ಕಲ್ಬುರ್ಗಿ: ಕೊರೋನಾ ಕೋವಿಡ್ -19 (Covid-19) ಮಹಾಮಾರಿಗೆ ದೇಶದಲ್ಲೇ ಮೊದಲ ಬಲಿಯಾಗಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ರಾಜ್ಯ ಪೃವಾಸ ಹಿನ್ನೆಲೆಯ ಐವರು ಮತ್ತು ಆಂಧ್ರಪ್ರದೇಶ ಪ್ರವಾಸ ಹಿನ್ನೆಲೆಯ ಓರ್ವ ವ್ಯಕ್ತಿ ಸೇರಿದಂತೆ ಜಿಲ್ಲೆಯ 6 ಜನ ವಲಸಿಗರಲ್ಲಿ ಭಾನುವಾರ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಯಡ್ರಾಮಿ ತಾಲೂಕಿನ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ (P-1965), ಸುಂಬಡ ಗ್ರಾಮದ 20 ವರ್ಷದ ಯುವಕನಿಗೆ (P-1966), ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದ ಬಳಿಯ ಕುದಮೂಡ್ ತಾಂಡಾದ 48 ವರ್ಷದ ಪುರುಷ(P-1967) ಮತ್ತು ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ 50 ವರ್ಷದ ಮಹಿಳೆಗೂ ಕೊರೋನಾ ಸೋಂಕು ಅಂಟುಕೊಂಡಿದೆ.
ಇದಲ್ಲದೆ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ತಾಜ್ ಸುಲ್ತಾನಪೂರ ರಿಂಗ್ ರಸ್ತೆಯ ನಿಜಾಮಪುರದ ಲಂಗರ್ ಹನುಮಂತ ನಗರದ 45 ವರ್ಷದ ವ್ಯಕ್ತಿ (P-2000) ಮತ್ತು ಆಂಧ್ರ ಪ್ರದೇಶ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಹೊಸ ಘಾಟಗೆ ಲೇಔಟ್ ಪ್ರದೇಶದ 30 ವರ್ಷದ ಯುವಕನಿಗೂ (P-2001) ಮಹಾಮಾರಿ ಸೋಂಕು ತಗುಲಿದೆ.
ಸೋಂಕಿತ ಆರು ಜನರು ಸರ್ಕಾರಿ ಕ್ವಾರಂಟೇನ್ (Quarantine) ಸೆಂಟರ್ನಲ್ಲಿದ್ದವರಾಗಿದ್ದು, ಸೋಂಕು ದೃಢವಾದ ನಂತರ ಅವರೆಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 141ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 62 ಜನ ಗುಣಮುಖರಾಗಿದ್ದಾರೆ. ಉಳಿದಂತೆ 7 ಜನರು ನಿಧನಹೊಂದಿದ್ದು, 72 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.