ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಬಂಧನ

ಬಾರ್‌ವೊಂದರಲ್ಲಿ ಸ್ನೇಹಿತ ಸುನಿಲ್‌ನೊಂದಿಗೆ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಆರೋಪದಲ್ಲಿ ಕಿಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

Last Updated : Mar 3, 2018, 05:02 PM IST
ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಬಂಧನ title=

ಬೆಂಗಳೂರು: ಅಪಹರಣ ಮತ್ತು ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್‌ ಸ್ಪರ್ಧಿ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನ ಭಾರತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಾರ್‌ವೊಂದರಲ್ಲಿ ಸ್ನೇಹಿತ ಸುನಿಲ್‌ನೊಂದಿಗೆ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಆರೋಪದಲ್ಲಿ ಕಿಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಕಿಟ್ಟಿ ಸ್ನೇಹಿತ ಸುನಿಲ್ ಎಂಬುವರ ಪತ್ನಿ, ತೌಸಿತ್​ ಎಂಬುವವರೊಡನೆ ಮಾಳಗಾಳದ ಕುಟೀರ್​ ಪಾರ್ಕ್​ ರೆಸ್ಟೊರೆಂಟ್​ಗೆ ಊಟಕ್ಕೆ ಆಗಾಗ್ಗೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಕುರಿತು ತೌಸಿತ್​ ಯಾರು ಎಂಬುದನ್ನು ತಿಳಿದುಕೊಳ್ಳಲು ಫೆ.28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನಾಮಿ ಹಾಗೂ ತಂಡ ಕುಟೀರ ಪಾರ್ಕ್​ ಲ್ಯಾಂಡ್​ ಬಾರ್​ಗೆ ತೆರಳಿ, ಅಲ್ಲಿನ ಬಾರ್​ ಸಪ್ಲೈಯರ್​ ಗಿರೀಶ್​ನನ್ನೇ ತೌಸಿತ್ ಎಂದು ತಿಳಿದು ಅಪಹರಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 

ನಂತರ ಆತ ತೌಸಿತ್​ ಅಲ್ಲ ಎಂದು ಅರಿವಾದ ನಂತರ ಆ ಸಪ್ಲೈಯರ್ ಗೆ ತೌಸಿತ್'ನನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ನಂತರ ತೌಸಿತ್​​ ಬಂದ ಮೇಲೆ ಇಬ್ಬರನ್ನೂ ಹೊರಮಾವು ಬಳಿಯಿರುವ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ, ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿ ನನ್ನನ್ನು ಬಿಟ್ಟರು ಎಂದು ದೂರುದಾರ ಗಿರೀಶ್​ ಪೊಲೀಸರಿಗೆ ನೀಡಿರುವ ದೂರಿನಲ್ಲಿ ​ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಿಟ್ಟಿ ಹಾಗೂ ಸ್ನೇಹಿತರ ವಿರುದ್ಧ ದೂರು ದಾಖಲಾಗಿದ್ದು, ಇಂದು ಜ್ಞಾನಭಾರತಿ ಪೊಲೀಸರು ಕಿಟ್ಟಿ, ಸಂತೋಷ್, ಅರ್ಜುನ ಮತ್ತು ನಾಗೇಂದ್ರ ಎಂಬುವವರನ್ನು ಬಂಧಿಸಿದ್ದಾರೆ. ಸುನಿಲ್‌ಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ. 

Trending News