ರಾಜ್ಯ ಸರ್ಕಾರದ ಪರಿಹಾರ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ -ಸಿದ್ಧರಾಮಯ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂ.1,610 ಕೋಟಿ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದ ಹಾಗೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.ಕೇರಳ ಮಾದರಿಯಲ್ಲಿ ಬೃಹತ್ ಮೊತ್ತದ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Last Updated : May 6, 2020, 11:40 PM IST
ರಾಜ್ಯ ಸರ್ಕಾರದ ಪರಿಹಾರ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ -ಸಿದ್ಧರಾಮಯ್ಯ title=
file photo

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂ.1,610 ಕೋಟಿ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದ ಹಾಗೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.ಕೇರಳ ಮಾದರಿಯಲ್ಲಿ ಬೃಹತ್ ಮೊತ್ತದ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

'ಕೊರೊನಾ ಹಾವಳಿಯಿಂದ‌‌ ನೊಂದವರಿಗೆ ರೂ.50,000 ಕೋಟಿ‌ ಮೊತ್ತದ ಪ್ಯಾಕೇಜ್ ಘೋಷಿಸಲು ಸರಣಿ ಮನವಿಪತ್ರಗಳ ಮೂಲಕ ಒತ್ತಾಯಿಸಿದ್ದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂ.1,610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.‌ ಕೇರಳ ಘೋಷಿರುವುದು ರೂ.20,000 ಕೋಟಿ ಪ್ಯಾಕೇಜ್, ನೆನಪಿರಲಿ' ಎಂದು ತಿಳಿಸಿದ್ದಾರೆ.

'ಅಸಂಘಟಿತ ಕ್ಷೇತ್ರದ ಕ್ಷೌರಿಕ, ದೋಬಿ, ಬಡಗಿ, ಅಕ್ಕಸಾಲಿಗ, ಚಮ್ಮಾರ, ಕಮ್ಮಾರ, ಅರ್ಚಕ, ಶಿಲ್ಪಿ ಹೀಗೆ ವಿವಿಧ ವೃತ್ತಿಯವರಿಗೆ ಲಾಕ್‌ಡೌನ್ ಕಾಲದಲ್ಲಿ ಮಾಸಿಕ ರೂ.10,000 ನೀಡಬೇಕೆಂದು ಒತ್ತಾಯಿಸಿದ್ದೆ. ಮುಖ್ಯಮಂತ್ರಿಗಳು ಕ್ಷೌರಿಕರು/ದೋಬಿಗಳಿಗೆ 1 ತಿಂಗಳಿಗೆ ಮಾತ್ರ ರೂ.5000 ನೀಡಿ ಉಳಿದವರನ್ನು ನಿರ್ಲಕ್ಷಿಸಿದ್ದಾರೆ. ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ (ಪಾಲಿಹೌಸ್ ನಿರ್ಮಾಣ, ಬಿತ್ತನೆ ಬೀಜ, ರಸಗೊಬ್ಬರ - ರಾಸಾಯನಿಕ ಸಿಂಪಡಣೆ, ಯಂತ್ರೋಪಕರಣ ಬಾಡಿಗೆ, ಕೆಲಸಗಾರರ ಕೂಲಿ ಹಾಗೂ ಇನ್ನಿತರ ವೆಚ್ಚಗಳು ಸೇರಿದಂತೆ) ಖರ್ಚು ಮಾಡಿರುತ್ತಾರೆ. ಮುಖ್ಯಮಂತ್ರಿ ಅವರು, ಹೆಕ್ಟೇರ್‌ಗೆ ರೂ.25,000 ಪರಿಹಾರ ಘೋಷಿಸಿರುವುದು ಅನ್ಯಾಯ.ಅವರ ನಷ್ಟದ‌ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನೇಕಾರರಿಗೆ ಲಾಕ್‌ಡೌನ್ ಅವಧಿಯಲ್ಲಿ ತಿಂಗಳಿಗೆ 5000 ರೂಪಾಯಿ ಆರ್ಥಿಕ ನೆರವಿನ ಜೊತೆಗೆ ಹಳೆ ಸಾಲದ EMI ಮನ್ನಾ ಮತ್ತು ಕಡಿಮೆ ಬಡ್ಡಿಯಲ್ಲಿ ಹೊಸ ಸಾಲ ನೀಡಬೇಕೆಂದು ಸಲಹೆ ನೀಡಿದ್ದೆ. ಮುಖ್ಯಮಂತ್ರಿಗಳು ಒಂದು ತಿಂಗಳಿಗೆ 2000 ರೂಪಾಯಿ ನೆರವು ಘೋಷಿಸಿ ಉಳಿದೆಲ್ಲ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ. ರಾಜ್ಯದ ಸುಮಾರು 22 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಲಾಕ್‌ಡೌನ್ ಕಾಲದಲ್ಲಿ ಮಾಸಿಕ ರೂ.10000 ನೆರವಿಗೆ ಒತ್ತಾಯಿಸಿದ್ದೆ. ಅವರದ್ದೇ ಕಲ್ಯಾಣಕ್ಕಾಗಿ ಸಂಗ್ರಹಿಸಲಾದ ರೂ.9,000 ಕೋಟಿ ಮೊತ್ತದ ನಿಧಿ ಇದೆ. ಹೀಗಿದ್ದರೂ ಕೇವಲ 11.8 ಲಕ್ಷ ಕಾರ್ಮಿಕರಿಗೆ 1 ತಿಂಗಳಿಗೆ ರೂ. 2,000 ನೀಡಿರುವುದು ಕಾರ್ಮಿಕ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಣ್ಣ / ಮಧ್ಯಮ ಕೈಗಾರಿಕೆಗಳಿಗೆ ಇಎಂಐ ಮನ್ನಾ, 4% ಬಡ್ಡಿದರದಲ್ಲಿ ಹೊಸಸಾಲ, ಕಡಿಮೆ ಬೆಲೆಗೆ ಕಚ್ಛಾವಸ್ತು ಪೂರೈಕೆ ಸೇರಿದಂತೆ ರೂ.10,000 ದ ಪ್ಯಾಕೇಜ್ ಘೋಷಿಸಲು ಹೇಳಿದ್ದೆ. 2 ತಿಂಗಳ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿಯನ್ನಷ್ಟೇ ಘೋಷಿಸಿರುವ ಮುಖ್ಯಮಂತ್ರಿಗಳು ಉದ್ಯಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ರೈತರ ಬೆಳೆಗೆ ಯೋಗ್ಯ ಬೆಲೆ‌ ನೀಡಲು ರೂ.5000 ಕೋಟಿ ಮೊತ್ತದ ಆವರ್ತನಿಧಿ‌ ಸ್ಥಾಪಿಸಿ, ಬೆಳೆಗಳನ್ನು ಗ್ರಾಮ‌ ಪಂಚಾಯತ್ ಮಟ್ಟದ ಖರೀದಿ ಕೇಂದ್ರದ ಮೂಲಕ‌ ಖರೀದಿಸುವಂತೆ ಸಲಹೆ ನೀಡಿದ್ದೆ. ಇವ್ಯಾವುದನ್ನು ಪರಿಗಣಿಸದೆ ಮುಖ್ಯಮಂತ್ರಿ ಅವರು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ 'ಎಂದು ಸಿದ್ಧರಾಮಯ್ಯ ದೂರಿದ್ದಾರೆ 

Trending News