ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ : ಎಂ.ಬಿ ಪಾಟೀಲ ಆಕ್ರೋಶ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ.  18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ ಎಂದು ಸಚಿವ ಎಂ.ಬಿ. ಪಾಟೀಲ್‌ ಕಿಡಿಕಾರಿದರು.

Written by - Krishna N K | Last Updated : Aug 29, 2024, 04:47 PM IST
    • ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ.
    • ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ.
    • ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ.
ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ : ಎಂ.ಬಿ ಪಾಟೀಲ ಆಕ್ರೋಶ title=

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, `ರಾಹುಲ್ ಖರ್ಗೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ; ಎಂಜಿನಿಯರಿಂಗ್ ಪದವೀಧರರು. ಡಿಆರ್ ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೆ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರಕಾರದ ವಶಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಕೇಂದ್ರ ವಖ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಖ್ಫ್ ಬೋರ್ಡ್ ವಿರೋಧ : ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ನಿರ್ಣಯ

ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇಕಡ 5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ವಿವರಿಸಿದರು.

ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣರು. ಅವರು ರೈಲ್ವೆ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ ಕುಟುಕಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ : ಸಿಎಂ

ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ‌ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ತಿರುಗೇಟು‌ ನೀಡಿದರು.

ಆರೆಸ್ಸೆಸ್ ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆವ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಎನ್ನುವುದನ್ನು ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅವರು ಅಂಕಿಅಂಶಗಳ ಸಹಿತ ವಿವರಿಸಿದರು.

ಇದನ್ನೂ ಓದಿ:ನಟ ದರ್ಶನ್‌ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ...! ನಟೋರಿಯಸ್ ಕಳ್ಳ ಶಿಗ್ಲಿ ಬಸ್ಯಾ

ಚಾಣಕ್ಯ ವಿ.ವಿ.ಯದೂ ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಚಾಣಕ್ಯ ವಿವಿ ಗೂ ಕೇವಲ 50 ಕೋಟಿಗೆ ಈ ಜಮೀನು ನೀಡಿದ್ದು, ಇದರಿಂದ ಕೆಐಎಡಿಬಿಗೆ 137 ಕೋಟಿ ರೂಪಾಯಿ ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು‌ ನೀಡಿಲ್ಲ ಎಂದು ಸಚಿವರು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News