Afghanistan Crisis: ಪಂಜ್​ಶೀರ್ ವಶಕ್ಕೆ ಯತ್ನಿಸಿದ್ದ 600ಕ್ಕೂ ಹೆಚ್ಚು ತಾಲಿಬಾನ್ ಉಗ್ರರ ಹತ್ಯೆ!

ಪಂಜಶೀರ್ ಪ್ರಾಂತ್ಯ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ(NRFA) ತಾಲಿಬಾನಿಗಳಿಗೆ ದೊಡ್ಡ ಕಂಟಕವಾಗಿದ್ದಾರೆ.

Written by - Puttaraj K Alur | Last Updated : Sep 5, 2021, 12:03 PM IST
  • ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯ ಪಂಜ್​ಶೀರ್​​​ ವಶಕ್ಕೆ ಮುಂದಾಗಿದ್ದ ತಾಲಿಬಾನ್​ಗೆ ಭಾರೀ ಹಿನ್ನಡೆ
  • ಪಂಜಶೀರ್‌ನ ವಿವಿಧ ಜಿಲ್ಲೆಗಳಲ್ಲಿ ಸುಮಾರು 600 ತಾಲಿಬಾನಿಗಳನ್ನು ಹತ್ಯೆ ಮಾಡಿದ ಉತ್ತರ ಪ್ರತಿರೋಧ ಪಡೆ
  • 1,000ಕ್ಕೂ ಹೆಚ್ಚು ತಾಲಿಬಾನ್‌ಗಳನ್ನು ಸೆರೆಹಿಡಿಯಲಾಗಿದೆ ಎಂದ ಉತ್ತರ ಪ್ರತಿರೋಧ ಪಡೆಗಳ ವಕ್ತಾರ ಫಾಹಿಂ ದಷ್ಟಿ
Afghanistan Crisis: ಪಂಜ್​ಶೀರ್ ವಶಕ್ಕೆ ಯತ್ನಿಸಿದ್ದ 600ಕ್ಕೂ ಹೆಚ್ಚು ತಾಲಿಬಾನ್ ಉಗ್ರರ ಹತ್ಯೆ! title=
ಪಂಜ್​ಶೀರ್​​​ ವಶಕ್ಕೆ ಮುಂದಾಗಿದ್ದ ತಾಲಿಬಾನ್​ಗೆ ಹಿನ್ನಡೆ (Photo Courtesy: @Zee News)

ಕಾಬೂಲ್: ಅಫ್ಘಾನಿಸ್ತಾನ(Afghanistan)ದ ಈಶಾನ್ಯ ಪ್ರಾಂತ್ಯದ ಪಂಜ್​ಶೀರ್​​​ ವಶಕ್ಕೆ ಮುಂದಾಗಿದ್ದ ತಾಲಿಬಾನ್​ಗೆ ಭಾರೀ ಹಿನ್ನಡೆಯುಂಟಾಗಿದೆ. 600ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ(NRFA) ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಪಂಜಶೀರ್‌(Panjshir)ನ ವಿವಿಧ ಜಿಲ್ಲೆಗಳಲ್ಲಿ ಸುಮಾರು 600 ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ. 1,000 ಕ್ಕೂ ಹೆಚ್ಚು ತಾಲಿಬಾನ್‌ಗಳನ್ನು ಸೆರೆಹಿಡಿಯಲಾಗಿದೆ  ಎಂದು ಉತ್ತರ ಪ್ರತಿರೋಧ ಪಡೆಗಳ ವಕ್ತಾರ ಫಾಹಿಂ ದಷ್ಟಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪಂಜಶೀರ್‌ ವಶಕ್ಕೆ ಮುಂದಾಗಿದ್ದ ತಾಲಿಬಾನ್ ಭಯೋತ್ಪಾದಕರಿಗೆ ಪ್ರತಿರೋಧ ಪಡೆಯ ನಾಯಕ ಅಹ್ಮದ್ ಮಸೂದ್ ದೊಡ್ಡ ಹೊಡೆತವನ್ನೇ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇತರ ಅಫ್ಘಾನ್ ಪ್ರಾಂತ್ಯಗಳಿಂದ ಸರಬರಾಜು ಪಡೆಯುವಲ್ಲಿ ತಾಲಿಬಾನ್‌(Taliban)ಗಳಿಗೆ ಸಮಸ್ಯೆಗಳಿವೆ ಎಂದು ವಕ್ತಾರರು ಟ್ವೀಟ್ ನಲ್ಲಿ ತಿಳಿಸಿದ್ದಾರೆಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಏತನ್ಮಧ್ಯೆ ಭೂ ಗಣಿಗಳು ಇರುವುದರಿಂದ ಈ ಪ್ರದೇಶದಲ್ಲಿ ಪಂಜಶೀರ್ ಪ್ರತಿರೋಧ ಪಡೆಗಳ ವಿರುದ್ಧ ತಾಲಿಬಾನ್ ಆಕ್ರಮಣವು ನಿಧಾನವಾಗಿದೆ.

ಇದನ್ನೂ ಓದಿ: Afghanistan Crisis: ತಾಲಿಬಾನ್ ಗುಂಡಿನ ದಾಳಿಗೆ ಮಕ್ಕಳು ಸೇರಿ 17 ಮಂದಿ ಬಲಿ..!

ತಾಲಿಬಾನ್ ಉಗ್ರರು ಪಂಜ್‌ಶಿರ್‌ನಲ್ಲಿ ಹೋರಾಟ ಮುಂದುವರಿಸಿದ್ದಾರೆ. ಆದರೆ ರಾಜಧಾನಿ ಬಜಾರಕ್ ಮತ್ತು ಪ್ರಾಂತೀಯ ಗವರ್ನರ್ ಕಚೇರಿಗೆ ಹೋಗುವ ದಾರಿಯಲ್ಲಿ ಭೂ ಗಣಿಗಳು ಇರುವುದರಿಂದ ಕಾರ್ಯಾಚರಣೆಯನ್ನು ನಿಧಾನಗೊಳಿಸಲಾಗಿದೆ ಎಂದು ವರದಿಯಾಗಿದೆ.  ಕಾಬೂಲ್(Kabul) ನಗರದಿಂದ ಸುಮಾರು 150 ಕಿ.ಮೀ ದೂರವಿರುವ ಪಂಜಶೀರ್ ರಾಷ್ಟ್ರೀಯ ಪ್ರತಿರೋಧದ ಮುಂಚೂಣಿ ಪ್ರದೇಶವಾಗಿದೆ. ಅಫ್ಘಾನಿಸ್ತಾನದ ಮಾಜಿ ಗೆರಿಲ್ಲಾ ಕಮಾಂಡರ್ ಅಹ್ಮದ್ ಶಾ ಮಸೂದ್(Ahmad Shah Massoud) ಅವರ ಪುತ್ರ ಅಹ್ಮದ್ ಮಸೂದ್ ಮತ್ತು ತನ್ನನ್ನು ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ತಾಲಿಬಾನ್(Taliban) ಗೆ ಸವಾಲು ಒಡ್ಡಿದ್ದಾರೆ.

ಇದನ್ನೂ ಓದಿ: Eastern Economic Forum: 'ಭಾರತ-ರಷ್ಯಾ ಸ್ನೇಹ ಸಂಬಂಧವು ಕಷ್ಟಕರ ಸಂದರ್ಭಲ್ಲಿಯೂ ಗಟ್ಟಿಯಾಗಿದೆ'

ಪಂಜಶೀರ್ ಪ್ರಾಂತ್ಯವನ್ನು ನಾವು ವಶಪಡಿಸಿಕೊಂಡಿದ್ದೇವೆ. ಅಮರುಲ್ಲಾ ಸಲೇಹ್(Amrullah Saleh) ದೇಶಬಿಟ್ಟು ಪಲಾಯನ ಮಾಡಿದ್ದಾರೆ ಎಂಬ ತಾಲಿಬಾನ್ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ‘ನಾನು ಆಫ್ಘಾನಿಸ್ತಾನ ತೊರೆದಿದ್ದೇನೆ ಎನ್ನುವರ ವರದಿಗಳು ಸತ್ಯಕ್ಕೆ ದೂರವಾಗಿದೆ. ನಾನು ಎಲ್ಲೂ ಹೋಗಿಲ್ಲ, ಪಂಜಶೀರ್ ಕಣಿವೆಯಲ್ಲಿಯೇ ಇದ್ದೇನೆ. ಸದ್ಯ ಪರಿಸ್ಥಿತಿ ಉತ್ತಮವಾಗಿಲ್ಲ ಅನ್ನೋದು ನಿಜ. ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಉಗ್ರರ ಕೈವಶದಲ್ಲಿದ್ದೇವೆ. ಆದರೆ ಅಂತಿಮ ಕ್ಷಣದವರೆಗೆ ನಾವು ಹೋರಾಡುತ್ತೇನೆ. ನನ್ನ ನೆಲದಲ್ಲಿಯೇ ನಿಂತು ತಾಲಿಬಾನ್ ವಿರುದ್ಧ ಹೋರಾಡುತ್ತೇನೆ’ ಎಂದು ಅಮರುಲ್ಲಾ ಸಲೇಹ್ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಪಂಜಶೀರ್(Panjshir) ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ(NRFA) ತಾಲಿಬಾನಿಗಳಿಗೆ ದೊಡ್ಡ ಕಂಟಕವಾಗಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ತಾಲಿಬಾನಿಗಳ ವಿರುದ್ಧ ಹೋರಾಡುತ್ತೇನೆ ಎಂದು ಪ್ರತಿರೋಧ ಪಡೆಯ ನಾಯಕ ಅಹ್ಮದ್ ಮಸೂದ್ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News