ಬೆಂಬಲಿತ ಶಾಸಕರನ್ನು ಮುಂಬೈನಿಂದ ಬೇರೆಡೆ ಕರೆದೊಯ್ಯಲು ಅಜಿತ್ ಪವಾರ್ ಸಿದ್ಧತೆ!

ಎನ್‌ಸಿಪಿ ಮುಖಂಡ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಬೆಂಬಲಿತ ಶಾಸಕರನ್ನು ಮುಂಬೈಯಿಂದ ಹೊರಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.

Last Updated : Nov 23, 2019, 04:40 PM IST
ಬೆಂಬಲಿತ ಶಾಸಕರನ್ನು ಮುಂಬೈನಿಂದ ಬೇರೆಡೆ ಕರೆದೊಯ್ಯಲು ಅಜಿತ್ ಪವಾರ್ ಸಿದ್ಧತೆ! title=
Photo courtesy: ANI

ಮುಂಬೈ: ಎನ್‌ಸಿಪಿ ಮುಖಂಡ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಬೆಂಬಲಿತ ಶಾಸಕರನ್ನು ಮುಂಬೈಯಿಂದ ಹೊರಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಅಜಿತ್ ತಮ್ಮ ಬೆಂಬಲಿತ ಶಾಸಕರನ್ನು ಗೋವಾಕ್ಕೆ ಕರೆದೊಯ್ಯುತ್ತಿದ್ದಾರೆ.

ಮೂಲಗಳ ಪ್ರಕಾರ, ಅಜಿತ್ ಪವಾರ್ ಅವರ ಬೆಂಬಲಿಗರು ಧನಂಜಯ್ ಮುಂಡೆ ಅವರೊಂದಿಗೆ ಇದ್ದಾರೆ. ಅವರನ್ನು ಖಾಸಗಿ ಚಾರ್ಟರ್ ವಿಮಾನದ ಮೂಲಕ ಗೋವಾಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಲಾಗುತ್ತಿದೆ.

ಅದೇ ಸಮಯದಲ್ಲಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಅವರ ಬೆಂಬಲಿತ ಶಾಸಕರೊಂದಿಗೆ ಕೆಲ ಕಾಂಗ್ರೆಸ್ ಎಂಎಲ್ಎಗಳು ಕೂಡ ಇದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ ಮೈ ಎಲ್ಲಾ ಕಣ್ಣಾಗಿರುವ ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಮಹಾರಾಷ್ಟ್ರದಿಂದ ಹೊರಗೆ ಕಳುಹಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ತನ್ನ ಶಾಸಕರನ್ನು ಸಂಜೆ 5 ಗಂಟೆಗೆ ಭೋಪಾಲ್‌ಗೆ ಕರೆದೊಯ್ಯಲಿದೆ.

ಶನಿವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಯಾರೂ ಊಹಿಸದ ರೀತಿ ಸರ್ಕಾರ ರಚನೆಯಾಗಿದೆ. ಶುಕ್ರವಾರ ತಡರಾತ್ರಿವರೆಗೂ ಮಾತುಕತೆ ನಡೆಸಿದ್ದ ಕಾಂಗ್ರೆಸ್-ಎನ್‌ಸಿಪಿ ಮತ್ತು ಶಿವಸೇನೆ ಸರ್ಕಾರ ರಚನೆಗೆ ಇಂದು ಹಕ್ಕು ಮಂಡಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದೇಶದ ಜನರು ಬೆಳಿಗ್ಗೆ ಎಚ್ಚರವಾದಾಗ, ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸಿದ ನಂತರ ದೇವೇಂದ್ರ ಫಡ್ನವೀಸ್, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಶಿವಸೇನೆ ಚುನಾವಣೆಯ ನಂತರ ಜನಾದೇಶವನ್ನು ತಿರಸ್ಕರಿಸಿದೆ ಎಂದು ಹೇಳಿದರು. ಶಿವಸೇನೆ ಇತರ ಕೆಲವು ಪಕ್ಷಗಳೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸಿತು, ಈ ಕಾರಣದಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಲಾಯಿತು ಎಂದು ಹೇಳಿದರು.

ಅಲ್ಲದೆ, ಈ ಮೂರು ಪಕ್ಷಗಳಿಂದ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದರು. "ಅಜಿತ್ ಪವಾರ್ ಮತ್ತು ಇತರರ ಬೆಂಬಲದೊಂದಿಗೆ ನಾವು ರಾಜ್ಯಪಾಲರಿಗೆ ಪಟ್ಟಿಯನ್ನು ಕಳುಹಿಸಿದ್ದೇವೆ, ಅವರು ಕೇಂದ್ರದ ಬಗ್ಗೆ ಚರ್ಚಿಸಿ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಫಡ್ನವೀಸ್ ತಿಳಿಸಿದರು.

ಅದೇ ಸಮಯದಲ್ಲಿ, ಅಜಿತ್ ಪವಾರ್ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಎಲ್ಲವನ್ನೂ ಸರಿಪಡಿಸಲು ಒಂದು ಶಾಶ್ವತ ಸರ್ಕಾರದ ಅವಶ್ಯಕತೆ ಇದೇ. ಹೀಗಾಗಿ ಬಿಜೆಪಿಗೆ ನಾವು ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಶಿವಸೇನೆ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ NCP ಮುಖ್ಯಸ್ಥ ಶರದ್ ಪವಾರ್, NCP-ಕಾಂಗ್ರೆಸ್- ಶಿವಸೇನೆ ಮೈತ್ರಿ ಸರ್ಕಾರ ರಚನೆಗೆ ಪಕ್ಷದ ಎಲ್ಲಾ ಶಾಸಕರು ಸಹಿ ಮಾಡಿದ್ದರು. ಅಜಿತ್ ಪವಾರ್ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದರಿಂದ ಇದೇ ರೀತಿಯ ಪಟ್ಟಿಯು ಅಜಿತ್ ಪವಾರ್ ಅವರ ಬಳಿಯೂ ಇತ್ತು. ಬಿಜೆಪಿ ಜೊತೆಗಿನ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ನೀಡಿರುವುದು ಅದೇ ಪಟ್ಟಿ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಖಚಿತ ಮಾಹಿತಿಯಿಲ್ಲ. ಹೀಗೂ ಆಗಿರಬಹುದು ಎಂಬುದು ನನ್ನ ಊಹೆ ಅಷ್ಟೇ. ಈ ಬಗ್ಗೆ ನಾನು ಮಾಹಿತಿ ಪಡೆಯುತ್ತೇನೆ. ರಾಜ್ಯಪಾಲರೊಂದಿಗೂ ಚರ್ಚಿಸುತ್ತೇನೆ. ಕಾನೂನಿನ ಪ್ರಕಾರ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಾನು ಈಗಲೂ ಶಿವಸೇನೆಯೊಂದಿಗೆ ಇದ್ದೇನೆ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು.
 

Trending News