ನವದೆಹಲಿ: ಆಮ್ ಆದ್ಮಿ ಪಕ್ಷದ ಸರಕಾರ ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಗುಜರಾತಿನಲ್ಲಿ ಮಾಡಿದ್ದಕಿಂತ ಅಧಿಕ ಕೆಲಸವನ್ನು ದೆಹಲಿಯಲ್ಲಿ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸೋಮವಾರದಂದು ಆಮ್ ಆದ್ಮಿ ಪಕ್ಷ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಎಲ್ಲ ಅಡೆತಡೆಗಳ ನಡುವೆಯೂ ಕೂಡ ಆಪ್ ಪಕ್ಷದ ಕಾರ್ಯಕರ್ತರು ಭ್ರಷ್ಟಾಚಾರ ಮತ್ತು ಕೋಮುವಾದ ವಿರುದ್ದ ಅಡೆತಡೆಗಳನ್ನು ಎದುರಿಸಿದ್ದಾರೆ.ದೆಹಲಿಯ ಜನರು ತಮ್ಮ ಪ್ರಾಮಾಣಿಕ ಮುಖ್ಯಮಂತ್ರಿಯ ಬಗ್ಗೆ ಹೆಮ್ಮೆಪಡುತ್ತಿದ್ದಾರೆ.ಆದ್ದರಿಂದ ಈ ವೇಳೆ ನಾನು ತಮ್ಮ ಪ್ರಧಾನಿಯ ಬಗ್ಗೆಯೂ ಕೂಡ ಈ ದೇಶದ ಜನರು ಅದೇ ಭಾವನೆಯನ್ನು ಹೊಂದಿದ್ದಾರೆಯೇ ಎನ್ನುವುದರ ಬಗ್ಗೆ ಕೇಳಲು ಇಚ್ಚಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ರಫೇಲ್ ಒಪ್ಪಂದ, ವಿಜಯ ಮಲ್ಯ ಹಾಗೂ ನೀರವ್ ಮೋದಿ ವಂಚನೆ ವಿಚಾರದಲ್ಲಿ ಬಿಜೆಪಿ ಮೌನ ತಾಳಿರುವ ಬಗ್ಗೆ ಕೇಜ್ರಿವಾಲ್ ಕಿಡಿಕಾರಿದರು.