ಕರೋನಾ ಹಿನ್ನಲೆಯಲ್ಲಿ ಸರಳ ದಸರಾ: ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಜರುಗಿದ ಜಂಬೂ ಸವಾರಿ

410 ವರ್ಷಗಳ ದಸರಾ ಇತಿಹಾಸದಲ್ಲಿ 13ನೇ ಬಾರಿಗೆ ಸರಳ ದಸರಾ ಆಚರಿಸಲಾಗಿದೆ. ಇದಕ್ಕೂ ಮೊದಲು 12 ಬಾರಿ ಸರಳ ದಸರಾ ಆಚರಿಸಲಾಗಿತ್ತು. 

Last Updated : Oct 26, 2020, 05:28 PM IST
  • 410 ವರ್ಷಗಳ ದಸರಾ ಇತಿಹಾಸದಲ್ಲಿ 13ನೇ ಬಾರಿಗೆ ಸರಳ ದಸರಾ ಆಚರಿಸಲಾಗಿದೆ.
  • ಈ ಬಾರಿಯ ಜಂಬೂ ಸವಾರಿ ಕೇವಲ 23 ನಿಮಿಷಗಳಲ್ಲಿ ಕೊನೆಗೊಂಡಿತು.
  • ಮೈಸೂರು ಅರಮನೆಯ ಬಲರಾಮದ್ವಾರದಲ್ಲಿ ಜಂಬೂ ಸವಾರಿ ವಿಧ್ಯುಕ್ತವಾಗಿ ಕೊನೆಗೊಂಡಿತು.
ಕರೋನಾ ಹಿನ್ನಲೆಯಲ್ಲಿ ಸರಳ ದಸರಾ: ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಜರುಗಿದ ಜಂಬೂ ಸವಾರಿ title=
Image courtesy: @DDChandanaNews

ಮೈಸೂರು: ಮೈಸೂರು ದಸರಾ ಎಂದರೆ ಅದೊಂದು ಬಹುದೊಡ್ಡ ಹಬ್ಬ. ಅದರಲ್ಲೂ ಜಂಬೂ ಸವಾರಿಯ ಮೆರುಗು ಮಾತ್ರ ಅವಿಸ್ಮರಣೀಯ. ಅದೇ ಕಾರಣಕ್ಕೆ ಮೈಸೂರು ದಸರಾ (Mysore Dasara) ವಿಶ್ವ ವಿಖ್ಯಾತವಾಗಿದ್ದು ಜಗತ್ತಿನ ಮೂಲೆ ಮೂಲೆಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಕರೋನ ಕರಿಛಾಯೆಯ ಕಾರಣದಿಂದ ಈ ವರ್ಷ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಜಂಬೂ ಸವಾರಿ ಎಂದಿನಂತಿರಲಿಲ್ಲ. ವಿಶ್ವವನ್ನೇ ಬಾಧಿಸಿರುವ ಕರೋನ ಮಹಾಮಾರಿಯ ಕರಿಛಾಯೆ ಈ ಸಲ ಮೈಸೂರು ದಸರಾವನ್ನೂ ಆವರಿಸಿತ್ತು.

'ದಸರಾ'ಹಬ್ಬವನ್ನು ವಿಜಯದಶಮಿ ಎನ್ನಲು ಕಾರಣ ಏನು ಗೊತ್ತಾ?

410 ವರ್ಷಗಳ ದಸರಾ ಇತಿಹಾಸದಲ್ಲಿ 13ನೇ ಬಾರಿಗೆ ಸರಳ ದಸರಾ ಆಚರಿಸಲಾಗಿದೆ. ಇದಕ್ಕೂ ಮೊದಲು 12 ಬಾರಿ ಸರಳ ದಸರಾ ಆಚರಿಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಜಂಬೂ ಸವಾರಿ ಸಂಭ್ರಮವನ್ನು ಟಿವಿ, ವಾರ್ತಾ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲೇ ಕಣ್ತುಂಬಿಕೊಳ್ಳಬೇಕಾಯಿತು.

ಕೇವಲ 23 ನಿಮಿಷಗಳಲ್ಲಿ ಮುಕ್ತಾಯಗೊಂಡ ಜಂಬೂ ಸವಾರಿ:
ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಬಹಳ ಸರಳವಾಗಿ ನಡೆಯಿತು. ಕೇವಲ 23 ನಿಮಿಷಗಳಲ್ಲಿ ಈ ಬಾರಿಯ ಜಂಬೂ ಸವಾರಿ (Jambu Savari) ಕೊನೆಗೊಂಡಿತು. ಮೈಸೂರು ಅರಮನೆಯ ಬಲರಾಮದ್ವಾರದಲ್ಲಿ ಜಂಬೂ ಸವಾರಿ ವಿಧ್ಯುಕ್ತವಾಗಿ ಕೊನೆಗೊಂಡಿತು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯ ಮೇಲೆ ಸರ್ವಾಲಂಕಾರ ಭೂಷಿತಳಾಗಿ ವಿರಾಜಿತಳಾದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಅರಮನೆಯ ಆವರಣದಲ್ಲಿ ಸಾಗಿತು.

ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ

ಇದೇ ಮೊದಲ ಬಾರಿಗೆ ಗಜರಾಜ ಅಭಿಮನ್ಯು ಅಂಬಾರಿ ಹೊತ್ತು ಅರಮನೆ ಆವರಣದಲ್ಲಿ ಹೆಜ್ಜೆ ರಾಜಗಾಂಬಿರ್ಯದಿಂದ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ವಿಜಯಾ ಮತ್ತು ಕಾವೇರಿ ಸಾಥ್ ನೀಡಿತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ತಾಯಿಯ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಅಂಬಾ ವಿಲಾಸ ಅರಮನೆ ಆವರಣದ 400 ಮೀಟರ್ ನಲ್ಲಿ ಮೆರವಣಿಗೆ ಸಾಗಿತು. ಪ್ರತಿ ಬಾರಿ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಮೆರವಣಿಗೆ ವೀಕ್ಷಿಸಲು ಕೂಡಾ ಕೇವಲ 300 ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು

ಮಧ್ಯಾಹ್ನ 2.50ರ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಅಂಬಾರಿಯಲ್ಲಿ ಅಲಂಕೃತಗೊಂಡಿರುವ ನಾಡ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಸಿಎಂ ಚಾಲನೆ ನೀಡಿದರು. ಈ ಬಾರಿ ಪುಷ್ಪಾರ್ಚನೆಗೆ ಕೂಡಾ ಮುಖ್ಯಮಂತ್ರಿಗಳು ಸೇರಿದಂತೆ ಕೇವಲ 6 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಇದಕ್ಕೂ ಮುನ್ನ ಬೆಳಿಗ್ಗೆ 9. 30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು, ಆನೆ ಅರಮನೆ ದ್ವಾರಕ್ಕೆ ಕರೆತರಲಾಗಿತ್ತು. ಪೊಲೀಸ್ ಭದ್ರತೆಯಲ್ಲಿ ತಾಯಿ ಉತ್ಸವ ಮೂರ್ತಿಯನ್ನು ಕೂಡಾ ಅರಮನೆ ಆವರಣಕ್ಕೆ ತರಲಾಯಿತು. ದಾರಿ ಮಧ್ಯೆ ಸಾರ್ವಜನಿಕರು ದೇವಿಗೆ ಪೂಜೆ ಸಲ್ಲಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ 2 ಸ್ಥಬ್ಧಚಿತ್ರ ಮತ್ತು 5 ಕಲಾ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲನೇ ಸ್ತಬ್ಧಚಿತ್ರ ಅರಮನೆಯ ಸಾಂಪ್ರದಾಯಿಕ ಶೈಲಿಯ ಆನೆ ಗಾಡಿಯ ಸ್ತಬ್ಧಚಿತ್ರ, ಎರಡನೆಯದ್ದು ಕೊರೊನಾ ವಾರಿಯರ್ಸ್ ಮತ್ತು ಕೊರೊನಾ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರ. ಈ ಬಾರಿ ವಜ್ರ ಮುಷ್ಠಿ ಕಾಳಗವನ್ನು ಕೂಡಾ ರದ್ದುಗೊಳಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಭೀತಿಯಿಂದ ಅರಮನೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು.

Trending News