ರೈತರು, ಕಾರ್ಮಿಕರಿಗೆ ನೆರವಾಗುವಂತೆ ಒತ್ತಾಯಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರ

ನಮ್ಮ ಆರ್ಥಿಕತೆಯನ್ನು ಉತ್ಪಾದನ ಸಮಯ ಮತ್ತು ವೆಚ್ಚ ಮಾಡುವ ಸಮಯ ಎಂದು ಗುರುತಿಸಬಹುದು. ಡಿಸೆಂಬರ್ ನಂತರದ ಅವಧಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಉತ್ಪಾದನೆ ಮತ್ತು ವೆಚ್ಚ ಮಾಡುವ ಚಟುವಟಿಕೆಗಳು ತೀವ್ರಗೊಳ್ಳುತ್ತವೆ.   

Last Updated : May 5, 2020, 06:51 AM IST
ರೈತರು, ಕಾರ್ಮಿಕರಿಗೆ ನೆರವಾಗುವಂತೆ ಒತ್ತಾಯಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರ title=
File Image

ಬೆಂಗಳೂರು: ಲಾಕ್‍ಡೌನ್ ಹೇರಿಕೆಯಾಗಿ ಒಂದೂವರೆ ತಿಂಗಳಾಗುತ್ತಿದೆ. ರಾಜ್ಯದ ರೈತರು (Farmers), ಕಾರ್ಮಿಕರ ಬದುಕು, ವೈದ್ಯಕೀಯ ಸಮಸ್ಯೆಗಳ ಕುರಿತು ಏಪ್ರಿಲ್ 19ರಂದು ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒತ್ತಾಯಗಳುಳ್ಳ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆ ಎರಡು ವಾರಗಳಿಂದ ಪರಿಸ್ಥಿತಿ ಸುಧಾರಿಸಿಲ್ಲದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಏಪ್ರಿಲ್ 28ರಂದು ರಾಜ್ಯದ ಕುಶಲಕರ್ಮಿ ಸಮುದಾಯಗಳಾದ ಸವಿತಾ/ ಹಡಪದ, ಮಡಿವಾಳ/ದೋಬಿ, ನೇಕಾರ/ಕುರುಹಿನ ಶೆಟ್ಟಿ, ಅಕ್ಕಸಾಲಿಗ, ಕುಂಬಾರ, ಚಮ್ಮಾರ, ವಿಶ್ವಕರ್ಮ, ಮೇದಾರ, ಮೀನುಗಾರ ಮುಂತಾದ ಸಮುದಾಯ ಮತ್ತು ಅಲೆಮಾರಿ ಸಮುದಾಯದ ಮುಖಂಡರುಗಳು ಹಾಗೂ ಆಟೋ ರಿಕ್ಷಾ, ಕ್ಯಾಬ್, ಟ್ರಕ್, ಲಾರಿ, ವಾಣಿಜ್ಯ ಬಳಕೆಯ ವಾಹನಗಳು, ಛಾಯಾಚಿತ್ರಗಾರರು, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಸ್ಥರ ಸಂಘಟನೆಗಳ ಮುಖಂಡರ ಸಭೆ ನಡೆಸಿರುತ್ತೇನೆ. ಸಭೆಯಲ್ಲಿ ಆ ಸಮುದಾಯಗಳು ಎದುರಿಸುತ್ತಿರುವ ಸಂಕಷ್ಟಗಳ ಭೀಕರತೆಯನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಪ್ರಕಾರ ದುಡಿಯುವ ಸಮುದಾಯಗಳ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ದುಸ್ಥಿತಿ ಬಂದಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ನಮ್ಮ ಆರ್ಥಿಕತೆಯನ್ನು ಉತ್ಪಾದನ ಸಮಯ ಮತ್ತು ವೆಚ್ಚ ಮಾಡುವ ಸಮಯ ಎಂದು ಗುರುತಿಸಬಹುದು. ಡಿಸೆಂಬರ್ ನಂತರದ ಅವಧಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಉತ್ಪಾದನೆ ಮತ್ತು ವೆಚ್ಚ ಮಾಡುವ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ನೋಟ್‍ಬ್ಯಾನ್ ಮತ್ತು ಜಿ.ಎಸ್.ಟಿ.ಯ ಅತಾರ್ಕಿಕ, ಅವಾಸ್ತವಿಕ ಕ್ರಮಗಳಿಂದಾಗಿ ಎಲ್ಲಾ ಉತ್ಪಾದಕ ಮತ್ತು ಕುಶಲಕರ್ಮಿ ಸಮುದಾಯಗಳ ಆರ್ಥಿಕತೆ ದಯನೀಯ ಸ್ಥಿತಿಗೆ ಬಂದು ತಲುಪಿತ್ತು. ಇದರ ನಡುವೆ ಕೊರೋನಾ ಸೋಂಕು ಆವರಿಸಿಕೊಂಡು ಇದ್ದಬದ್ದ ಆರ್ಥಿಕ ಚೈತನ್ಯವನ್ನೆಲ್ಲಾ ನಾಶಮಾಡಿದೆ. ಬೇಸಿಗೆಯ ಈ ಅವಧಿಯಲ್ಲಿ ಮದುವೆ, ಮುಂಜಿ, ಜಾತ್ರೆ, ಹಬ್ಬ, ಪ್ರವಾಸ ಮುಂತಾದ ಚಟುವಟಿಕೆಗಳು ಗರಿಗೆದರುತ್ತವೆ. ಆರ್ಥಿಕ ಚಟುವಟಿಕೆಗಳಿಗೆ ಇನ್ನಿಲ್ಲದ ಜೀವಂತಿಕೆ ಬರುತ್ತದೆ. ಈ ಅವಧಿಯಲ್ಲಿ ನೇಕಾರರು, ಕುಂಬಾರರು, ಚಮ್ಮಾರರು, ಅಲೆಮಾರಿಗಳು, ವಿಶ್ವಕರ್ಮ ಸಮುದಾಯದವರು, ಬಡಗಿಗಳು ಮುಂತಾದವರುಗಳ ತಯಾರಿಸಿದ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಯಾಗಿ ಇಡೀ ವರ್ಷದ ಜೀವನಕ್ಕೆ ಅಗತ್ಯವಾದುದೆಲ್ಲವನ್ನು ಗಳಿಸಿಕೊಂಡು ಜೀವನ ಸುಗುಮವಾಗಿ ನಡೆಯುವಂತೆ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದರು ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

 30 ವರ್ಷಗಳಿಂದ ಈಚೆಗೆ ನಗರೀಕರಣ ತೀವ್ರಗೊಂಡ ಪರಿಣಾಮ ವಾಣಿಜ್ಯ ಮತ್ತು ಪ್ರವಾಸೋದ್ಯಮದ ಚಟುವಟಿಕೆಗಳಿಗೆ ಉತ್ತಮ ರೀತಿಯ ಬೇಡಿಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆಟೋ, ಕ್ಯಾಬ್, ಪ್ರವಾಸಿ ಟ್ಯಾಕ್ಸಿಗಳು, ವಾಣಿಜ್ಯ ಸಂಬಂಧಿ ವಾಹನಗಳು, ಬಸ್ಸುಗಳು ಮುಂತಾದ ಲಕ್ಷಾಂತರ ವಾಹನಗಳು ರಸ್ತೆಗೆ ಇಳಿದಿವೆ. ಒಂದು ಅಂದಾಜಿನ ಪ್ರಕಾರ ಈ ವೃತ್ತಿಯನ್ನು ಆಧರಿಸಿ ಸುಮಾರು 20-25 ಲಕ್ಷ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಲಾಕ್‍ಡೌನ್‍ನಿಂದಾಗಿ ದುಡಿಮೆಗೆ ಪೂರಕವಾಗಿದ್ದ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಈ ಕಾಲದಲ್ಲಿ ಯಾವುದೇ ರೀತಿಯ ದುಡಿಮೆಯಿಲ್ಲದೆ ಚಾಲಕರು ಮತ್ತು ಮಾಲೀಕರು ನಿಷ್ಕ್ರಿಯರಾಗಿ ಮನೆಗಳಲ್ಲಿ ಉಳಿದುಕೊಳ್ಳುವಂತಾಗಿದೆ. 

ಕಾರ್ಪೋರೇಟ್ ಕಂಪೆನಿಗಳು ತಮ್ಮ ನೌಕರರುಗಳಿಗೆ ಮನೆಗಳಿಂದಲೆ ಕೆಲಸ ಮಾಡುವಂತೆ ಸೂಚಿಸುತ್ತಿರುವುದರಿಂದ ಯಾವುದೇ ವಾಹನ ಓಡಾಟಕ್ಕೆ ಅನುಮತಿಯಿಲ್ಲದ ಕಾರಣಕ್ಕೆ ಈ ಕಂಪನಿಗಳನ್ನು ಅವಲಂಬಿಸಿದ್ದ ವಾಹನಗಳ ಮಾಲೀಕರು ಮತ್ತು ಚಾಲಕರುಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.  ಜನರ ಬದುಕಿಗೆ ಸುಗ್ಗಿಯಾಗಿ ಪರಿಣಮಿಸುತ್ತಿದ್ದ ಬೇಸಿಗೆ ಅವಧಿಯ ದುಡಿಮೆಯು ಮಕ್ಕಳ ಶಾಲಾ ಕಾಲೇಜುಗಳ ಪ್ರವೇಶಕ್ಕೆ, ಹಳ್ಳಿಗಾಡಿನ ಕೃಷಿ ಚಟುವಟಿಕೆಗಳಿಗೆ, ಮನೆ ನಿರ್ಮಾಣದ ಚಟುವಟಿಕೆಗಳಿಗೆ ಪೂರಕವಾಗಿ ಇರುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯು ಸಂಘಟಿತ/ಅಸಂಘಟಿತ ವಲಯಗಳ ಸುಮಾರು 1 ಕೋಟಿ 60 ಲಕ್ಷ ಕಾರ್ಮಿಕರು ಮತ್ತು ವೃತ್ತಿ ಆಧಾರಿತ ಜಾತಿಗಳಿಗೆ ಸಂಬಂಧಿಸಿದವರನ್ನು ಸೇರಿಸಿದರೆ ದುಡಿಯುವ ವರ್ಗದ ಪ್ರಮಾಣ ಸುಮಾರು 2 ಕೋಟಿಗಳನ್ನೂ ಮೀರುತ್ತದೆ. ಇಷ್ಟು ದೊಡ್ಡ ದುಡಿಯುವ/ಉತ್ಪಾದಕ ಸಮುದಾಯಗಳು ನಿಷ್ರ್ಕಿಯವಾದರೆ ಸಮಾಜದ ಎಲ್ಲಾ ಚಟುವಟಿಕೆಗಳು ಸ್ತಬ್ದಗೊಳ್ಳುತ್ತವೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. 

ಈಗ ಸಮಸ್ಯೆ ಇರುವುದು ಬರಿ 2 ತಿಂಗಳಿನದಲ್ಲ. ಈ ಸಮಸ್ಯೆ ಕೆಲ ವರ್ಷಗಳವರೆಗೆ ಮುಂದುವರೆಯಬಹುದು. ಈ ಎಲ್ಲಾ ಸಮುದಾಯಗಳು ದಿನನಿತ್ಯದ ದುಡಿಮೆಯನ್ನು ಆಧರಿಸಿ ಜೀವನ ನಡೆಸುತ್ತಿದ್ದವರು. ಆಹಾರ, ವಸತಿ, ಬಟ್ಟೆ, ಔಷಧ, ಮಕ್ಕಳ ಶಿಕ್ಷಣ, ಪಡೆದ ಸಾಲಕ್ಕೆ ಬಡ್ಡಿ, ಪ್ರತಿ ತಿಂಗಳು ಕಟ್ಟಬೇಕಾದ ಇ.ಎಂ.ಐ. ಮುಂತಾದವುಗಳಿಗೆ ಈಗ ಸಮಸ್ಯೆ ಬಂದೊದಗಿದೆ. ಈ ಸಮುದಾಯಗಳು ನಿರಂತರವಾಗಿ ದುಡಿಯುತ್ತಿದ್ದ ಕಾರಣದಿಂದಾಗಿಯೇ ಆರ್ಥಿಕತೆಯಲ್ಲಿ ನಿರಂತರ ಪ್ರಗತಿ ಕಾಣಲು ಸಾಧ್ಯವಾಗಿತ್ತು. ಆದುದರಿಂದ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ಜಾತಿ, ವರ್ಗ ಮತ್ತು ಸಮುದಾಯಗಳ ಕಷ್ಟಗಳಿಗೆ ತೀವ್ರವಾಗಿ ಸ್ಪಂದಿಸಿ ಅವರ ದಿನನಿತ್ಯದ ಬದುಕು ಸುಗಮವಾಗಿ ನಡೆಯಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. 

ಈ ಸಮುದಾಯ, ವೃತಿಗಳವರಿಗೆ ನೆರವು ಕಲ್ಪಿಸುವ ಸಲುವಾಗಿ ಸರ್ಕಾರಗಳು ತೆಗೆದುಕೊಳ್ಳುವ ಯಾವುದೇ ಒಳ್ಳೆಯ ಕ್ರಮಗಳಿಗೆ ನಮ್ಮ ಬೆಂಬಲವಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೇ ಸಮರೋಪಾದಿಯಲ್ಲಿ ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಈ ಕೆಳಗಿನ ಕೆಲ ಒತ್ತಾಯಗಳನ್ನು ಮಾಡಿದ್ದಾರೆ.

1)    ಲಾಕ್‍ಡೌನ್ (Lockdown) ಅವಧಿಯಲ್ಲಿ ಕುಶಲಕರ್ಮಿ ಸಮುದಾಯಗಳಾದ ಸವಿತಾ/ಹಡಪದ ಸಮಾಜದವರು, ಮಡಿವಾಳರು/ದೋಬಿ, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಗಾಣಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಫೋಟೋಗ್ರಾಫರ್‍ಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು  ಮುಂತಾದ ಎಲ್ಲಾ ರೀತಿಯ ಕಾರ್ಮಿಕರುಗಳಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ನೀಡುತ್ತಿರುವಂತೆ ತಲಾ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳು ಸೇರಿ ಅತ್ಯಂತ ಅಗತ್ಯವಾದ 16 ಜೀವನಾವಶ್ಯಕ ವಸ್ತುಗಳನ್ನೊಳಗೊಂಡ ಕಿಟ್‍ಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಕ್ರಮ ಕೈಗೊಳ್ಳುವುದು. ಇದನ್ನು ಬಿ.ಪಿ.ಎಲ್ ಕಾರ್ಡ್ ಇಲ್ಲದ ಕುಟುಂಬಗಳಿಗೂ ಸಹ ವಿಸ್ತರಿಸಬೇಕು.
2)    ಲಾಕ್‍ಡೌನ್ ಅವಧಿ ಇರುವವರೆಗೆ ಆಹಾರವಿಲ್ಲದೇ ಪ್ರತಿನಿತ್ಯವೂ ಹಸಿವಿನಿಂದ ನರಳುತ್ತಿರುವ ಎಲ್ಲಾ ವರ್ಗದ ಜನರಿಗೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‍ (Indira Canteen)ಗಳನ್ನು ಸಮರ್ಥವಾಗಿ ಬಳಸಿಕೊಂಡು  ಅಗತ್ಯವಿರುವ ಕಡೆ ಮೊಬೈಲ್ ಕ್ಯಾಂಟೀನ್‍ಗಳ ವ್ಯವಸ್ಥೆ ಮಾಡಿ ಉಚಿತವಾಗಿ ಪ್ರತಿನಿತ್ಯ 3 ಹೊತ್ತೂ ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸುವುದು. ಈ ಮೂಲಕ ಯಾರೊಬ್ಬರು ಹಸಿವಿನಿಂದ ನರಳದಂತೆ ನೋಡಿಕೊಳ್ಳುವುದು.
3)    ಕುಶಲಕರ್ಮಿ ಸಮುದಾಯಗಳಾದ ಸವಿತಾ/ಹಡಪದ ಸಮಾಜದವರು, ಮಡಿವಾಳರು/ದೋಬಿ, ಬಡಗಿಗಳು, ಕುಂಬಾರರು, ನೇಕಾರರು, ಗಾಣಿಗರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಪೋಟೋಗ್ರಾಫರ್‍ಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲಾ ರೀತಿಯ ಕಾರ್ಮಿಕರುಗಳು ಯಾವುದೇ ರೀತಿಯ ದುಡಿಮೆಯಿಲ್ಲದೇ ಅತ್ಯಂತ ನಷ್ಟಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರುಗಳಿಗೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಲಾಕ್ಡೌನ್ ವೇಳೆ ಪ್ರತಿ ತಿಂಗಳು ಕನಿಷ್ಠ 10 ಸಾವಿರ ರೂ. ನೀಡತಕ್ಕದ್ದು.
4)    ದುಡಿಮೆಯನ್ನು ನಂಬಿಕೊಂಡು ಬದುಕುವ ಈ ಸಮುದಾಯಗಳು ನಿರಂತರವಾಗಿ ಜನರ ಜೊತೆ ಸಂಪರ್ಕದಲ್ಲಿದ್ದು ದುಡಿಮೆ ಮಾಡುವುದರಿಂದ ಇವರ ಆರೋಗ್ಯದ ರಕ್ಷಣೆಗಾಗಿ ಸಾಕಷ್ಟು ಸಂಖ್ಯೆಯ ಮಾಸ್ಕ್, ಸ್ಯಾನಿಟೈಸರ್ ಮತ್ತು ಇತರೆ ಅಗತ್ಯ ವೈದ್ಯಕೀಯ ಸಲಕರಣೆಗಳು/ಸವಲತ್ತುಗಳು ಉಚಿತವಾಗಿ ನೀಡುವುದು.
5)    ಲಾಕ್‍ಡೌನ್ ಅವಧಿಯಿಂದಾಗಿ ಆಟೋ, ಟ್ಯಾಕ್ಸಿ, ಕ್ಯಾಬ್, ಮಿನಿ ಬಸ್‍ಗಳು, ವಾಣಿಜ್ಯ ಸಂಬಂಧಿ ವಾಹನಗಳು ಹಾಗೂ ಇನ್ನಿತರೆ ಸಾಗಣೆ ವಾಹನಗಳು ರಸ್ತೆಗೆ ಇಳಿಯದೇ ಇದ್ದ ಕಾರಣಕ್ಕೆ ಇವರುಗಳ ಸಂಪೂರ್ಣ ದುಡಿಮೆ ಸ್ಥಗಿತಗೊಂಡಿದೆ. ಆದುದರಿಂದ, ಈ ವಾಹನಗಳ ಚಾಲಕರುಗಳು ಮನೆ ಬಾಡಿಗೆ ಕಟ್ಟಲಾಗದೆ, ಸಾಲದ ಕಂತುಗಳನ್ನು ತೀರಿಸಲಾಗದೇ, ಮಾಡಿಕೊಂಡ ಸಾಲದ ಬಡ್ಡಿ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದುದರಿಂದ, ಲಾಕ್‍ಡೌನ್  ಮುಗಿಯುವವರೆಗೆ ಯಾರೂ ಸಹ ಮನೆ ಬಾಡಿಗೆಗೆ ಒತ್ತಾಯಿಸದಂತೆ ಹಾಗೂ ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಕನಿಷ್ಟ ಒಂದು ವರ್ಷ ಕಾಲ ಬಡ್ಡಿ, ಇ.ಎಂ.ಐ. ಕಟ್ಟುವಂತೆ ಒತ್ತಾಯಿಸಬಾರದೆಂದು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಈ ಎಲ್ಲಾ ವಾಹನಗಳ ಮಾಲೀಕರುಗಳಿಂದ ರಸ್ತೆ ತೆರಿಗೆ, ವಾಹನ ವಿಮೆ ಕಟ್ಟಿಸಿಕೊಳ್ಳಬಾರದು ಮತ್ತು ವಾಹನ ಸ್ಥಗಿತಗೊಂಡ ಈ ಅವಧಿಗೆ ಕಟ್ಟಿರುವ ವಿಮೆಯ ಹಣವನ್ನು ಸದರಿ ವಾಹನಗಳ ಮಾಲೀಕರಿಗೆ ಹಿಂದಿರುಗಿಸಬೇಕು. ಕಷ್ಟದಲ್ಲಿರುವ ಚಾಲಕರು ಮತ್ತು ಮಾಲೀಕರಿಗೆ ಅಗತ್ಯ ಸಾಲ ನೀಡಬೇಕು. 
6) ಕನಿಷ್ಠ 6 ತಿಂಗಳು ರಸ್ತೆ ತೆರಿಗೆ ಮನ್ನಾ ಮಾಡಬೇಕು, ಏರ್‍ಪೋರ್ಟ್ ಮತ್ತಿತರ ಕಡೆ ಟ್ಯಾಕ್ಸಿ/ಕ್ಯಾಬ್‍ಗಳಿಂದ  ಲಾಕ್‍ಡೌನ್ ಮುಗಿಯುವವರೆಗೆ ಪಾರ್ಕಿಂಗ್ ಶುಲ್ಕ ವಸೂಲು ಮಾಡಬಾರದು.
7)    ಲಾಕ್‍ಡೌನ್ ಅವಧಿಯಲ್ಲಿ ವಿನಾಕಾರಣ ವಶಪಡಿಸಿಕೊಂಡಿರುವ ಎಲ್ಲಾ ರೀತಿಯ ವಾಹನಗಳನ್ನು ಷರತ್ತುಗಳನ್ನು ವಿಧಿಸದಂತೆ ಬಿಡುಗಡೆ ಮಾಡಬೇಕು
8)    ಮೇಲಿನ ಎಲ್ಲಾ ವರ್ಗಗಳ ಕಾರ್ಮಿಕರು (Workers), ಚಾಲಕರು, ವೃತ್ತಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕವನ್ನು ಮುಂದಿನ ಒಂದು ವರ್ಷ ಕಡಿತಗೊಳಿಸಿ ಉಚಿತವಾಗಿ ಶಿಕ್ಷಣ ನೀಡುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಇದನ್ನು ವಿಶೇಷ ಸಂದರ್ಭವೆಂದು ಭಾವಿಸಿ ಕಡ್ಡಾಯ ಶಿಕ್ಷಣ ಕಾಯಿದೆ ಅನ್ವಯ ಶಿಕ್ಷಣ ನೀಡಲು ಕ್ರಮಕೈಗೊಳ್ಳಬೇಕು.
9) ಮಡಿವಾಳ/ದೋಬಿ ಸಮುದಾಯದವರು ಈಗಾಗಲೇ ಆಸ್ಪತ್ರೆಗಳು ನೀಡುವ ಬಟ್ಟೆಗಳನ್ನು ತೊಳೆಯುತ್ತಿದ್ದಾರೆ. ಹಾಗಾಗಿ ಸದರಿ ಸಮುದಾಯದವರಿಗೆ ಮೇಲೆ ನಮೂದಿಸಿದ ಎಲ್ಲಾ ಸವಲತ್ತುಗಳನ್ನು ನೀಡುವ ಜೊತೆಗೆ ಮುಂದೆ ಸುರಕ್ಷಿತವಾಗಿ ವೃತ್ತಿಗಳನ್ನು ನಡೆಸಲು ಅನುವು ಮಾಡಿಕೊಡಬೇಕು. ಇಸ್ತ್ರಿ ಅಂಗಡಿಗಳಲ್ಲಿ ಜನರ ನೂಕುನುಗ್ಗಲು ಇರುವುದಿಲ್ಲ. ಹಾಗಾಗಿ ಅವುಗಳನ್ನು ತೆರೆಯಲು ಅನುಮತಿ ನೀಡಬೇಕು.
10)    ಸವಿತಾ/ಹಡಪದ ಸಮುದಾಯದವರು ನೇರ ಜನರ ಸಂಪರ್ಕದೊಂದಿಗೆ ಕೆಲಸ ಮಾಡುವವರಾಗಿದ್ದಾರೆ. ಇವರು ಕ್ಷೌರವಲ್ಲದೆ ಮಂಗಳ ವಾದ್ಯ ನುಡಿಸುವ ವೃತ್ತಿಯನ್ನೂ ಮಾಡುತ್ತಾರೆ. ಲಾಕ್‍ಡೌನ್ ಅವಧಿಯಲ್ಲಿ ಮದುವೆ, ಮುಂಜಿಗಳು ನಡೆಯದೆ ದೇವಸ್ಥಾನಗಳು ತೆರೆಯದೆ ಇರುವುದರಿಂದ ಇವರೂ ಸಹ ಬೀದಿಗೆ ಬೀಳುವಂತಾಗಿದೆ. ಈ ಸಮುದಾಯದವರಿಗೆ ಮೇಲೆ ತಿಳಿಸಿದ ಸವಲತ್ತುಗಳನ್ನು ನೀಡುವುದು.
11)    ಕೇಂದ್ರ ಸರ್ಕಾರ ಘೋಷಿಸಿರುವ ವಿಮಾ ರಕ್ಷಣೆಯನ್ನು ವೈದ್ಯಕೀಯ ಸಂಸ್ಥೆಗಳು/ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಟೆಂಡರ್‍ಗಳು, ಕಸ ಗುಡಿಸುವವರು, ಭದ್ರತಾ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್ಸ್, ಆಂಬ್ಯೂಲೆನ್ಸ್‍ಗಳ ಚಾಲಕರು, ಸಹಾಯಕರು, ಪೊಲೀಸ್, ಹೋಂಗಾರ್ಡ್, ಆಶಾ ಕಾರ್ಯಕರ್ತರು, ಅಂಗನವಾಡಿ, ಪೌರ ಕಾರ್ಮಿಕರು, ಕಂದಾಯ ಸಿಬ್ಬಂದಿ, ಎಪಿಎಂಸಿ ಸಿಬ್ಬಂದಿ, ಆಟೋ, ಟ್ಯಾಕ್ಸಿ, ಕ್ಯಾಬ್‍ಗಳ ಚಾಲಕರು, ವಿವಿಧ ವೃತ್ತಿ ಸಮುದಾಯಗಳು ಮತ್ತು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಸವಿತಾ/ಹಡಪದ ಸಮಾಜ, ಮಡಿವಾಳ/ದೋಬಿ ಸಮಾಜ, ಚಮ್ಮಾರ, ಬೀದಿಬದಿ ವ್ಯಾಪಾರಿಗಳಿಗೂ ವಿಸ್ತರಿಸುವುದು.
12)    ಕುಂಬಾರರು, ನೇಕಾರರು, ಅಕ್ಕಸಾಲಿಗರು, ಶಿಲ್ಪಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಛಾಯಾಚಿತ್ರಗಾರರು, ಅಲೆಮಾರಿ ಸಮುದಾಯಗಳವರು ಮುಂತಾದವರುಗಳಿಗೆ ವಿಶೇಷ ಪ್ಯಾಕೇಜ್‍ ರೂಪಿಸಬೇಕು.
13)    ಅಲೆಮಾರಿ ಸಮುದಾಯಗಳು ನಿರಂತರವಾಗಿ ಊರಿಂದ ಊರಿಗೆ ವಲಸೆ ಹೋಗುತ್ತಿರುತ್ತಾರೆ. ಇವರುಗಳ ಬಳಿ ಬಿಪಿಎಲ್ ಪಡಿತರ ಚೀಟಿ ಇರುವುದಿಲ್ಲ. ಈ ಸಮುದಾಯದ ಮುಖಂಡರುಗಳಿಗೆ ಮಾತ್ರ ತಮ್ಮ ಜನ ಎಲ್ಲಿದ್ದಾರೆಂದು ಗೊತ್ತಿರುತ್ತದೆ. ಆದುದರಿಂದ, ಆಹಾರ ಧಾನ್ಯಗಳು ಸೇರಿದಂತೆ ನೀಡುವ ಎಲ್ಲಾ ಸವಲತ್ತುಗಳನ್ನು ಆ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿತರಿಸಲು ಕ್ರಮವಹಿಸುವುದು ಮತ್ತು ಊರಿಂದ ಊರಿಗೆ ಅಲೆದಾಡುತ್ತಿರುವುದರಿಂದ ರಕ್ಷಣೆಗಾಗಿ ವ್ಯವಸ್ಥಿತವಾದ ಟಾರ್ಪಾಲು ನೀಡಲು ಕ್ರಮವಹಿಸುವುದು. 
14)    ನೇಕಾರರು ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆಯಿಲ್ಲದೇ ಕೊಳ್ಳುವವರಿಲ್ಲ ಹಾಗಾಗಿ ಕೆ.ಹೆಚ್.ಡಿ.ಸಿ. ಮುಂತಾದವುಗಳ ಮೂಲಕ ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದು. ಅಲ್ಲಿಯವರೆಗೆ ಆಹಾರ ಧಾನ್ಯ ಮತ್ತು ಪರಿಹಾರವನ್ನು ನೀಡುವುದು.
15)    ನೇಕಾರರು, ಅಲೆಮಾರಿ ಸಮುದಾಯಗಳು, ಬೀದಿಬದಿ ವ್ಯಾಪಾರಿಗಳು, ಕುಂಬಾರರು, ಅಕ್ಕಸಾಲಿಗರು, ಶಿಲ್ಪಿಗಳು, ಸಣ್ಣಪುಟ್ಟ ವ್ಯಾಪಾರಸ್ತರು, ಮೀನುಗಾರರು ಮುಂತಾದವರುಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಜೀವನ ನಿರ್ವಹಣೆಗೆ ಪರಿಹಾರ ನೀಡುವುದರ ಜೊತೆಗೆ ಲಾಕ್‍ಡೌನ್ ಅವಧಿ ಮುಗಿದ ನಂತರ ವ್ಯಾಪಾರ ಕೈಗೊಳ್ಳಲು ಸಾಲ ನೀಡುವುದು.
16)    ಛಾಯಾಚಿತ್ರಗಾರರು ಸಾಲ ಮಾಡಿ ಉಪಕರಣಗಳನ್ನು ಖರೀದಿ ಮಾಡಿರುತ್ತಾರೆ. ಈ ಸೀಸನ್‍ನಲ್ಲಿ ಅವರಿಗೆ ಯಾವುದೇ ರೀತಿಯ ಉದ್ಯೋಗವಿಲ್ಲದೇ ತೀವ್ರ ರೀತಿಯ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರಿಗೂ ಕೂಡಾ ಮನೆ ಬಾಡಿಗೆ, ಸಾಲದ ಮೇಲಿನ ಬಡ್ಡಿ, ಇಎಂಐ ಮುಂತಾದವುಗಳನ್ನು ಕನಿಷ್ಠ 6 ತಿಂಗಳವರೆಗೆ ವಸೂಲು ಮಾಡಬಾರದೆಂದು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು
17)    ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ದುಡಿಯುವ ಸಮುದಾಯಗಳ ಮತ್ತು ವಿವಿಧ ಕಾರ್ಮಿಕ ಮುಖಂಡರ ಸಭೆಯನ್ನು ತುರ್ತಾಗಿ ಕರೆದು ಅವರ ಸಮಸ್ಯೆಗಳನ್ನು ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

Trending News