ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಮಲ ನಾಯಕರ ಪರ ಪ್ರಚಾರ ಮಾಡಲು ಮೇ. 1ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯ ನಾಯಕರ ಬಹುತೇಕ ಅಸ್ತ್ರಗಳು ಖಾಲಿಯಾಗಿದ್ದು, ಈಗ ಬಿಜೆಪಿ ನಾಯಕರ ಬಳಿ ಇರುವುದು ಪ್ರಧಾನಿ ಮೋದಿ ಎಂಬ ಬ್ರಹ್ಮಾಸ್ತ್ರ. ಪ್ರಧಾನಿ ಮೋದಿ ಹವಾ ಬಳಸಿಕೊಂಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜುಗೊಂಡಿರುವ ಕಮಲ ಪಡೆ, ಕರ್ನಾಟಕದಲ್ಲಿ ತನ್ನ ವಿಜಯದೊಂದಿಗೆ 'ಕಾಂಗ್ರೆಸ್ ಮುಕ್ತ ಕರ್ನಾಟಕ'ದ ಉದ್ದೇಶ ಹೊಂದಿದೆ.
ದಿನ ಬಿಟ್ಟು ದಿನ ಐದು ದಿನಗಳಲ್ಲಿ 15 ರ್ಯಾಲಿಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದು, ರಾಜ್ಯದ ವಿವಿಧೆಡೆ ಹಲವು ಬಹಿರಂಗ ಸಭೆ, ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಎರಡು ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ರಾಜ್ಯ ಪ್ರವಾಸದ ವೇಳಾಪಟ್ಟಿ;
* ಮೇ 1- ಚಾಮರಾಜನಗರ, ಉಡುಪಿ, ಬೆಳಗಾವಿ.
* ಮೇ 3- ಗುಲ್ಬರ್ಗ, ಬಳ್ಳಾರಿ, ಬೆಂಗಳೂರು.
* ಮೇ ೦5 - ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ.
* ಮೇ ೦7 - ರಾಯಚೂರು, ಚಿತ್ರದುರ್ಗ, ಕೋಲಾರ.
* ಮೇ ೦8 - ಬಿಜಾಪುರ, ಮಂಗಳೂರು, ಬೆಂಗಳೂರು.
ಪ್ರಧಾನಿ ಮೋದಿಯವರು ಮೇ. 1 ರಿಂದ ಮೇ. 8 ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಮಯದಲ್ಲಿ ಸುಮಾರು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.