ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಬಿ.ಸಿ.ನಾಗೇಶ್

ಅಭಿವೃದ್ಧಿ ಪರ, ತಾರತಮ್ಯ ರಹಿತ ಮತ್ತು ಎಲ್ಲರಿಗೂ ಸಮಾನ ಅವಕಾಶ  ನೀಡುವ ಸಮಾಜ ಕಟ್ಟುವ ಸಾಮರ್ಥ್ಯ, ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರವೆಂದು ಬಿ.ಸಿ.ನಾಗೇಶ್ ಹೇಳಿದ್ದಾರೆ.

Written by - Manjunath Hosahalli | Edited by - Puttaraj K Alur | Last Updated : Sep 21, 2022, 05:58 PM IST
  • ದೇಶದ ಪ್ರಗತಿ ಹಾಗೂ ಉನ್ನತಿಗಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ
  • ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು
  • ಸರ್ವರ ಅಭಿವೃದ್ಧಿ ಪರ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದ ಸಚಿವ ಬಿ.ಸಿ.ನಾಗೇಶ್
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಬಿ.ಸಿ.ನಾಗೇಶ್ title=
ರಾಷ್ಟ್ರೀಯ ಶಿಕ್ಷಣ ನೀತಿ-2020

ಬೆಂಗಳೂರು: ದೇಶದ ಪ್ರಗತಿ ಹಾಗೂ ಉನ್ನತಿಗಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರವು ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಬುಧವಾರ ನಡೆದ ‘ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘ’ದ ಉದ್ಘಾಟನೆ ಹಾಗೂ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳು, ಪಾಲಕರು, ಶಿಕ್ಷಕರು, ಕೈಗಾರಿಕೆ, ಉದ್ಯಮಗಳು, ಕಂಪನಿಗಳು, ಹಲವು ಕ್ಷೇತ್ರಗಳ ತಜ್ಞರು, ಶಿಕ್ಷಣ ತಜ್ಞರು, ರಾಜಕಾರಣಿಗಳು, ಪರಿಣಿತರು ಮಾತ್ರವಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಗ್ರಾಮ ಮಟ್ಟದಲ್ಲೂ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ’ ಎಂದು ತಿಳಿಸಿದರು.

ಗ್ರಾಮ ಮಟ್ಟದಲ್ಲಿ ನೀಡಲಾಗುವ ಸಲಹೆ, ಆಲೋಚನೆಗಳು, ವಿಷಯಗಳ ಕುರಿತು ಅಭಿಪ್ರಾಯ ಪಡೆದು ಸಮಗ್ರವಾಗಿ ಪರ್ಯಾಯಲೋಚನೆ ನಡೆಸಿ ಹಲವು ಹಂತಗಳಲ್ಲಿ ಅಭಿಪ್ರಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ, ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲಿರುವ ನೂತನ ನೀತಿಯ ಅನುಷ್ಠಾನ ವಿಚಾರವನ್ನು ಶಿಕ್ಷಕರು ತಮ್ಮ ಮನಸ್ಸು ಹಾಗೂ ಹೃದಯಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ರಾಷ್ಟ್ರವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಅವಕಾಶ ನಮಗೆ ಲಭಿಸಿದೆ ಎನ್ನುವುದು ಸದಾ ಮನಸ್ಸಿನಲ್ಲಿರಬೇಕು’ ಅಂತಾ ಸಚಿವರು ತಿಳಿಸಿದರು.

ಇದನ್ನೂ ಓದಿ: ʼಪಂಚಮಸಾಲಿ ಮೀಸಲಾತಿಗೆ ಬಿಎಸ್‌ವೈ ಅಡ್ಡಿ ಪಡಿಸಿಲ್ಲʼ

‘ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ರಚಿಸಿಕೊಂಡ ಮೆಕಾಲೆ ಶಿಕ್ಷಣ ಪದ್ಧತಿಗೆ ಕೊನೆ ಹಾಡಬೇಕೆಂಬುದು ಸ್ವಾತಂತ್ರ್ಯ ಪೂರ್ವದಿಂದಲೂ ನಮ್ಮ ಹಿರಿಯರು, ಮಹನೀಯರು ಕಂಡ ಕನಸಾಗಿದೆ. ಅದನ್ನು ನನಸು ಮಾಡಲು, ಭಾರತೀಯರನ್ನು ಸ್ವಾವಲಂಬಿ, ಸ್ವಾಭಿಮಾನಿ, ಸರ್ವರ ಅಭಿವೃದ್ಧಿ ಪರವಾದ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ’ ಎಂದು ಬಿ.ಸಿ.ನಾಗೇಶ್ ಹೇಳಿದರು.   

‘ಅಭಿವೃದ್ಧಿ ಪರವಾದ, ತಾರತಮ್ಯ ರಹಿತ ಮತ್ತು ಸಮಾನ ಅವಕಾಶಗಳನ್ನು ಎಲ್ಲರಿಗೂ ನೀಡುವ ಸಮಾಜವನ್ನು ಕಟ್ಟುವ ಸಾಮರ್ಥ್ಯ, ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಿದೆ. ಉತ್ತಮ ಶಿಕ್ಷಣದ ಜೊತೆಗೆ ಭಾರತೀಯತೆ, ನೈತಿಕತೆ ಮತ್ತು ಉತ್ತಮ ಗುಣ, ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ದೇಶ, ಸಮಾಜದ ಬಗ್ಗೆ ಚಿಂತನೆ ಬದಲು ವೈಯಕ್ತಿಕ ಲಾಭ, ಸ್ವಾರ್ಥವೇ ಮೊದಲು ಎನ್ನುವ ಹಂತಕ್ಕೆ ಸಮಾಜ ಬಂದಿದೆ. ಅದನ್ನು ಬದಲಿಸಿ, ಸಮಾಜದ ಹಿತಾಸಕ್ತಿಯ, ಸಮಾಜಮುಖಿ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ’ ಎಂದು ತಿಳಿಸಿದರು.

‘ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸುಶಿಕ್ಷತರನ್ನಾಗಿಸಬೇಕು. ಶಿಕ್ಷಣ ಕೇವಲ ಉದ್ಯೋಗ ಕೊಡಿಸುವ ವ್ಯವಸ್ಥೆ ಮಾತ್ರ ಆಗಬಾರದು. ಹಿಂದಿನ ಕಾಲದಲ್ಲಿ ಮನೆ ಮನೆಗೆ ತೆರಳುತ್ತಿದ್ದ ಶಿಕ್ಷಕರು, ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಅಂತಹ ಶಿಕ್ಷಕರನ್ನು ಜನರು ಪೂಜ್ಯ ಸ್ಥಾನದಲ್ಲಿಟ್ಟು ವಿಶೇಷವಾಗಿ ಗೌರವಿಸುತ್ತಿದ್ದರು. ಅಂತಹ ಗುರುಗಳ ಬಳಿ ಕಲಿತ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡು ಸಾಧನೆ ಮಾಡಿದ ಅಸಂಖ್ಯಾತ ಉದಾಹರಣೆಗಳಿವೆ.  ಆದರೆ, ಅಂದಿನ ಪರಿಸ್ಥಿತಿ ಇಂದು ಇಲ್ಲ. ಸರ್ಕಾರಿ ಶಾಲೆಗಳಿಗೆ ಬರುವ ಎಲ್ಲ ವರ್ಗದ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಬೇಕು. ಆ ಮಕ್ಕಳು ಜೀವನ ರೂಪಿಸಿಕೊಳ್ಳುವ ಜೊತೆಗೆ ಭಾರತದ ಜವಾಬ್ದಾರಿಯುತ ಪ್ರಜೆಗಳಾಬೇಕು’ ಎಂದು ಸಚಿವರು ಸಲಹೆ ನೀಡಿದರು.

ಇದನ್ನೂ ಓದಿ: ಸರ್ಕಾರದ ವಿರುದ್ದ ಕೈ ಅಭಿಯಾನ.! ಪೇ-ಸಿಎಂ ಶೀರ್ಷಿಕೆಯ QR ಕೋಡ್ ಪೋಸ್ಟರ್‌ ಅಂಟಿಸಿದ ಕಾಂಗ್ರೆಸ್

‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ’ ಅಂತಾ ಸಚಿವ ಬಿ.ಸಿ.ನಾಗೇಶ್ ಇದೇ ವೇಳೆ ತಿಳಿಸಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಪುಟ್ಟಣ್ಣ, ಚಿದಾನಂದಗೌಡ, ಅ.ದೇವೇಗೌಡ, ಎಸ್‌.ಎಲ್.ಬೋಜೇಗೌಡ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News