ನವದೆಹಲಿ: ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಕಾರ್ಯವನ್ನು ದೇಶಾದ್ಯಂತ ಧಾರ್ಮಿಕ ದೃಷ್ಟಿಯಿಂದ ನಡೆಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಈ ವಿಚಾರವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯ ಅಹಮದ್ ಹಸನ್ ಅವರ ಪ್ರಶ್ನೆಗೆ ಅವರು ಉತ್ತರಿಸಿದ್ದು, ಧಾರ್ಮಿಕ ದೃಷ್ಟಿಯಿಂದ ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿ ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೇ ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವ ನಿತ್ಯಾನಂದ್ ರೈ ಅಂತಹ ಯಾವುದೇ ಉದ್ದೇಶ ಇಲ್ಲವೆಂದು ಹೇಳಿದರು.
ಈ ಕಾರ್ಯಾಚರಣೆಗಾಗಿ ದೇಶಾದ್ಯಂತ ಬಂಧನ ಕೇಂದ್ರಗಳಿಗೆ ಸ್ಥಳಗಳನ್ನು ಸರ್ಕಾರ ಗುರುತಿಸಿದೆ ಮತ್ತು ಹಾಗಿದ್ದಲ್ಲಿ, ಮುಂದಿನ ಐದು ವರ್ಷಗಳಲ್ಲಿ ರಾಜ್ಯವಾರು ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿರುವ ಬಗ್ಗೆ ಟಿಎಂಸಿ ಸದಸ್ಯರು ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು ಬಂಧನ ಕೇಂದ್ರಗಳನ್ನು ತನ್ನ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ಥಾಪಿಸಿವೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದರು.