Karnataka Hijab Row:ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ, ಶಾಲಾ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ

Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಪೂರ್ಣ ಪೀಠ ರಚನೆ ಮಾಡಲಾಗಿದ್ದು, ಹೈಕೋರ್ಟ್​ನಿಂದ ವಿಶೇಷ ಪೂರ್ಣ ಪೀಠ ರಚನೆ ಮಾಡಿ ಆದೇಶಿಸಲಾಗಿದೆ. ಇಂದು (ಫೆಬ್ರವರಿ 10) ಮಧ್ಯಾಹ್ನ 2.30ಕ್ಕೆ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

Written by - Malathesha M | Edited by - Chetana Devarmani | Last Updated : Feb 10, 2022, 09:04 AM IST
  • ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ
  • ಈ ಹಿಂದೆ ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಇಂದು ರಜೆ ಘೋಷಿಸಲಾಗಿದೆ
  • ಬೆಂಗಳೂರಿನ ಶಾಲಾ-ಕಾಲೇಜುಗಳ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ
Karnataka Hijab Row:ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ, ಶಾಲಾ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ  title=
ಹಿಜಾಬ್ ವಿವಾದ

ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಹಿಜಾಬ್ ವಿವಾದ (Karantaka Hijab Row) ತಾರಕಕ್ಕೇರಿದೆ. ಈ ವಿವಾದದ ಕುರಿತಾದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ವೈಯಕ್ತಿಕ ಕಾನೂನಿನ ಕೆಲವು ಅಂಶಗಳ ದೃಷ್ಟಿಯಿಂದ ಈ ವಿಷಯಗಳು ಮೂಲಭೂತ ಪ್ರಾಮುಖ್ಯತೆಯ ಕೆಲವು ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು. 

ಇದನ್ನೂ ಓದಿ: ಹಿಜಾಬ್ ವಿವಾದ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ

ಈ ದೃಷ್ಟಿಯಿಂದ ಈ ಪ್ರಕರಣ ವಿಸ್ತೃತ ಪೀಠದಲ್ಲಿ (Full Bench) ವಿಚಾರಣೆಗೆ ಯೋಗ್ಯವಾಗಿದೆ. ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್​​ಗೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ (Justice Krishna S Dixit) ನಿನ್ನೆ ನಿರ್ದೇಶನ ನೀಡಿದ್ದರು. 

ಪೂರ್ಣ ಪೀಠ ರಚನೆ: 

ಹಿಜಾಬ್ ವಿವಾದದ ವಿಚಾರಣೆಗೆ ಪೂರ್ಣ ಪೀಠ ರಚನೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠ (Three Member Bench) ರಚಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್. ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರ ಪೂರ್ಣ ಪೀಠ ರಚನೆ ಮಾಡಲಾಗಿದೆ. ಹೈಕೋರ್ಟ್​ನಿಂದ (Karnataka High Court) ವಿಶೇಷ ಪೂರ್ಣ ಪೀಠ ರಚನೆ ಮಾಡಿ ಆದೇಶ ನೀಡಲಾಗಿದ್ದು, ಇಂದು ಮಧ್ಯಾಹ್ನ 2.30ಕ್ಕೆ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

ಎರಡು ವಾರಗಳ ಕಾಲ ಪ್ರತಿಭಟನೆಗೆ ನಿಷೇಧ:

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬಳಕೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಗದ್ದಲದ ನಡುವೆ ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಶಿಕ್ಷಣ ಸಂಸ್ಥೆಗಳ ಬಳಿ ಎಲ್ಲಾ ಸಭೆಗಳು ಮತ್ತು ಪ್ರತಿಭಟನೆಗಳನ್ನು (Protest) ಪೊಲೀಸರು ನಿಷೇಧಿಸಿದ್ದಾರೆ. ಅಲ್ಲದೆ ಈಗಾಗಲೇ ಮೂರು ದಿನಗಳ ಕಾಲ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.  

ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ-ಕಾಲೇಜು ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ಆದೇಶ ನೀಡಿದ್ದಾರೆ. 

ಉಡುಪಿಯಲ್ಲಿ ಮೊದಲು ಕಾಣಿಸಿಕೊಂಡ ಹಿಜಾಬ್ ವಿವಾದ:

ಮಂಗಳವಾರ ಕ್ಯಾಂಪಸ್‌ಗಳಲ್ಲಿ ಅಶಾಂತಿ ಸೃಷ್ಟಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವು ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ದ ವಿದ್ಯಾರ್ಥಿ ಘಟಕವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಡೆಗೆ ಬೆರಳು ತೋರಿಸಿದೆ. ಇದರ ನಂತರ ಮೂರು ದಿನಗಳ ಕಾಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘ ಪರಿವಾರದವರು ತೊಂದರೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: Hijab Controversy: ಕ್ಯಾಮರಾ ನೋಡಿ 'ಅಲ್ಲಾಹು ಅಕ್ಬರ್' ಕೂಗಿದ ವಿದ್ಯಾರ್ಥಿನಿ, ಉತ್ತರ ರೂಪದಲ್ಲಿ ಬಂತು 'ಜೈ ಶ್ರೀರಾಮ್', ಕಿಚ್ಚು ಹೆಚ್ಚಿಸುತ್ತಿರುವ ಹಿಜಾಬ್ ವಿವಾದ

ಉಡುಪಿಯಲ್ಲಿ (Udupi) ಮೊದಲು ಕಾಣಿಸಿಕೊಂಡ ಹಿಜಾಬ್ ವಿವಾದವನ್ನು ಸ್ಥಳೀಯವಾಗಿ ಪರಿಹರಿಸಬಹುದಾಗಿತ್ತು ಮತ್ತು ಅದನ್ನು ಇತರ ಜಿಲ್ಲೆಗಳಿಗೆ ಹರಡಲು ಸಂಘಪರಿವಾರದ ಸಂಘಟನೆಗಳು ಕಾರಣವಾಗಿವೆ ಎಂದು ಸಿಎಫ್‌ಐ ಕರ್ನಾಟಕ ರಾಜ್ಯ ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಹೇಳಿದ್ದಾರೆ.

ಉಡುಪಿಯ ಕಾಲೇಜೊಂದರಲ್ಲಿ ಹೆಣ್ಣು ಮಕ್ಕಳ  ಗುಂಪು ಹಿಜಾಬ್ (Hijab) ತೊಟ್ಟು ಕಾಲೇಜಿನೊಳಗೆ ಪ್ರವೇಶಿಸುತ್ತಿದ್ದಾಗ ಅವರು ಹಿಜಾಬ್ ಧರಿಸಿದ್ದನ್ನು ಒಪ್ಪದೆ ಅವರಿಗೆ ಪ್ರವೇಶ ನಿರಾಕರಿಸಿದ್ದಾಗಿನಿಂದ ಈ ವಿವಾದ ಪ್ರಾರಂಭವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News