ಮುಚ್ಚಲು 2.25 ಕೋಟಿ ವೆಚ್ಚ ಮಾಡಿದ್ದಾರೆ. ಈ ಸರ್ಕಾರದಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ.

ಬೊಮ್ಮಾಯಿ ಅವರೇ ನೀವು ಸಂಕಲ್ಪ ಯಾತ್ರೆ ಮಾಡಲು ಹೊರಟಿದ್ದೀರಿ. ನಿಮ್ಮ ಸಂಕಲ್ಪ ಯಾತ್ರೆಯಲ್ಲಿ 3 ಗಂಟೆ ಭಾ,ಣದಲ್ಲಿ ಎರಡೂವರೆ ಗಂಟೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಬೈಯ್ಯಲು ಮೀಸಲಿಡುತ್ತೀರಿ. ಈಗ ನೀವು ಇದಕ್ಕೆ ಉತ್ತರ ನೀಡಬೇಕು.

ಮೈಸೂರಿನಲ್ಲಿ ಕಿಡಿ ಹೊತ್ತಿಸಲು ಪ್ರತಾಪ್ ಸಿಂಹ ಎಂಬ ಸಂಸದರಾಗಿದ್ದಾರೆ. ಈ ಹಿಂದಿನ ಸರ್ಕಾರಗಳು ಮೈಸೂರು ಸಿಟಿಯನ್ನು ಪಾರಂಪರಿಕ ನಗರಿ ಎಂದು ಪರಿಗಣಿಸಬೇಕು ಎಂದು ಆರ್ಕಿಯಾಲಜಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿತ್ತು. ಈ ಪರ್ಸ್ತಾವನೆಯಲ್ಲಿ 350 ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಿದ್ದು, ಇದರಲ್ಲಿ ಅರಮನೆ ಸೇರಿದಂತೆ 180 ಕಟ್ಟಡಗಳು ಸರ್ಕಾರಿ ಕಟ್ಟಡಗಳಾಗಿವೆ.

ಇಡೀ ಪ್ರಪಂಚದಲ್ಲಿ 8 ಬಗೆಯ ಆರ್ಕಿಟೆಕ್ಚರ್ ಗಳನ್ನು ಬಳಸಲಾಗುತ್ತಿದೆ. ಮೈಸೂರು ಅರಮನೆಯ ಮೇಲ್ಬಾಗದ ಗೋಪುರವನ್ನು ಮೋಘಲರ ಆರ್ಕಿಟೆಕ್ಚರ್ ಎಂದು ಕರೆಯುತ್ತೇವೆ. ಬ್ರಿಟನ್ ಸೇರಿದಂತೆ ಪ್ರಪಂಚದಾದ್ಯಂತ ಈ ವಿನ್ಯಾಸ ಬಳಸಲಾಗಿದೆ. ಮೈಸೂರು ಅರಮನೆ ವಿನ್ಯಾಸ ಆಧಆರದ ಮೇಲೆ ಅಲ್ಲಿನ ಪಾಲಿಕೆ, ಶಾಸಕರು ಸೇರಿ ಅರಮನೆಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ  ನಿರ್ಮಾಣ ಮಾಡಬೇಕಾದರೂ ಅದು ಅರಮನೆಯ ಪಾರಂಪರಿಕ ವಿನ್ಯಾಸವನ್ನೇ ಹೊಂದಿರ ಬೇಕು ಎಂದು ತೀರ್ಮಾನಿಸಲಾಗಿದೆ. ಇದು ಮೈಸೂರು ಪಾಲಿಕೆಯ ಬೈಲಾದಲ್ಲೂ ಇದೆ. ಒಂದು ಶೌಚಾಲಯ ಕಟ್ಟಿದರೂ ಅದರ ವಿನ್ಯಾಸ ಈ ರೀತಿ ಇರಬೇಕು ಎಂದು ಕಾನೂನು ಇದೆ.

ಈ ಭಾಗದ ಮೂವರು ಶಾಸಕರ ಪೈಕಿ ಬಿಜೆಪಿ ಶಾಸಕ ರಾಮದಾಸ್ ಅವರು 18 ಬಸ್ ಶೆಲ್ಟರ್ ಗಳನ್ನು ತಮ್ಮ ಅನುದಾನದಲ್ಲಿ ಹಣ ನೀಡಿದ್ದು, 12 ಬಸ್ ಶೆಲ್ಟರ್ ನಿರ್ಮಾಣವಾಗಿವೆ. ಇವುಗಳ ಡೂಮ್ ಸ್ಟಕ್ಚರ್ ಏನು ಎಂದು ಅರ್ಥ ಮಾಡಿಕೊಳ್ಲುವ ಯೋಗ್ಯತೆ ಇಲ್ಲದ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ತಂದು ಪಾಲಿಕೆ ಹಾಗೂ ರಾಜ್ಯ ರಸ್ತೆ ಸಂಸ್ಥೆಗೆ ಪತ್ರ ಬರೆದು ಅದರಲ್ಲಿ ಇದು ಧರ್ಮವನ್ನು ಬಿಂಬಿಸುವ ವಿನ್ಯಾಸವಾಗಿದೆ. ಹೀಗಾಗಿ ಇದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿ ಕೈಯಲ್ಲಿ ಸಂಸದರು ಪತ್ರ ಬರೆಸುತ್ತಾರೆ.

ಇದಕ್ಕೆ ರಾಮದಾಸ್ ಅವರು ಸ್ಪಷ್ಟೀಕರಣ ನೀಡಿದ್ದು, ಇದು ಯಾವುದೇ ಧರ್ಮದ ಪ್ರತೀಕವಾಗಿಲ್ಲ. ಇದಕ್ಕೂ ಮಸೀದಿಗೆ ಸಂಬಂಧವಿಲ್ಲ ಹಾಗಾಗಿ ಇದನ್ನು ಒಡೆಯುವ ಪ್ರಶ್ನೆಯೇ ಇಲ್ಲ. ಪ್ರತಾಪ್ ಸಿಂಹ ಅವರು ರಾಜಕೀಯ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪ್ರತಾಪ್ ಸಿಂಹ ಕಳೆದ ಎಂಟು ವರ್ಷಗಳಿಂದ ಕೊಡಗನ್ನು ಸಂಪೂರ್ಣವಾಗಿ 25 ವರ್ಷ ಹಿಂದಕ್ಕೆ ತೆಗೆದುಕೊಂಡಿದ್ದು, ಮೈಸೂರನ್ನು ಸುಮಾರು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉಳಿದಿರುವ ಎರಡು ವರ್ಷಗಳಲ್ಲಿ ಇನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇವರ ಯೋಗ್ಯತೆಗೆ ಕೇಂದ್ರದಿಂದ ನಯಾ ಪೈಸೆ ತರಲಿಲ್ಲ. ಆದರೆ ರಾಜ್ಯದಲ್ಲಿ ಕಿಡಿ ಹೊತ್ತಿಸಲು ನಾಲ್ಕೈದು ಜನರಿದ್ದು ಇವರು ಮೊದಲ ಎರಡು ಸ್ಥಾನಗಳಲ್ಲಿ ಬರುತ್ತಾರೆ. ಪ್ರಪ್ಲಾದ್ ಜೋಷಿ, ಸಿ.ಟಿ ರವಿ, ರವಿ ಕುಮಾರ್ ಇವರೆಲ್ಲರೂ ಸುಳ್ಲು ಹೇಳುವುದರಲ್ಲೇ ಪಿಹೆಚ್ಡಿ ಮಾಡಿಕೊಂಡಿದ್ದರೆ.

ಪ್ರತಾಪ್ ಸಿಂಹ ಅವರು ಸತ್ಯಹರಿಶ್ಚಂದ್ರರ ಕುಟುಂಬಕ್ಕೆ ಸೇರಿದ್ದರೆ ನಾನು ಮೈಸೂರು ಡಿಸಿಗೆ ನೀಡಿರುವ ದೂರಿನಲ್ಲಿ ಸಂಸದರ ನಿಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದೇನೆ. ಇವರು ದಕ್ಷಿಣ ಕನ್ನಡದ ಕಿಕ್ಕಂಜೆ ಊರಿನಲ್ಲಿ ಡಾ.ಮುರಳಿಕೃಷ್ಣ ಎಂಬ ಇವರ ಸ್ನೇಹಿತರ ಆಸ್ಪತ್ರೆ ಇದೆ. ಅದಕ್ಕೆ ಇವರು 18 ಲಕ್ಷ ರೂಪಾಯಿಯ ಆಂಬುಲೆನ್ಸ್ ಅನ್ನು ದೇಣಿಗೆ ನೀಡುತ್ತಾರೆ. ಮುರಳಿಕೃಷ್ಣ ಅವರ ಮತ್ತೊಂದು ಕ್ಲೀನಿಕ್ ಹೊಯ್ಸಳ ಕ್ಲೀನಿಕ್ ಗೆ ನಿರ್ದೇಶಕರನ್ನಾಗಿ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ: ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್

ಸಂಸದರ ನಿಧಿಯಿಂದ ಬೇರೆ ಜಿಲ್ಲೆ ಕ್ಷೇತ್ರಗಳಿಗೇ ದೇಣಿಗೆ ರೂಪದಲ್ಲಿ ನೀಡಲು ಅವಕಾಶವಿದೆ. ಆದರೆ ಅದಕ್ಕೆ ಒಂದು ಷರತ್ತು ಇದ್ದು, ನೀವು ಯಾವುದೇ ಟ್ರಸ್ಟ್, ಸೊಸೈಟಿ ಅಥವಾ ಸಹಕಾರಿ ಸೊಸೈಟಿ ಆಗಿರಬಾರದು. ಆದರೆ ಪ್ರತಾಪ್ ಸಿಂಹ ಅವರು ನೀಡಿರುವ ಹಣ ವೆಂಕಟಕೃಷ್ಣ ಯೂರತ್ರೇಯ ಮೆಮೋರಿಯಲ್ ಟ್ರಸ್ಟ್ ಗೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇನ್ನು ಮೈಸೂರಿನಲ್ಲಿ ಒಂದು ಟ್ರಸ್ಟ್ ಗೆ ಹಣ ನೀಡಿದ್ದು, ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ಗೆ ನೀಡಿದ್ದಾರೆ. ಈ ಟ್ರಸ್ಟ್ ನ ವಿಳಾಸ ಹುಡುಕಿಕೊಂಡು ಹೋದಾಗ ಸರಸ್ವತಿಪುರಂ ನ ವಿಶ್ವಮಾನವ ರಸ್ತೆ 12ನೇ ನಂಬರ್ ಜಾಗದಲ್ಲಿ ಈ ಟ್ರಸ್ಟ್ ನ ಕಚೇರಿ ಬದಲು ಮೆಕ್ ಡೊನಾಲ್ಡ್ ಹೊಟೇಲ್ ಇದೆ. ಇದಕ್ಕೆ ಪ್ರತಾಪ್ ಸಿಂಹ ಅವರು ಉತ್ತರಿಸಬೇಕು. ಇದುವರೆಗೂ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿ, ಎರಡು ಪತ್ರಿಕಾಗೋಷ್ಠಿ ಮಾಡಿದ್ದರೂ ಅವರು ಉತ್ತರ ನೀಡಿಲ್ಲ.

ಇಂತಹ ವ್ಯಕ್ತಿ ಬೆಂಗಳೂರು ಮೈಸೂರು ರಸ್ತೆಯನ್ನು ತನ್ನ ಮನೆ ಆಸ್ತಿಯಿಂದ ಮಾಡುತ್ತಿರುವಂತೆ ಮಂಡ್ಯ, ಮದ್ದೂರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಿದ್ದಾರೆ. ಈ ರೀತಿ ಮಾಡಿ ಗುತ್ತಿಗೆದಾರರಿಂದ 3 ಕೋಟಿಯಷ್ಟು ಲಂಚ ಪಡೆದಿದ್ದಾರೆ ಎಂದು ಮಂಡ್ಯದ ಜನ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಿದ್ದಾರೆ. ಇಂತಹ ವ್ಯಕ್ತಿ ಚುನಾವಣೆ ಸಮಯದಲ್ಲಿ ಕಿಡಿ ಹಚ್ಚಲು ಈ ರೀತಿ ಗೊಂದಲ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರ ಈ ಸುಳ್ಳು ಹೇಳಿಕೆಗಳನ್ನು ನಂಬಬಾರದು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಅವರು ತಾವು ಇಂತಹ ಭರವಸೆ ನೀಡಿದ್ದು, ಅದರಲ್ಲಿ ಎಷ್ಟು ಭರವಸೆ ಈಡೇರಿಸಿದ್ದೇವೆ, ಇಂತಹ ಯೋಜನೆ ಮಾಡಿದ್ದೇವೆ ಎಂದು ತಮ್ಮ ಕೆಲಸದ ಪಟ್ಟಿ ನೀಡಿ ಮತ ಕೇಳಲಿ. ಅದನ್ನು ಬಿಟ್ಟು ದಿನಬೆಳಗಾದರೆ ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಬಳಸದೇ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮಾಡಲಿ.

ಶ್ರೀರಾಮುಲು ಅವರು ಅಂದರಗಾನಿ ಎಂದು ವೀರಾವೇಷದಲ್ಲಿ ಮಾತನಾಡುವುದರ ಹೊರತಾಗಿ ಬೇರೇನು ಮಾಡಿಲ್ಲ. ಆ ಪದದ ಅರ್ಥ ಹುಡುಕುತ್ತಿದ್ದು ಈವರೆಗೂ ಸಿಕ್ಕಿಲ್ಲ. ಅವರು ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಅನ್ಯಾಯಾ ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರು ಯಾವ ಕ್ಷಏತ್ರದವರು ಅವರು ಏನು ಅನ್ಯಾಯಾ ಮಾಡಿದ್ದಾರೆ ಎಂದು ಅರಿಯುತ್ತಿಲ್ಲ. ಶ್ರೀರಾಮುಲು ಅವರೇ ನೀವು ಮುಂದಿನ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಸೋಲುವುದು ನಿಶ್ಚಿತ. ನಿಮ್ಮನ್ನು ಸೋಲಿಸಲು ಎಲ್ಲ ವ್ಯವಸ್ಥೆಯನ್ನು ಜನ ಮಾಡಿಕೊಂಡಿದ್ದಾರೆ.

ರಾಮದಾಸ್ ಹಾಗೂ ಪ್ರತಾಪ್ ಸಿಂಹ ಅವರ ನಡುವಣ ತಿಕ್ಕಾಟ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಒಳಗೆ ಅವರು ಬಟ್ಟೆ ಹರಿದುಕೊಂಡು ಹೊಡೆದಾಡಿ ಹೊರಗಡೆ ಏನೂ ಆಗಿಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅನ್ನು ದೊಡ್ಡ ಮಟ್ಟಕ್ಕೆ ಹೋಗಲಿದ್ದು. ಜನಗಳು ಇದನ್ನು ಮನರಂಜನೆಯಾಗಿ ನೋಡಲಿ ಎಂದು ಮನವಿ ಮಾಡುತ್ತೇನೆ.

ರಮೇಶ್ ಬಾಬು:

ಕಳೆದ ಒಂದು ವಾರದಿಂದ ಕಲ್ಬರ್ಗಿಯ ಚಿತ್ತಾಪುರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ನಾಪತ್ತೆಯಾಗಿದ್ದಾರೆ ಎಂಬ ಷಡ್ಯಂತ್ರ ಮಾಡಿದ್ದಾರೆ. ಈಗ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಗಿದೆ. ಅಲ್ಲಿ ಪೋಸ್ಟರ್ ಅಂಟಿಸಿದವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದು, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದವರ ವಿರುದ್ಧ ಯಾವುದೇ ಕ್ರಮಮ ಜರುಗಿಸಿರಲಿಲ್ಲ.

ಅವರಂತೆ ಜನ ಪೋಸ್ಟರ್ ಅಂಟಿಸಲು ಆರಂಭಿಸಿದರೆ ಮೊದಲ ಪೋಸ್ಟರ್ ಬೀಳುವುದು ಶಿಗ್ಗಾಂವ್ ನಲ್ಲಿ. ಮುಖ್ಯಮಂತ್ರಿಗಳು ಎಷ್ಟು ದಿನ ಶಿಗ್ಗಾಂವ್ ಗೆ ಹೋಗಿ ಕೆಲಸ ಮಾಡಿದ್ದಾರೆ ಎಂದು ಹೇಳಬೇಕಾಗುತ್ತದೆ. ನಾವು ಅವರಂತೆ ಕಾಣೆಯಾಗಿದ್ದಾರೆ ಎಂಬ ಅಭಿಯಾನ ಮಾಡುವುದಿಲ್ಲ. ಬಿಜೆಪಿ ಶಾಸಕರು, ಸಚಿವರ ಪಟ್ಟಿ ಇದ್ದರೂ ನಮಗೆ ಅದರ ಅಗತ್ಯವಿಲ್ಲ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪಿಎಸ್ಐ ಹಗರಣದಲ್ಲಿ ಗೃಹ ಸಚಿವರು ಹಾಗೂ ಸಂಸದರು ಪ್ರಮುಖ ಆರೋಪಿ ಮನೆಗೆ ಹೋಗಿ ಅತಿಥ್ಯ ಸ್ವೀಕರಿಸಿದ್ದರು. ಈ ವಿಚಾರವನ್ನು ಬಹಿರಂಗ ಮಾಡಿದ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಗೃಹಸಚಿವರು ಸೇರಿದಂತೆ ಹಲವು ನಾಯಕರು ಸಂಚು ರೂಪಿಸಿದ್ದಾರೆ. ಈ ಸಂಚಿನ ತನಿಖೆ ಆಗಬೇಕು. ಈ ವಿಚಾರವಾಗಿ ನಾನು ಕರ್ನಾಟಕ ಪೊಲೀಸ್ ಇಲಾಖೆ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೇನೆ. ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲದ ಕಾರಣ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದೇವೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಕಲಬುರ್ಗಿಯಲ್ಲಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಅವರ ಮೇಲೆ ಹಲ್ಲೆ ಮಾಡುತ್ತೇವೆ ಎಂಬ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಕಾರ್ಯಕ್ರಮ ಕಲಬುರ್ಗಿಯಲ್ಲಿ ಇದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕ್ ಖರ್ಗೆ ಅವರ ಪರವಾಗಿ ಪ್ರತಿಭಟನೆಗೆ ಮುಂದಾದಾಗ ಅಲ್ಲಿ ಸ್ಥಳೀಯ ಕಾರ್ಯಕರ್ತನ ಬಂಧನ ಮಾಡಿದ್ದಾರೆ. ಇದೆಲ್ಲವೂ ವ್ಯವಸ್ಥಿತವಾಗಿ ನಡೆದಿರುವ ಸಂಚಾಗಿದ್ದು, ಇದರಲ್ಲಿ ರವಿಕುಮಾರ್, ಗೃಹ ಸಚಿವರು ಸೇರಿದ್ದಾರೆ. ಪೊಲೀಸರು ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ಆಗಬೇಕು.

ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡಿದ್ದು, ಇವರ ವಿರುದ್ಧ ಷಡ್ಯಂತ್ರ ರೂಪಿಸಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರದ ವೈಫಲ್ಯ ಬಯಲಿಗೆಳೆಯುವವರ ವಿರುದ್ಧದ ಸಂಚಿನ ವಿರುದ್ಧ ತನಿಖೆ ನಡೆಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News